ಬೂತ್ ಸಮಿತಿ ಅಸ್ತಿತ್ವದಲ್ಲಿಲ್ಲದೇ “ಪ್ರಾಜೆಕ್ಟ್ ಶಕ್ತಿ’ ಗೆ ಹಿನ್ನಡೆ
Team Udayavani, Aug 15, 2018, 6:00 AM IST
ಬೆಂಗಳೂರು: ವಿಧಾನ ಸಭೆ ಚುನಾವಣೆಗೆ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಲು ರಚಿಸಲಾಗಿದ್ದ ಬಹುತೇಕ ಬೂತ್ ಸಮಿತಿಗಳು ಅಸ್ತಿತ್ವದಲ್ಲಿ ಇಲ್ಲದಿರುವುದು ಕಾಂಗ್ರೆಸ್ಗೆ ಈಗ ಮನವರಿಕೆಯಾಗಿದೆ. ಪಕ್ಷ ಬಲವರ್ಧನೆಗೆ ಪಣತೊಟ್ಟಿದ್ದ ಕಾಂಗ್ರೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿತ್ತು. ಬಿಜೆಪಿಯ ಕೇಡರ್ ಬೇಸ್ಗೆ ಪರ್ಯಾಯವಾಗಿ ಬೂತ್ ಸಮಿತಿ ರಚಿಸುವುದರಿಂದ ಸರ್ಕಾರದ ಸಾಧನೆಗಳನ್ನು ನೇರವಾಗಿ ಜನರಿಗೆ ತಲುಪಿಸಲು ಸಾಧ್ಯ ಎಂಬ ಲೆಕ್ಕಾಚಾರದಲ್ಲಿ ಬೂತ್ ಸಮಿತಿ ರಚನೆ ಮಾಡಲಾಗಿತ್ತು.
ಎಐಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೂತ್ ಸಮಿತಿ ರಚನೆ ಮಾಡುವ ಮೂಲಕ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡಿದ್ದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ಚುನಾವಣೆ ಯ ಫಲಿತಾಂಶ ಬಂದಾಗ ಬೂತ್ ಕಮಿಟಿಗಳ ಪ್ರಭಾವ ಎದ್ದು ಕಾಣಲಿಲ್ಲ. ಪಕ್ಷ ಸೋತ ಬೇಸರದಲ್ಲಿ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. “ಪ್ರಾಜೆಕ್ಟ್ ಶಕ್ತಿ’ ವೇಳೆ ಬಹಿರಂಗ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಲು ಜಾರಿಗೆ ತಂದ ಯೋಜನೆಯೇ “ಪ್ರಾಜೆಕ್ಟ್ ಶಕ್ತಿ’. ಇದನ್ನು ಅನುಷ್ಠಾನಕ್ಕೆ ಮುಂದಾಗಿರುವ ಸಂದರ್ಭದಲ್ಲಿ ನಾಯಕರು ಬೂತ್ ಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸಲು ಹೋದಾಗ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಕಮಿಟಿಗಳೇ ಇಲ್ಲದಿರುವುದು ಬೆಳಕಿಗೆ ಬಂದಿದೆ. ಹಿಂದಿನ ಅವಧಿಯಲ್ಲಿ ಸಚಿವರು ಹಾಗೂ ಶಾಸಕರಾಗಿದ್ದವರು ಬೂತ್ ಕಮಿಟಿ ಮಾಡುವ ಗೋಜಿಗೆ ಹೋಗಿಲ್ಲ. ಅದರ ಪರಿಣಾಮ ಚುನಾವಣೆಯಲ್ಲಿ ಸರ್ಕಾರ ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ತಲುಪಿಸಲು ಕಾಂಗ್ರೆಸ್ ವಿಫಲವಾದ ಬಗ್ಗೆ ವಾಸ್ತವಾಂಶ ಈಗ ಗೊತ್ತಾಗಿದೆ.
ಪ್ರಾಜೆಕ್ಟ್ ಶಕ್ತಿಗೆ ಸಮಸ್ಯೆ: ರಾಜ್ಯದಲ್ಲಿ ಸರ್ಕಾರ ಇದ್ದರೂ ವಿಧಾನಸಭೆ ಚುನಾವಣೆಯಲ್ಲಿ ಮರಳಿ ಅಧಿಕಾರ ಪಡೆಯಲು ವಿಫಲವಾಗಿರುವ ಕಾಂಗ್ರೆಸ್ ಮುಂದಿನ ಲೋಕಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಕರ್ನಾಟಕದಿಂದಲೇ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಹೈ ಕಮಾಂಡ್ ಯೋಜನೆ ರೂಪಿಸುತ್ತಿದೆ. ಈಗಾಗಲೇ ಮಧ್ಯಪ್ರದೇಶ, ಮಹಾರಾಷ್ಟ, ರಾಜಸ್ಥಾನಗಳಲ್ಲಿ ಪ್ರಾಜೆಕ್ಟ್ ಶಕ್ತಿ ಜಾರಿಗೆ ಬಂದಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಅಧ್ಯಕ್ಷರಿಗೆ ಈ ಯೋಜನೆ ಜಾರಿಗೊಳಿ
ಸುವ ಜವಾಬ್ದಾರಿ ವಹಿಸಲಾಗಿದೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಕಾರ್ಯಕರ್ತರನ್ನು ಈ ಯೋಜನೆ ವ್ಯಾಪ್ತಿಗೆ ತರುವ ಗುರಿ ಹೊಂದಲಾಗಿದೆ.
ಸ್ಪಷ್ಟ ಮಾಹಿತಿ ಇಲ್ಲ: ಯೋಜನೆ ಜಾರಿಗೆ ಎಐಸಿಸಿ ಕಾರ್ಯದರ್ಶಿಯಾಗಿದ್ದ ಸೂರಜ್ ಹೆಗಡೆಯನ್ನು ಸಂಯೋಜಕರನ್ನಾಗಿ ನೇಮಿಸಲಾಗಿದೆ. ಆದರೆ,
ಜಿಲ್ಲಾ, ಬ್ಲಾಕ್ ಅಧ್ಯಕ್ಷರಿಂದ ಕೆಳ ಹಂತದ ಕಾರ್ಯಕರ್ತರಿಗೆ ಈ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ತಲುಪಿಸುವ ಕೆಲಸ ಆಗಿಲ್ಲ. ಯೋಜನೆಗೆ ಸೇರ್ಪಡೆಯಾಗುವವರು ಓಟರ್ ಐಡಿ ನಂಬರನ್ನು ನೇರವಾಗಿ 7045006100 ಮೆಸೆಜ್ ಮಾಡಿದರೆ, ರಾಹುಲ್ ಗಾಂಧಿಯಿಂದಲೇ ಧನ್ಯವಾದದ
ಮೆಸೇಜ್ ವಾಪಸ್ ಬರಲಿದೆ.
ಯಶಸ್ಸು ಕಾಣದ ಮನೆ ಮನೆಗೆ ಕಾಂಗ್ರೆಸ್
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯ ಸರ್ಕಾರದ ಸಾಧನೆಗಳನ್ನು ರಾಜ್ಯದ ಪ್ರತಿಯೊಬ್ಬ ಮತದಾರನ ಮನೆಗೆ ಸಾಧನೆಗಳನ್ನು ತಲುಪಿಸಲು ಮನೆ ಮನೆಗೆ ಕಾಂಗ್ರೆಸ್ ಯೋಜನೆಯನ್ನು ಹಮ್ಮಿಕೊಂಡಿತ್ತು. ಅದಕ್ಕಾಗಿ ಸುಮಾರು 1 ಕೋಟಿ 20 ಲಕ್ಷ ಕೈಪಿಡಿಗಳನ್ನು ಪ್ರಕಟಿಸಲಾಗಿತ್ತು. ಆದರೆ, ಬಹುತೇಕ ಶಾಸಕರು ಮತ್ತು ಸಚಿವರು ತಮ್ಮ ಕ್ಷೇತ್ರಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸದೇ ನಿರ್ಲಕ್ಷ ತೋರಿದ್ದಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ. ವಾಸ್ತವ ಪರಿಶೀಲನೆ ನಡೆಸಿದಾಗ ಶೇಕಡಾ 60 ರಷ್ಟು ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್ ಅಧ್ಯಕ್ಷರು ಯೋಜನೆ ಜಾರಿಗೊಳಿಸದೇ ಕೈ ತೊಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಶಂಕರ ಪಾಗೋಜಿ