ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ತಲೆದೋರಿದೆ ಕಲ್ಲಿದ್ದಲು ಕ್ಷಾಮ
Team Udayavani, Oct 18, 2018, 7:39 AM IST
ಬೆಂಗಳೂರು: ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ತೀವ್ರ ಕಲ್ಲಿದ್ದಲು ಅಭಾವ ತಲೆ ದೋರಿದೆ. ರಾಯಚೂರಿನ ಆರ್ಟಿಪಿಎಸ್ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಶೂನ್ಯಕ್ಕಿಳಿದಿದ್ದರೆ, ಉಳಿದೆಡೆ ಅಲ್ಪಸ್ವಲ್ಪ ದಾಸ್ತಾನು ಸಂಗ್ರಹವಷ್ಟೇ ಇದ್ದು, ಸೂಪರ್ ಕ್ರಿಟಿಕಲ್ ಸ್ಥಿತಿಗೆ ತಲುಪಿವೆ.
ರಾಜ್ಯದ ಉಷ್ಣ ಸ್ಥಾವರಗಳಿಗೆ ಪ್ರಧಾನವಾಗಿ ಕಲ್ಲಿದ್ದಲು ಪೂರೈಸುತ್ತಿರುವ ಮಹಾರಾಷ್ಟ್ರದ ವೆಸ್ಟ್ರನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಡಬ್ಲೂಸಿಎಲ್) ನಿಗದಿತ ಪ್ರಮಾಣಕ್ಕಿಂತ ಶೇ.55ರಷ್ಟು ಕಡಿಮೆ ಕಲ್ಲಿದ್ದಲು ಪೂರೈಸುತ್ತಿರುವುದರಿಂದ ತೀವ್ರ ಅಭಾವ ತಲೆದೋರಿದೆ. ಜತೆಗೆ ತೆಲಂಗಾಣದ ಸಿಂಗರೇಣಿ ಕೊಲಿರೀಸ್ ಕಂಪನಿ ಲಿಮಿಟೆಡ್ (ಎಸ್ಸಿಸಿಎಲ್) ಕೂಡ ನಿಗದಿಗಿಂತ ಶೇ.20ರಷ್ಟು ಕಡಿಮೆ ಪ್ರಮಾಣದಲ್ಲಿ ಕಲ್ಲಿದ್ದಲು ವಿತರಿಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ರಾಜ್ಯದಲ್ಲಿ ಮುಂಗಾರು ಮುಗಿದು ಮಳೆ ಪ್ರಮಾಣ ತಗ್ಗುತ್ತಿದ್ದಂತೆ ವಿದ್ಯುತ್ ಬೇಡಿಕೆ ಏರುಮುಖವಾಗಿದೆ. ಸದ್ಯ ಸರಾಸರಿ 10,000ದಿಂದ 10,500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದ್ದು, ಉಷ್ಣ ವಿದ್ಯುತ್ ಉತ್ಪಾದನೆ ಮೇಲೆ ಹೆಚ್ಚಿನ ಒತ್ತಡವಿದೆ. ಆದರೆ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಕೊರೆಯಾಗಿ ಕ್ಷಾಮ ತಲೆದೋರುವ ಆತಂಕವಿದೆ.
ದಾಸ್ತಾನು ಶೂನ್ಯ: ರಾಯಚೂರಿನ ಆರ್ಟಿಪಿಎಸ್ ಸದ್ಯ ಕಲ್ಲಿದ್ದಲು ದಾಸ್ತಾನು ಪ್ರಮಾಣ ಶೂನ್ಯ ತಲುಪಿದೆ. ಆಯಾ ದಿನ ಪೂರೈಕೆಯಾಗುವ ಕಲ್ಲಿದ್ದಲು ದಹಿಸಿ ವಿದ್ಯುತ್ ಉತ್ಪಾದಿಸುವ ಸಂಕಷ್ಟದ ಸ್ಥಿತಿಗೆ ತಲುಪಿದೆ. ಸಾಮಾನ್ಯವಾಗಿ ಉಷ್ಣ ಸ್ಥಾವರಗಳಲ್ಲಿ ತಿಂಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರಬೇಕು. 10 ದಿನಕ್ಕೆ ಅಗತ್ಯವಾದಷ್ಟು ಕಲ್ಲಿದ್ದಲು ದಾಸ್ತಾನು ಇದ್ದರೆ ಕ್ರಿಟಿಕಲ್ ಸ್ಥಿತಿ ಎಂದು ಪರಿಗಣಿಸಲಾಗುತ್ತಿದೆ. ಸದ್ಯ ದಾಸ್ತಾನು ಸಂಪೂರ್ಣ ಖಾಲಿಯಾಗಿರುವುದರಿಂದ ಸೂಪರ್ ಕ್ರಿಟಿಕಲ್ ಸ್ಥಿತಿಗೆ ತಲುಪಿದೆ. ಹಾಗಾಗಿ ಎಂಟು ಘಟಕಗಳ ಪೈಕಿ ಒಂದು ಘಟಕ ವಾರ್ಷಿಕ ನಿರ್ವಹಣೆಯಡಿ ಸ್ಥಗಿತವಾಗಿದ್ದರೆ ಇನ್ನು ಮೂರು ಘಟಕಗಳು ಕಲ್ಲಿದ್ದಲು ಕೊರತೆ ಕಾರಣಕ್ಕೆ ಉತ್ಪಾದನೆ ಸ್ಥಗಿತಗೊಂಡಿದೆ. ಹಾಗಾಗಿ ನಾಲ್ಕು ಘಟಕಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ.
ಬಳ್ಳಾರಿಯ ಬಿಟಿಪಿಎಸ್ನಲ್ಲಿ 37,000 ಟನ್ ಕಲ್ಲಿದ್ದಲು ದಾಸ್ತಾನು ಇದೆ. ಸದ್ಯ ಒಂದು ಘಟಕವನ್ನಷ್ಟೇ ಕಾರ್ಯಾಚರಣೆಯಲ್ಲಿಟ್ಟುಕೊಂಡು ಕಲ್ಲಿದ್ದಲು ದಾಸ್ತಾನಿಗೆ ಪ್ರಯತ್ನ ನಡೆದಿದೆ. ಯರಮರಸ್ನ ವೈಟಿಪಿಎಸ್ ಸ್ಥಾವರದಲ್ಲಿ ಒಂದು ಘಟಕವಷ್ಟೇ ವಿದ್ಯುತ್ ಉತ್ಪಾದಿಸುತ್ತಿದ್ದು, ಸದ್ಯ 75,000 ಟನ್ ಕಲ್ಲಿದ್ದಲು ದಾಸ್ತಾನು ಇದೆ. ಆರ್ಟಿಪಿಎಸ್ಗೆ ಸಮರ್ಪಕವಾಗಿ ಕಲ್ಲಿದ್ದಲು ಪೂರೈಕೆಯಾಗದಿದ್ದಾಗ ಉಳಿದ ಸ್ಥಾವರಗಳಲ್ಲಿನ ದಾಸ್ತಾನು ಬಳಸಬೇಕಾದ ಸ್ಥಿತಿ ಇದೆ. ಕಲ್ಲಿದ್ದಲು ಕೊರತೆಗೆ ಕಾರಣ: ಮಹಾರಾಷ್ಟ್ರದ ಡಬ್ಲೂಸಿಎಲ್ ಸಂಸ್ಥೆಯು ರಾಜ್ಯಕ್ಕೆ ಪೂರೈಸಬೇಕಾದ ಕಲ್ಲಿದ್ದಲು ಪ್ರಮಾಣದಲ್ಲಿ ಶೇ.45ರಷ್ಟು ಮಾತ್ರ ಪೂರೈಸುತ್ತಿದೆ. ಕಳೆದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ನಿಗದಿತ ಪ್ರಮಾಣಕ್ಕಿಂತ ಶೇ.55ರಷ್ಟು ಕಲ್ಲಿದ್ದಲು ಕಡಿಮೆ ಪೂರೈಸಿರುವುದರಿಂದ ತೀವ್ರ ಅಭಾವ ಸೃಷ್ಟಿಯಾಗಿದೆ. ಎಸ್ಸಿಸಿಎಲ್ ಸಂಸ್ಥೆಯು ಶೇ.80ರಷ್ಟು ಕಲ್ಲಿದ್ದಲು ಪೂರೈಸುತ್ತಿರುವುದರಿಂದ ಶೇ.20ರಷ್ಟು ಕಲ್ಲಿದ್ದಲು ಕೊರತೆ ತಲೆದೋರಿದೆ.
ನಿಗದಿತ ಕಲ್ಲಿದ್ದಲು ಪೂರೈಕೆಗೆ ಮನವಿ
ಡಬ್ಲೂಸಿಎಲ್ ಸಂಸ್ಥೆ ನಿತ್ಯ ಗಣಿಗಾರಿಕೆಯಿಂದ ಹೊರತೆಗೆಯುವ ಕಲ್ಲಿದ್ದಲು ಪ್ರಮಾಣದಲ್ಲಿ ಸಿಂಹಪಾಲು ಮಹಾರಾಷ್ಟ್ರ,, ಗುಜರಾತ್ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಆದರೆ ಕರ್ನಾಟಕಕ್ಕೆ ಹಂಚಿಕೆಯಾದಷ್ಟು ಕಲ್ಲಿದ್ದಲು ಪೂರೈಸದೆ ತಾರತಮ್ಯ ತೋರುತ್ತಿದೆ. ಇದರಿಂದಾಗಿ ಕಲ್ಲಿದ್ದಲು ಅಭಾವ ಸೃಷ್ಟಿಯಾಗಿದೆ. ಆಯಾ ದಿನ ಪೂರೈಕೆಯಾಗುವ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಸ್ಥಿತಿ ಗಂಭೀರವಾದುದು. ಹಾಗಾಗಿ ಗಣಿ ಸಂಸ್ಥೆಗಳು ಒಪ್ಪಂದದನ್ವಯ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುವಂತೆ ಮನವಿ ಮಾಡಲಾಗುತ್ತಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.
ಕಲ್ಲಿದ್ದಲು ಪೂರೈಕೆಗೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು: ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ತೀವ್ರ ಕಲ್ಲಿದ್ದಲು ಕೊರತೆ ತಲೆದೋರಿದ್ದು, ಕೇಂದ್ರ ಸರ್ಕಾರಿ ಸ್ವಾಮ್ಯದ ಡಬ್ಲೂಸಿಎಲ್ ಸಂಸ್ಥೆಯು ಒಪ್ಪಂದದ ಪ್ರಕಾರ ಕಲ್ಲಿದ್ದಲು ಪೂರೈಸದಿರುವುದೇ ಇದಕ್ಕೆ ಕಾರಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ದೂರಿದ್ದಾರೆ. ನಿತ್ಯ 1,720 ಮೆ.ವ್ಯಾ.ವಿದ್ಯುತ್ ಉತ್ಪಾದನೆ ಸಾಮರ್ಥಯವಿರುವ ರಾಯಚೂರಿನ ಆರ್ಟಿಪಿಎಸ್ ಘಟಕದಲ್ಲಿ ಕಲ್ಲಿದ್ದಲು ದಾಸ್ತಾನು ಶೂನ್ಯಕ್ಕೆ ತಲುಪಿದೆ.
ಡಬ್ಲೂಸಿಎಲ್ ಸಂಸ್ಥೆಯು ಈವರೆಗೆ ಪೂರೈಸಬೇಕಾದ ಕಲ್ಲಿದ್ದಲು ಪ್ರಮಾಣದಲ್ಲಿ 6 ಲಕ್ಷ ಟನ್ ಕಲ್ಲಿದ್ದಲು ಪೂರೈಸಿಲ್ಲ. ಈ ಕೊರತೆ ನೀಗಿಸಲು ಎಂಸಿಎಲ್ ಸಂಸ್ಥೆ ಮೂಲಕ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಕಲ್ಲಿದ್ದಲು ಸಚಿವರಾದ ಪಿಯೂಷ್ ಗೋಯೆಲ್ ಅವರಿಗೆ ಪತ್ರದ ಮುಖೇನ ಮನವಿ ಮಾಡಲಾಗಿದೆ. ಹಾಗೆಯೇ ಡಬ್ಲೂಸಿಎಲ್ ಸಂಸ್ಥೆಗೆ ಒಪ್ಪಂದದ ಪ್ರಕಾರ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ವ್ಯವಸ್ಥೆ ಕಲ್ಪಿಸುವ ಮೂಲಕ ರಾಜ್ಯದಲ್ಲಿ ವಿದ್ಯುತ್ ಪೂರೈಕೆಗೆ ಸಹಕರಿಸು ವಂತೆಯೂ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್