ನನ್ನ ಮ್ಯಾಚ್ ಡಿಫರೆಂಟ್: ಡಿಕೆಶಿ
Team Udayavani, Jun 2, 2018, 6:00 AM IST
ಬೆಂಗಳೂರು: ಸಂಪುಟ ವಿಸ್ತರಣೆ ಕುರಿತು ಹಿರಿಯ ನಾಯಕರು ನಡೆಸಿದ ಸಭೆಗೆ ತಮ್ಮನ್ನು ಯಾರೂ ಕರೆದಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ನನ್ನ ಮ್ಯಾಚ್ ಡಿಫರೆಂಟ್, ನನ್ನ ಟಾರ್ಗೆಟ್ ಡಿಫರೆಂಟ್’ ಎಂದು ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯ ಮಗಳೊಂದಿಗೆ ಮಾತನಾಡಿ, “ಕಾಂಗ್ರೆ ಸ್ನ 78 ಶಾಸಕರಲ್ಲಿ ನಾನೂ ಒಬ್ಬ. ನನಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದರೂ ಒಂದೇ, ನೀಡದಿದ್ದರೂ ಒಂದೇ. ನಾನು ಪಕ್ಷದ ನಂಬಿಗಸ್ಥ. ಪಕ್ಷ ಹೇಳುವ ಕೆಲಸ ಮಾಡಲು ಸಿದ್ಧ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು’ ಎಂದು ತಿಳಿಸಿದರು. ಸಂಪುಟದ ಖಾತೆಗಳಿಗೆ ಸಂಬಂಧಿಸಿದಂತೆ ಇಂಧನ ಖಾತೆಗಾಗಿ ನಿಮ್ಮ ಹಾಗೂ ಎಚ್ .ಡಿ.ರೇವಣ್ಣ ನಡುವೆ ಪೈಪೋಟಿ ಇದೆಯಂತೆ ಎಂಬ ಪ್ರಶ್ನೆಗೆ, “ಎಚ್.ಡಿ.ರೇವಣ್ಣ ಜತೆ ನನ್ನನ್ನು ಯಾಕೆ ಹೋಲಿಕೆ ಮಾಡ್ತೀರಿ. ಅವರು ದೊಡ್ಡ ಕುಟುಂಬದ ಮಕ್ಕಳು, ನಾನು ಸಾಮಾನ್ಯ ರೈತನ ಮಗ’ ಎಂದು ಹೇಳಿದರು.
ಅಧಿಕಾರಿಗಳ ಒತ್ತಡ: ತಮ್ಮ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದ್ದು, ತಮ್ಮ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರ ಹೆಸರು ಹೇಳುವಂತೆ ದಾಳಿಗೊಳಗಾದವರ ಮೇಲೆ ಸಿಬಿಐ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ತಮ್ಮ ತಮ್ಮನನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ
ಎಂದು ಆರೋಪಿಸಿದರು.
“ಸುಖಾ ಸುಮ್ಮನೆ ನನ್ನ ತಮ್ಮನನ್ನು ಸಿಲುಕಿಸಲು ಸಿಬಿಐ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಯಡಿಯೂರಪ್ಪಗೆ ನನ್ನ ಮೇಲೆ ಪ್ರೀತಿ. ಆ ಕಾರಣಕ್ಕಾಗಿಯೇ ನನ್ನ ಮೇಲೆ ದಾಳಿ ಮಾಡಿದ್ದಾರೆ. ಮಾಧ್ಯಮಗಳ ಮೂಲಕ ತಪ್ಪು ಸಂದೇಶ ರವಾನೆಯಾಗುವಂತೆ ಮಾಡಿದ್ದಾರೆ. ನಾವು
ಯಾವುದೇ ತಪ್ಪು ಮಾಡಿಲ್ಲ. ಯಾವುದಕ್ಕೂ ನಾನು ಬಗ್ಗುವುದಿಲ್ಲ’ ಎಂದು ಹೇಳಿದರು.