ಮುಲಾಲಿ ಜತೆ ಸಂಪರ್ಕವಿದ್ದುದು ನಿಜ: ಬಿಎಸ್ವೈ ಪಿಎ ಸಂತೋಷ್
Team Udayavani, Aug 18, 2017, 7:40 AM IST
ಬೆಂಗಳೂರು: ಮಾಜಿ ಸಚಿವ ಎಚ್.ವೈ.ಮೇಟಿ ವಿರುದ್ಧದ “ರಾಸಲೀಲೆ’ಪ್ರಕರಣದ ಬಗ್ಗೆ ಆರೋಪ ಮಾಡಿದ್ದ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಜತೆ ನನಗೆ ಪರಿಚಯವಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಸಿಐಡಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಗುರುವಾರ ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಸಂತೋಷ್, ಆರ್ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಪರಿಚಯವಿದ್ದು, ಹಲವು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪರಸ್ಪರ ಭೇಟಿಯೂ ಆಗಿದ್ದೇವೆ. ಆದರೆ, ಈ ಪ್ರಕರಣದ ಬಗ್ಗೆ ಎಂದಿಗೂ ಚರ್ಚೆ ನಡೆಸಿಲ್ಲವೆಂದು ಹೇಳಿಕೆ ನೀಡಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಆರೋಪ ನಿರಾಧಾರ: ಮೇಟಿ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಸರಿಯಾಗಿ ನಡೆಸಿಲ್ಲ ಎಂಬ ವಿಜಯಲಕ್ಷ್ಮೀ ಅವರ ಆರೋಪವನ್ನು ಸಿಐಡಿ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಮಹಿಳೆ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗಿದೆ. ಆಕೆ ಇದೀಗ ಈ ಆರೋಪ ಮಾಡುತ್ತಿರುವುದು ವಾಸ್ತವಕ್ಕೆ ದೂರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.