ಕಾಲಾವಕಾಶ ಕೇಳಿದ್ದಕ್ಕೆ ಸದನದ ಬಾವಿಗಿಳಿದು ಧರಣಿ
Team Udayavani, Jul 13, 2018, 7:00 AM IST
ವಿಧಾನ ಪರಿಷತ್ತು: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸುವ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲು ಕಾಲಾವಕಾಶ ಕೇಳಿದ್ದಕ್ಕೆ ಆಡಳಿತ ಪಕ್ಷದ ವಿರುದ್ದ ಗರಂ ಆದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ಮೇಲ್ಮನೆಯಲ್ಲಿ ನಡೆಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಎಸ್.ವ್ಹಿ ಸಂಕನೂರ ಅವರ ಪ್ರಶ್ನೆ ಹಾಗೂ ಹೊಸ ಕಾಲೇಜುಗಳ ಅನುಮತಿ ವಿಚಾರದಲ್ಲಿ
ಉಂಟಾಗಿರುವ ಗೊಂದಲಗಳ ಕುರಿತ ಅರುಣ ಶಹಾಪುರ ಪ್ರಶ್ನೆಗೆ ಶಿಕ್ಷಣ ಸಚಿವ ಮಹೇಶ್ ಕಾಲಾವಕಾಶ ಕೇಳಿ ದ್ದಾರೆ ಎಂದು ಸಭಾಪತಿ ಪ್ರಕಟಿಸಿದರು.
ಇದರಿಂದ ಸಚಿವರ ವಿರುದ್ದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಸರ್ಕಾರದ ಧೋರಣೆ ಖಂಡಿಸಿ ಸದನದ
ಬಾವಿಗಿಳಿದು ಧರಣಿಗೆ ಮುಂದಾದರು.ಹೊಸ ಪಿಂಚಣಿ ಯೋಜನೆ ಅನುಷ್ಠಾನದ ಬಗ್ಗೆ ಸರ್ಕಾರದ ತೀರ್ಮಾನ ಏನು
ಎಂದು ಸರ್ಕಾರಿ ನೌಕರರು ಕಾದು ಕುಳಿತಿದ್ದಾರೆ. ಆದರೆ, ಸರ್ಕಾರ ಬೇಜವಾಬ್ದಾರಿತನ ತೋರುತ್ತಿದೆ ಎಂದು ಕೋಟ
ಶ್ರೀನಿವಾಸ ಪೂಜಾರಿ ಸರ್ಕಾರದ ವಿರುದಟಛಿ ಹರಿಹಾಯ್ದರು. ಉತ್ತರಕ್ಕೆ ಕಾಲಾವಕಾಶ ಕೇಳಿದಾಗ ನಾನೇನೂ ಮಾಡಲು ಬರುವುದಿಲ್ಲ.
ಧರಣಿ ವಾಪಸ್ ಪಡೆದು ಕಲಾಪಕ್ಕೆ ಸಹಕರಿಸಿ ಎಂದು ಸಭಾಪತಿ ಹೊರಟ್ಟಿ ಮನವಿ ಮಾಡಿದರು. ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ಈ ವೇಳೆ ಸದನದಲ್ಲಿ ಗಲಾಟೆ ಉಂಟಾಯಿತು. ಶುಕ್ರವಾರ ಶಿಕ್ಷಕರ, ಅಧಿಕಾರಿಗಳ ಸಭೆ
ಕರೆಯುವುದಾಗಿ ಸಚಿವ ಮಹೇಶ್ ಹೇಳಿದ ಬಳಿಕ ಬಿಜೆಪಿ ಸದಸ್ಯರು ಧರಣಿ ವಾಪಸ್ ಪಡೆದರು.