ಮನೆ ಕಟ್ಟಲು ಪರವಾನಗಿಗೆ ಏಕಗವಾಕ್ಷಿ ಪದ್ಧತಿ ಜಾರಿ
Team Udayavani, Oct 21, 2018, 6:20 AM IST
ರಾಯಚೂರು: ನಗರ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಎಲ್ಲ ಮಾದರಿಯ ಪರವಾನಗಿ ನೀಡಲು ಏಕಗವಾಕ್ಷಿ ಪದ್ಧತಿ ಜಾರಿಗೆ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಅನುಷ್ಠಾನ ಮಾಡಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ವಸತಿ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಮುಂಚೆ ನಗರಸಭೆ, ಕೆಇಬಿ, ಅಗ್ನಿಶಾಮಕ ದಳ ಹೀಗೆ ನಾನಾ ರೀತಿಯ ಪರವಾನಗಿ ಪಡೆಯಲು ಜನರು ಸಾಕಷ್ಟು ಓಡಾಡಬೇಕಿತ್ತು. ಆದರೆ, ಈ ತಾಪತ್ರಯ ತಪ್ಪಿಸಲು ಒಂದೇ ಬಾರಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, 30 ದಿನದೊಳಗೆ ಪರವಾನಗಿ ಪಡೆಯಬಹುದು. ಒಂದು ವೇಳೆ 30 ದಿನದೊಳಗೆ ಪರವಾನಗಿ ಸಿಗದಿದ್ದಲ್ಲಿ ಅದು ಅಂಗೀಕೃತ ಎಂದರ್ಥ. ಸಂಬಂ ಧಿಸಿದ ಇಲಾಖೆಗಳ ಅಧಿಕಾರಿಗಳು ಒಂದೇ ದಿನ ಸ್ಥಳ ವೀಕ್ಷಣೆಗೆ ಬರುವರು. ಅವರು ಬರುವ ಮುನ್ನ ಅರ್ಜಿದಾರರ ಮೊಬೈಲ್ಗೆ ಎಸ್ಎಂಎಸ್ ಬರಲಿದೆ. ಇದರಿಂದ ಅರ್ಜಿದಾರರಿಗೆ ಓಡಾಡುವ ಶ್ರಮ ತಪ್ಪಲಿದ್ದು, ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳಲಿದೆ.
ಆರಂಭದಲ್ಲಿ ರಾಜ್ಯದ ಆಯ್ದ ಎಂಟು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ. ನಂತರ ಹಂತ ಹಂತವಾಗಿ ಎಲ್ಲೆಡೆ ಜಾರಿಗೊಳಿಸಲಾಗುವುದು ಎಂದರು.