ಸದಾಶಿವ ಆಯೋಗದ ವರದಿ ಜಾರಿಗಾಗಿ ಧರಣಿ
Team Udayavani, Oct 3, 2018, 11:39 AM IST
ಬೆಂಗಳೂರು: ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಮಹಾಸಭಾದ ವತಿಯಿಂದ ಮಂಗಳವಾರ ಸ್ವಾತಂತ್ರ್ಯ ಉದ್ಯಾನ ವನದಲ್ಲಿ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಸಾಹಿತಿ ಪ್ರೊ| ಚಂದ್ರಶೇಖರ ಪಾಟೀಲ್ ಅವರು ಶೋಷಿತರ ಸ್ಥಿತಿಗತಿಗಳ ಬಗ್ಗೆ ಅರಿಯಲು ನ್ಯಾ|ಸದಾಶಿವ ಆಯೋಗವು ನಿರಂತರ ಅಧ್ಯಯನ ಮಾಡಿ ವೈಜ್ಞಾನಿಕವಾಗಿ ವರದಿ ನೀಡಿತ್ತು. ಆದರೆ ಇದುವರೆಗೂ ಯಾವ ಸರಕಾರಗಳು ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿಲ್ಲ. ಮೀಸಲಾತಿ ಭಿಕ್ಷೆಯಲ್ಲ ಶೋಷಿತರ ಹಕ್ಕು. ಮಾದಿಗ ಸಮುದಾಯದ ಹೋರಾಟ ಸರಕಾರ ಬೀಳಿಸುವಷ್ಟು ಸಾಮರ್ಥ್ಯ ಹೊಂದಿರಬೇಕು ಎಂದರು.
ನಾಯಕರಲ್ಲಿ ಇಚ್ಛಾಶಕ್ತಿ ಕೊರತೆ
ಹಿಂದುಳಿದ ವರ್ಗಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಮಾತನಾಡಿ, ಮಾದಿಗ ಸಮುದಾಯ ಸದಾಶಿವ ವರದಿ ಜಾರಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಪ್ರತಿಫಲ ದೊರೆಯುತ್ತಿಲ್ಲ. ಮಾದಿಗ ನಾಯಕರು ಕೇವಲ ವೇದಿಕೆ ಹತ್ತಿ ಇಳಿಯುತ್ತಿದ್ದಾರೆ ಹೊರತು ಮಾದಿಗರ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವರದಿ ಜಾರಿಗಾಗಿ ಮಠಾಧೀಶರು ಒಂದಾಗಬೇಕು. ಸ್ವಾಮೀಜಿಗಳು ಯಾವುದೇ ಪಕ್ಷಗಳಿಗೆ ಬೆಂಬಲ ನೀಡಿದರೂ ಪರವಾಗಿಲ್ಲ. ವರದಿ ಜಾರಿಗಾಗಿ ಎಲ್ಲರೂ ದನಿಗೂಡಿಸಬೇಕು. ಒಳಮೀಸಲಾತಿ ಚಳವಳಿಯ ನಾಯಕತ್ವವನ್ನು ಮಾದಿಗ ಸಮುದಾಯ ವಹಿಸಿಕೊಳ್ಳಬೇಕು ಎಂದರು.