ನಾಗರ ಪಂಚಮಿ ದಿನ ನಡೆಯುತ್ತೆ ಚೇಳು ಜಾತ್ರೆ!
Team Udayavani, Aug 15, 2018, 6:00 AM IST
ಯಾದಗಿರಿ: ಗುರುಮಠಕಲ್ ತಾಲೂಕಿನ ಕಂದ ಕೂರ ಗ್ರಾಮದ ಬೆಟ್ಟದಲ್ಲಿ ನೆಲೆಸಿರುವ ಕೊಂಡ ಮಾಯಿ ದೇವಿ ಜಾತ್ರೆ ಪ್ರತಿವರ್ಷ ನಾಗರ ಪಂಚಮಿ ದಿನದಂದು ಸಂಭ್ರಮದಿಂದ ನೆರವೇರುತ್ತದೆ. ಈ ವೇಳೆ ಇಲ್ಲಿ ಚೇಳಿನ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಮಕ್ಕಳು, ಯುವಕರು, ಮಹಿಳೆಯರು ಜೀವಂತ ಚೇಳುಗಳೊಂದಿಗೆ ಚೆಲ್ಲಾಟವಾಡುತ್ತ ಕೆಲವರು ಬಾಯಿ, ಕೈ, ಮುಖದ ಮೇಲೆ ಚೇಳು ಬಿಟ್ಟುಕೊಂಡು ಸಂಭ್ರಮಿಸುತ್ತಾರೆ.
ನಾಗರ ಪಂಚಮಿ ದಿನ ಸಾಮಾನ್ಯವಾಗಿ ರಾಜ್ಯ ದೆಲ್ಲೆಡೆ ಮಹಿಳೆಯರು ಉಪವಾಸ ವ್ರತ ಆಚರಿಸಿ, ಭಕ್ತಿಯಿಂದ ನಾಗ ಮೂರ್ತಿಗಳಿಗೆ ಹಾಲೆರೆಯು ವುದನ್ನು ಕಾಣುತ್ತೇವೆ. ಆದರಿಲ್ಲಿ ಗ್ರಾಮಸ್ಥರೆಲ್ಲರೂ ತಳಿರು ತೋರಣಗಳಿಂದ ಮನೆಗಳನ್ನು ಶೃಂಗರಿಸಿ, ಗ್ರಾಮ ದೇವತೆ ಕೊಂಡಮಾಯಿ ಬೆಟ್ಟಕ್ಕೆ ಸಾಮೂಹಿಕವಾಗಿ ವಾದ್ಯ ಮೇಳಗಳೊಂದಿಗೆ ತೆರಳಿ ನೈವೇದ್ಯ ಅರ್ಪಿಸುತ್ತಾರೆ.
ರಾಜ್ಯದ ಗಡಿ ಭಾಗವಾಗಿರುವುದರಿಂದ ಈ ವಿಶಿಷ್ಟ ಜಾತ್ರೆಗೆ ತೆಲಂಗಾಣ, ಆಂಧ್ರ ಹಾಗೂ ಮಹಾ ರಾಷ್ಟ್ರಗಳಿಂದಲೂ ಭಕ್ತರು ಆಗಮಿಸುತ್ತಾರೆ. ಜೀವಂತ ಚೇಳುಗಳನ್ನು ಹಿಡಿದು ಸಂಭ್ರಮಿಸುತ್ತಾರೆ. ಪಂಚಮಿ ದಿನ ಬೆಟ್ಟದ ತುಂಬೆಲ್ಲ ಕಲ್ಲುಗಳ ಕೆಳಗೆ ಕುಳಿತಿರುವ ಚೇಳುಗಳು ಕಲ್ಲು ಮೇಲೆತ್ತುತ್ತಲೇ ಹೊರಗೆ ಬರುತ್ತವೆ. ಎಲ್ಲೆಡೆ ಆವರಿಸುವ ಚೇಳುಗಳನ್ನು ಆಗಮಿಸಿದ ಭಕ್ತರು ದೇವಿ ಹೆಸರು ಜಪಿಸಿ ಅವು ಗಳನ್ನು ಹಿಡಿದುಕೊಂಡು
ಆಟವಾಡುತ್ತಾರೆ. ಈ ಬೆಟ್ಟದಲ್ಲಿ ಸಾಮಾನ್ಯ ದಿನಗಳಲ್ಲಿ ಚೇಳುಗಳು ಕಂಡು ಬರುವುದಿಲ್ಲ. ನಾಗರ ಪಂಚಮಿ ದಿನ ಚೇಳುಗಳು ಕಾಣಿಸಿಕೊಳ್ಳುವುದು ಇಲ್ಲಿನ ದೈವೀ ಶಕ್ತಿಯ ಮಹಿಮೆಯಾಗಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.
ತಾತ್ಕಾಲಿಕ ಚಿಕಿತ್ಸಾ ಸೇವೆ ಲಭ್ಯ: ಕಳೆದೆರಡು ವರ್ಷ ಗಳಿಂದ ಚೇಳು ಕಚ್ಚುವ ಕುರಿತು ವರದಿ ಆಗಿರುವು ದರಿಂದ ಮುನ್ನೆಚ್ಚರಿಕೆಯಾಗಿ ಕಂದಕೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ತಾತ್ಕಾಲಿಕವಾಗಿ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆ ಕೈಗೊಳ್ಳುತ್ತಿದ್ದಾರೆ. ಕಂದಕೂರ ಗ್ರಾಪಂ ಕಾರ್ಯಾಲಯ ದಿಂದ ಜಾತ್ರೆ ನಡೆಯುವ ಬೆಟ್ಟದಲ್ಲಿ ಅಗತ್ಯ ಕುಡಿಯುವ ನೀರಿನ ಸೌಕರ್ಯ ಒದಗಿಸಲಾಗುತ್ತಿದೆ. ಬೆಟ್ಟಕ್ಕೆ ತೆರಳುವ ರಸ್ತೆಗೆ ಅನುಕೂಲ ಮಾಡಲಾಗಿದೆ ಎಂದು ಪಿಡಿಒ ತಿಳಿಸಿದ್ದಾರೆ.
ಜಾತ್ರೆಯಲ್ಲಿ ಚೇಳುಗಳನ್ನು ಹಿಡಿದು ಜನರು ಅವುಗಳೊಂದಿಗೆ ಆಟವಾಡುತ್ತಾರೆ. ಚೇಳು ಯಾರಿಗೂ ಕಚ್ಚುವುದಿಲ್ಲ ಎನ್ನುವ ನಂಬಿಕೆ ಜನರದ್ದಾಗಿದೆ.
● ಸಿದ್ದಲಿಂಗರೆಡ್ಡಿ ಪಾಟೀಲ, ಸ್ಥಳೀಯ
ಚೇಳುಗಳಲ್ಲಿ ವಿಷದ ಪ್ರಮಾಣ ಕಡಿಮೆಯಿರುತ್ತದೆ. ಇದು ಕಚ್ಚುವುದರಿಂದ ಸಾವುಗಳು ಸಂಭವಿಸಿರುವ ಪ್ರಕರಣಗಳಿಲ್ಲ. ಸಾಮಾನ್ಯವಾಗಿ 12ರಿಂದ 24 ಗಂಟೆಯವರೆಗೆ ದೇಹದ ಮೇಲೆ ಪರಿಣಾಮ ಬೀರುತ್ತದೆ. ಯಾವುದಕ್ಕೂ ಎಚ್ಚರ ವಹಿಸುವುದು ಸೂಕ್ತ.
● ಡಾ| ಸಂಜೀವ ಕುಮಾರ ರಾಯಚೂರಕರ್, ಜಿಲ್ಲಾ ಶಸ್ತ್ರಚಿಕಿತ್ಸಕರು
ಅನೀಲ ಬಸೂದೆ