ಪ್ರತಿ ತಾಲೂಕಿಗೂ ನರ್ಸರಿ ಆರಂಭ: ಆರ್.ಶಂಕರ್
Team Udayavani, Oct 25, 2018, 6:00 AM IST
ಕೊಪ್ಪಳ: ನಾಡು ಹಸಿರೀಕರಣ ಮಾಡಲು ರೈತರ ಪ್ರತಿ ಎಕರೆ ಭೂಮಿಗೆ ಸಸಿಗಳನ್ನು ಕೊಡಬೇಕೆನ್ನುವ ಯೋಜನೆಯಿದೆ. ಗಂಧದ ಗಿಡಗಳಿಗೆ ಬೇಡಿಕೆಯಿದೆ. ಹಾಗಾಗಿ ಪ್ರತಿ ತಾಲೂಕಿಗೊಂದು ನರ್ಸರಿ ಘಟಕ ಆರಂಭಿಸುವ ಚಿಂತನೆ ನಡೆದಿದೆ ಎಂದು ಅರಣ್ಯ ಸಚಿವ ಆರ್. ಶಂಕರ್ ಹೇಳಿದರು.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಆವರು, ನಾಡಿನ ಹಸಿರೀಕರಣಕ್ಕಾಗಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ 3-4 ವರ್ಷದಲ್ಲಿ ಶೇ.19ರಷ್ಟಿದ್ದ ಅರಣ್ಯೀಕರಣ ಪ್ರದೇಶ ಈಗ ಶೇ.21ಕ್ಕೆ ಏರಿದೆ. ಪ್ರತಿ ತಾಲೂಕಿಗೊಂದು ನರ್ಸರಿ ಆರಂಭಿಸಬೇಕು ಎಂದು ಯೋಜನೆ ರೂಪಿಸಿದ್ದೇವೆ.
ನರ್ಸರಿ ಆರಂಭಿಸಿದರೆ ಸ್ಥಳೀಯವಾಗಿಯೇ ಸಸಿಗಳು ನಮಗೆ ಲಭ್ಯವಾಗಲಿವೆ. ಬೇರೆ ಕಡೆಯಿಂದ ಸಸಿ ತರುವುದಕ್ಕಿಂತ ಸ್ಥಳೀಯವಾಗಿಯೇ ಸಸಿ ಸಿಗಲಿವೆ ಎಂದರು. ಅರಣ್ಯ ಇಲಾಖೆಯಿಂದ 8ನೇ ತರಗತಿ ಪ್ರತಿ ವಿದ್ಯಾರ್ಥಿಗೆ 10ಸಸಿ ಕೊಡಬೇಕೆನ್ನುವ ಚಿಂತನೆಯಿದೆ. ವಿದ್ಯಾರ್ಥಿಗಳು 10ಸಸಿಗಳಲ್ಲಿ ಎಷ್ಟು ಸಸಿಗಳನ್ನು ಚೆನ್ನಾಗಿ ಬೆಳೆಸುತ್ತಾರೋ ಅಷ್ಟು ಕೃಪಾಂಕಗಳನ್ನು ಕೊಡುವ ಚಿಂತನೆ ನಡೆದಿದೆ. ಅರಣ್ಯೀಕರಣಕ್ಕೆ ನಾವು ಸರ್ವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.