ರೈತರ ಆತ್ಮಹತ್ಯೆಗೆ ಸಾಲಬಾಧೆ ಒಂದೇ ಕಾರಣವಲ್ಲ: ಸಚಿವ ಶಿವಶಂಕರರೆಡ್ಡಿ
Team Udayavani, Aug 14, 2018, 6:15 AM IST
ದಾವಣಗೆರೆ: ಸತ್ತವರೆಲ್ಲಾ ರೈತರು ಅಥವಾ ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಹೇಳಲು ಬರುವುದಿಲ್ಲ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದರು.
ಸೋಮವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬದಲ್ಲಿನ ಸಮಸ್ಯೆ, ಬೇರೆ ಬೇರೆ ಕಾರಣಗಳಿಂದಾಗಿಯೂ ರೈತರು ಆತ್ಮಹತ್ಯೆ ಮಾಡಿಕೊಂಡಿರಬಹುದು. ಇಂಥಹ ಆತ್ಯಹತ್ಯೆಗಳನ್ನು ಮಾಧ್ಯಮದವರು ವೈಭವೀಕರಿಸುವುದು ಸರಿಯಲ್ಲ. ಸರ್ಕಾರಕ್ಕೆ ಅನ್ನದಾತರ ಬಗ್ಗೆ ಅಪಾರ ಕಾಳಜಿ ಇದೆ ಎಂದರು.
ಸಚಿವರ ಕಾರು ಅಡ್ಡಗಟ್ಟಿ ತರಾಟೆ….
ಕೃಷಿ ಸಚಿವರ ಕಾರು ಅಡ್ಡಗಟ್ಟಿ, ರೈತನೋರ್ವ ತರಾಟೆ ತೆಗೆದುಕೊಂಡ ಘಟನೆ ಸೋಮವಾರ ದಾವಣಗೆರೆ ತಾಲೂಕಿನ ಈಚಘಟ್ಟದಲ್ಲಿ ನಡೆಯಿತು.
ಕೃಷಿ ಸಲಕರಣೆ ವಿತರಣೆ ಹಾಗೂ ರೈತರೊಂದಿಗೆ ಸಂವಾದ ನಡೆಸಲು ಗ್ರಾಮಕ್ಕೆ ಆಗಮಿಸಿದ್ದ ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರ ಕಾರು ಅಡ್ಡಗಟ್ಟಿದ ಹಾಲೇಶಪ್ಪ ಎಂಬಾತ, ಕೃಷಿ ಸಲಕರಣೆಗಳಿಗೆ ಅಧಿಕಾರಿಗಳು ಸಬ್ಸಿಡಿ ನೀಡುತ್ತಿಲ್ಲ. ನಾಳೆ ಕೃಷಿ ಅಧಿಕಾರಿಗಳ ಕಚೇರಿಗೆ ಹೋಗುತ್ತೇನೆ. ಅವರೇನಾದರೂ ಸಬ್ಸಿಡಿ ಕೊಡಲಿಲ್ಲ ಅಂದರೆ ಅಧಿಕಾರಿಗಳ ಮನೆ ಮುಂದೆಯೇ ಧರಣಿ ಮಾಡುತ್ತೇನೆ. ಅದಕ್ಕೂ ಜಗ್ಗದಿದ್ದರೆ, ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಸಚಿವರನ್ನು ತರಾಟೆಗೆ ತಗೆದುಕೊಂಡರು.
ಕೃಷಿ ಹೊಂಡ ತೋರ್ಪಡಿಕೆಗೆ ಇವೆ. ಸಚಿವರಿಂದ ಶಬ್ಟಾಷ್ಗಿರಿ ಪಡೆಯಲು ಮಳೆ ನೀರು ಬದಲು ಬೋರ್ ನೀರಿನಿಂದ ಕೃಷಿ ಹೊಂಡ ತುಂಬಿಸಿದ್ದಾರೆ ಎಂಬುದಾಗಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹಾಲೇಶಪ್ಪ ಸಚಿವ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದರು.