ಬಿಜೆಪಿಯವರಿಗೆ ಕೇಸರಿ ಪತ್ರ ಹೊರಡಿಸುತ್ತೇನೆ
Team Udayavani, Sep 4, 2018, 6:00 AM IST
ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ,ರೈತರ ಸಾಲ ಮನ್ನಾ ಕುರಿತು ಸರ್ಕಾರದ ಸ್ಪಷ್ಟತೆ ಕುರಿತಂತೆ ಬಿಜೆಪಿಯವರಿಗೆ ಶ್ವೇತ ಪತ್ರವಲ್ಲ, ಕೇಸರಿ ಪತ್ರವನ್ನೇ ಕೊಡುತ್ತೇನೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಬೊಕ್ಕಸ ಖಾಲಿಯಾಗಿದೆ. ಸಾಲ ಮನ್ನಾ ಅನುಷ್ಠಾನವಾಗಿಲ್ಲ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರು, ಈ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದ್ದಾರೆ.
ಆದರೆ, 100 ದಿನಗಳ ಆಡಳಿತದ ಅವಧಿಯಲ್ಲಿ ಈ ಸರ್ಕಾರ ನಾಡಿನ ಅಭಿವೃದ್ಧಿಗೆ ಪೂರಕವಾಗುವಂತಹ ಏನೆಲ್ಲ
ತೀರ್ಮಾನ ಕೈಗೊಂಡಿದೆ, ಆರ್ಥಿಕವಾಗಿ ರಾಜ್ಯ ಎಷ್ಟು ಸದೃಢವಾಗಿದೆ, ರೈತರ ಸಾಲಮನ್ನಾ ಕುರಿತು ಸರ್ಕಾರದ ಸ್ಪಷ್ಟತೆ ಏನು ಎಂಬ ಬಗ್ಗೆ ಶ್ವೇತಪತ್ರವಲ್ಲ, ಕೇಸರಿ ಪತ್ರ ಹೊರಡಿಸುತ್ತೇನೆ. ಇದಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದು, ಶೀಘ್ರವೇ ಬಿಡುಗಡೆ ಮಾಡುತ್ತೇನೆ ಎಂದರು.
ಈ ಸರ್ಕಾರ ಬಿದ್ದೇ ಹೋಯಿತು ಎಂದು ಪದೇಪದೆ ಹೇಳುತ್ತಾ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರು, ರಾಜ್ಯದ
ಅಭಿವೃದ್ಧಿಗೆ ನಾವು ಕೊಡುವ ಸೂಚನೆಗಳನ್ನು ಅಧಿಕಾರಿಗಳು ಪಾಲಿಸದೇ ಇರಲಿ ಎಂದು ಅವರಲ್ಲಿ ಸರ್ಕಾರದ ಬಗ್ಗೆ ಇದೆಷ್ಟು ದಿನ ಎಂಬ ಭಾವನೆ ಮೂಡಿಸುತ್ತಿದ್ದಾರೆ. ಅವರ ಮಾತಿಗೆ ಮರುಳಾಗುವ ಅಧಿಕಾರಿಗಳಿ ಗೆ ಚಾಟಿ ಬೀಸುವುದು ಹೇಗೆ ಎಂಬುದು ನಮಗೆ ಗೊತ್ತಿದೆ. ಸರ್ಕಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ಆ ಪಕ್ಷದ ನಾಯಕರು ಭ್ರಮೆಯಲ್ಲಿದ್ದಾರೆ. ಅವರು ಇನ್ನಷ್ಟು ಭ್ರಮೆ ಹೊಂದಿ ಇನ್ನಷ್ಟು ಖುಷಿಯಾಗಿರಬೇಕೆಂದು ಬಯಸುತ್ತೇನೆಂದು ವ್ಯಂಗ್ಯವಾಡಿದರು.
ಸರ್ಕಾರ 100 ದಿನ ಪೂರೈಸಿದ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆಗಳ ಬಗ್ಗೆ ಕಿಡಿ ಕಾರಿದ ಅವರು, “ನಾನು 100 ದಿನಗಳಲ್ಲಿ ಎಷ್ಟು ಪ್ರವಾಸ ಮಾಡಿದ್ದೇನೆ ಮತ್ತು ಏನೆಲ್ಲ ಅಭಿವೃದಿಟಛಿ ಕೆಲಸಗಳನ್ನು ಮಾಡಿದ್ದೇನೆ ಹಾಗೂ ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಅವರು 100 ದಿನಗಳಲ್ಲಿ ಎಷ್ಟು ಪ್ರವಾಸ ಮಾಡಿದ್ದರು? ಏನೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು? ಎಂಬುದನ್ನು ದಾಖಲೆ ಸಹಿತ ಶೀಘ್ರವೇ ಬಹಿರಂಗಗೊಳಿಸುತ್ತೇನೆ’ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿರುವ ಸಚಿವ ರಮೇಶ್ ಜಾರಕಿ ಹೊಳಿ ಮತ್ತು ಸತೀಶ್ ಜಾರಕಿಹೊಳಿ ಜತೆ ಕೆಲವು ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗುತ್ತಾರೆಂಬ ಊಹಾ ಪೋಹಗಳನ್ನು ಅವರು ಅಲ್ಲಗಳೆದರು. ಈ ಪಟ್ಟಿಯಲ್ಲಿರುವವರು ಸೇರಿ ಸಮ್ಮಿಶ್ರ ಸರ್ಕಾರದಲ್ಲಿರುವವರು ಯಾರೂ ಪಕ್ಷ ಬಿಟ್ಟು ಬಿಜೆಪಿ ಜತೆ ಹೋಗುವುದಿಲ್ಲ. ಈ ಬಗ್ಗೆ ಬಿಜೆಪಿಯವರು ಕನಸು ಕಾಣುತ್ತಿದ್ದಾರೆ ಅಷ್ಟೆ ಎಂದರು.