ರವಿ ಬೆಳಗೆರೆ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
Team Udayavani, Dec 24, 2017, 8:10 AM IST
ಸಾಗರ: ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಇಲ್ಲಿನ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ ಶನಿವಾರ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿ ಆದೇಶಿಸಿದೆ. ಅಲ್ಲದೆ ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸ್ಪಷ್ಟ ಸೂಚನೆ ನೀಡಿದೆ.
ನಗರದ ದಲಿತ ಸಂಘರ್ಷ ಸಮಿತಿ ಸಂಚಾಲಕ, ಬಗರ್ಹುಕುಂ ಸಮಿತಿ ಸದಸ್ಯ ಎಸ್. ಲಿಂಗರಾಜ್ ಎಂಬುವರು ತಮ್ಮ ವಿರುದ್ಧ “ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ಪ್ರಕಟಿಸಿದ ವರದಿಯೊಂದಕ್ಕೆ ಸಂಬಂಧಿ ಸಿ ಸಂಪಾದಕ ರವಿ ಬೆಳಗೆರೆ ವಿರುದ್ಧ 2010ರಲ್ಲಿ ಸಾಗರ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ ಸಂಬಂ ಧಿಸಿದಂತೆ ಇಲ್ಲಿನ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾ ಧೀಶರು ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿ ಆದೇಶಿಸಿದ್ದಾರೆ.ಶನಿವಾರ ಜಾಮೀನು ರಹಿತ ಬಂಧನದ ಆದೇಶ ನೀಡಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮುಂದಿನ ಕ್ರಮಕ್ಕೆ ಸ್ಪಷ್ಟ ಸೂಚನೆ ನೀಡಲಾಗಿದೆ. 2018ರ ಜ. 18ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಪ್ರಕರಣದ ವಿಚಾರಣೆ ವೇಳೆ ರವಿ ಬೆಳಗೆರೆ ಅವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ನಗರದ ಎಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾ ಧೀಶರಾದ ಫೆಲಿಕ್ಸ್ ಆಲಾ ನ್ಸೋ ಅಂತೋನಿಯವರು ಡಿ. 13ರಂದು ಬಾಡಿ ವಾರೆಂಟ್ ಜಾರಿಗೊಳಿಸಿದ್ದರು. ಆದರೆ ರವಿ ಬೆಳಗೆರೆ ಅವರ ಅನಾರೋಗ್ಯ ಹಾಗೂ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಸಾಗರ ನ್ಯಾಯಾಲಯದಲ್ಲಿ ಜಾರಿಗೊಳಿಸಿರುವ ಬಾಡಿ ವಾರೆಂಟ್ ಹಿಂಪಡೆದು ಡಿ. 20ರಂದು ಆದೇಶ ಹೊರಡಿಸಿದ್ದರು.