ಬಿಜೆಪಿ ಸೋಲಿಸುವುದೇ ನಮ್ಮ ಅಜೆಂಡಾ: ಶರದ್ ಯಾದವ್
Team Udayavani, Mar 31, 2018, 6:25 AM IST
ಬೆಂಗಳೂರು: ಬಿಜೆಪಿ ಮುಕ್ತ ಭಾರತ ಕರ್ನಾಟಕದಿಂದಲೇ ಆರಂಭವಾಗಬೇಕು. ರಾಜ್ಯ ವಿಧಾನಸಭಾ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಇದ್ದಂತೆ ಎಂದು ಸಂಯುಕ್ತ ಜನತಾದಳ ರಾಷ್ಟ್ರೀಯ ಮುಖಂಡ ಶರದ್
ಯಾದವ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ದೇಶದಿಂದಲೇ ಹೊಡೆದೋಡಿಸುವ ಮೂಲಕ ಬಿಜೆಪಿ ಮುಕ್ತ ಭಾರತ ನಿರ್ಮಿಸಬೇಕೆಂದು ತಿಳಿಸಿದರು.
ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂಬ ಗುರಿ ಇಟ್ಟುಕೊಂಡು ಬಂದಿದ್ದೇವೆ. ಕಾಂಗ್ರೆಸ್ಗೆ ಬೆಂಬಲ ನೀಡಬೇಕೋ
ಅಥವಾ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಬೇಕೋ ಅಥವಾ ಸ್ವತಂತ್ರವಾಗಿ ಎಷ್ಟು ಕ್ಷೇತ್ರ ನಿಲ್ಲಬೇಕು ಎಂಬುದನ್ನು ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕೆಂಬುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಕರ್ನಾಟಕದಲ್ಲಿ ಸಂಯುಕ್ತ ಜನತಾ ದಳದ ಅಭ್ಯರ್ಥಿಗಳು ಮುಖ್ಯಮಂತ್ರಿಗಳಾಗಿದ್ದ ನಿದರ್ಶನ ಇದೆ. ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್ ಇಲ್ಲಿ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿದ್ದಾರೆ. ಜನರಿಗೆ ಉಪಯೋಗವಾಗುವ ಅನೇಕ ಯೋಜನೆ ರೂಪಿಸಿದ್ದಾರೆ. ಹೀಗಾಗಿ, ಸಂಯುಕ್ತ ಜನತಾದಳಕ್ಕೆ ಇಲ್ಲಿ ನೆಲೆ ಇದೆ ಎಂದು ಹೇಳಿದರು.
ವಿಜಯ್ ಮಲ್ಯ ದೇಶಬಿಟ್ಟು ಹೋಗಿ ಮೂರನೇ ಮದುವೆಯಾಗಲು ಬಿಜೆಪಿಯವರೇ ಕಾರಣ. ಹೀಗಾಗಿ ಬಿಜೆಪಿಯನ್ನು ಸೋಲಿಸುವ ಕೆಲಸ ಕರ್ನಾಟಕದಿಂದಲೇ ಆರಂಭವಾಗಬೇಕು. ರಾಜ್ಯದ ಜನತೆ ದಯವಿಟ್ಟು ಬಿಜೆಪಿ ಬೆಂಬಲಿಸಬಾರದು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಯುಕ್ತ ಜನತಾದಳದಿಂದ ಗೆದ್ದು ಎನ್ಡಿಎ ಜತೆ ಸೇರಿಕೊಂಡಿದ್ದಾರೆ. ಇದು ಅಲ್ಲಿನ ಜನರಿಗೆ ಮಾಡಿರುವ ಅನ್ಯಾಯ .
– ಶರದ್ ಯಾದವ್