ಭೀಕರ ಅಪಘಾತ: ಐವರು ಸಾವು
Team Udayavani, Jun 16, 2018, 6:00 AM IST
ಬಳ್ಳಾರಿ/ಕುರುಗೋಡು: ತಾಲೂಕಿನ ಕೋಳೂರು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ನಡೆದು ಮೂರು ವರ್ಷದ ಮಗು ಸಹಿತ ಸ್ಥಳದಲ್ಲೇ ಐವರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕುರುಗೋಡು ಮೂಲದ ಚಾಲಕ ಸಂತೋಷ್(32) ಮತ್ತವರ ಮಗ ಪ್ರೀತಮ್ (4), ವಿನಯ್(23), ಗುರು(28), ದಾದಾ ಖಲಂದರ್(16) ಮೃತಪಟ್ಟವರು. ಇಂಡಿಕಾ ಕಾರಿನಲ್ಲಿ ಸಿರುಗುಪ್ಪದಿಂದ ಕುರುಗೋಡಿಗೆ ಹೋಗುತ್ತಿದ್ದಾಗ, ಬಳ್ಳಾರಿ ಕಡೆಯಿಂದ ಸಿರುಗುಪ್ಪ ಕಡೆಗೆ ಹೊರಟಿದ್ದ ಸಾರಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಕಾರಿನಲ್ಲಿ ಸಿಲುಕಿಕೊಂಡ ಮೃತರ ದೇಹಗಳನ್ನು ಸ್ಥಳೀಯರು ಮತ್ತು ಪೊಲೀಸರು ಹೊರ ತೆಗೆದು ವಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಘಟನಾ ಸ್ಥಳಕ್ಕೆ ಎಸ್ಪಿ ಅರುಣ್ ರಂಗರಾಜನ್, ಡಿವೈಎಸ್ಪಿ ಟಿ.ವಿ.ಸುರೇಶ್, ಸಿಪಿಐ ಮಂಜುನಾಥ್, ಕುರುಗೋಡು ಠಾಣೆ ಪಿಎಸ್ಐ ಮಹೇಶ್ಗೌಡ, ಅಗ್ನಿ ಶಾಮಕ ದಳದ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಅರುಣ್ ರಂಗರಾಜನ್, ಪ್ರಾಥಮಿಕ ಮಾಹಿತಿ ಪ್ರಕಾರ ವೇಗದ ನಿಯಂತ್ರಣ ಕಳೆದುಕೊಂಡ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿರಬಹುದೆಂದು ತಿಳಿದು ಬಂದಿದೆ ಎಂದರು. ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.