“ ಕೈ” ಶಾಸಕರ ಆಪ್ತರ ದಬ್ಬಾಳಿಕೆ,BJPಯಿಂದ ರಕ್ಷಾ ಯಾತ್ರೆಗೆ ಸಿದ್ಧತೆ
Team Udayavani, Feb 23, 2018, 12:31 PM IST
ಬೆಂಗಳೂರು:ಕಾಂಗ್ರೆಸ್ ಶಾಸಕರ ಆಪ್ತರ ದಬ್ಬಾಳಿಕೆ ಪ್ರಕರಣದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಬೆಂಗಳೂರು ರಕ್ಷಾ ಯಾತ್ರೆಗೆ ಸಿದ್ಧತೆ ನಡೆಸುತ್ತಿದೆ ಎಂದು ಖಾಸಗಿ ಚಾನೆಲ್ ವರದಿ ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಶಾಸಕರ ಆಪ್ತರ ದಬ್ಬಾಳಿಕೆ ಖಂಡಿಸಿ, ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ರಕ್ಷಾ ಯಾತ್ರೆ ನಡೆಸಲು ಸಜ್ಜಾಗಿರುವುದಾಗಿ ಹೇಳಿದೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸಿ, ಮಾರ್ಚ್ 16ರೊಳಗೆ ಮುಗಿಸುವ ಸಿದ್ಧತೆ ನಡೆಸುತ್ತಿದೆ. ಗವಿಗಂಗಾಧರೇಶ್ವರ ದೇವಾಲಯದಿಂದ ಪಾದಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಮಾರೋಪ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕರೆಯಿಸಿ ಭಾಷಣ ಮಾಡಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ ಎಂದು ವರದಿ ವಿವರಿಸಿದೆ.