ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲುತೂರಾಟ: 15 ಜನರಿಗೆ ಗಾಯ
Team Udayavani, Sep 25, 2018, 6:05 AM IST
ಕಾಳಗಿ(ಕಲಬುರಗಿ): ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ಭಾನುವಾರ ರಾತ್ರಿ ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆದಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಭಾನುವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಯುತ್ತಿತ್ತು. ರಾತ್ರಿ 10ರ ಸುಮಾರಿಗೆ ಇಲ್ಲಿನ ಧಾರ್ಮಿಕ ಕೇಂದ್ರದ ಹತ್ತಿರ ಬಂದಾಗ ಕೆಲ ಕಿಡಿಗೇಡಿಗಳು ಪಾದರಕ್ಷೆ ಹಾಗೂ ಕಲ್ಲು ತೂರಿದ್ದಾರೆ. ಇದಕ್ಕೆ ಪ್ರತಿಯಾಗಿ ಮೆರವಣಿಗೆಯಲ್ಲಿದ್ದ ಗುಂಪಿನಿಂದಲೂ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಲಾಠಿ ಪ್ರಹಾರ ನಡೆಸಲಾಗಿದೆ. ಕಲ್ಲು ತೂರಾಟದಲ್ಲಿ ಶಶಿಕಾಂತ ಕಲಶೆಟ್ಟಿ, ಗುಂಡು ಭರತನೂರ, ರಮೇಶ ರಾಜಾಪುರ, ಗಿರೀಶ ಗುತ್ತೇದಾರ ಸೇರಿದಂತೆ 15ಕ್ಕೂ ಹೆಚ್ಚು ಯುವಕರಿಗೆ ಗಾಯವಾಗಿದ್ದು, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲ್ಲು ತೂರಾಟದಿಂದ ಗಣೇಶ ಮೂರ್ತಿ ಸಹ ಭಗ್ನವಾಗಿದ್ದು. ಓರ್ವ ಪೊಲೀಸ್ ಪೇದೆಗೂ ಏಟು ಬಿದ್ದಿದೆ.
ಘಟನೆಗೆ ಸಂಬಂಧಿಸಿದಂತೆ ಎರಡೂ ಸಮುದಾಯದಿಂದ ತಲಾ 9 ಜನರನ್ನು ಬಂಧಿಸಿದ್ದು, ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.