ಕಾಗದ ರಹಿತ ವಿಧಾನ ಮಂಡಲಕ್ಕೆ ಇ ವಿಧಾನ್
Team Udayavani, Nov 3, 2018, 6:00 AM IST
ಬೆಂಗಳೂರು: ವಿಧಾನಮಂಡಲದ ಅಧಿವೇಶನ ಒಳಗೊಂಡಂತೆ ಶಾಸಕಾಂಗದ ಎಲ್ಲ ಪತ್ರ ವ್ಯವಹಾರ ಗಣಕೀಕರಣ ಗೊಳಿಸಲು ಹಾಗೂ ಕಾಗದ ರಹಿತ ಶಾಸಕಾಂಗ ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಇ ವಿಧಾನ್ ಅಪ್ಲಿಕೇಷನ್ ಎಂಬ ಮಿಷನ್ ಮೂಡ್ ಯೋಜನೆ ಜಾರಿಗೆ ತರಲು ನಿರ್ದೇಶಿಸಿದೆ. ಇ ವಿಧಾನ್ ಯೋಜನೆಯನ್ನು ಹಿಮಾಚಲ ಪ್ರದೇಶದಲ್ಲಿ ಪ್ರಥಮವಾಗಿ ಜಾರಿಗೆ ತರಲಾಗಿದ್ದು, ಇದರಿಂದ ಪ್ರೇರಿತಗೊಂಡ ಕೇಂದ್ರ ಸರ್ಕಾರ ಒನ್ ನೇಷನ್ ಒನ್ ಅಪ್ಲಿಕೇಷನ್ ಶೀರ್ಷಿಕೆಯಡಿ ಎಲ್ಲ ರಾಜ್ಯಗಳಲ್ಲೂ ಇ ವಿಧಾನ್ ಯೋಜನೆ ಜಾರಿಗೆ ತರಲು ಯೋಜನೆ ರೂಪಿಸಿದೆ.
ಶುಕ್ರವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ರ್ಯಕ್ರಮದಲ್ಲಿ ಇ ವಿಧಾನ್ ಪ್ರಶಿಕ್ಷಣ ಕಾರ್ಯಾಗಾರ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿ, ಈ ಯೋಜನೆ ಒಂದು ಮೈಲಿಗಲ್ಲಾಗಿದೆ. ಈ ಯೋಜನೆ ಪ್ರಾಮಾಣಿಕವಾಗಿ ಜಾರಿಗೆ ತರಲು ಎಲ್ಲ ಅಧಿಕಾರಿ ವರ್ಗದವರು ಶ್ರಮಿಸಬೇಕು ಎಂದು ಹೇಳಿದರು.
ಸಂಸದೀಯ ವ್ಯವಹಾರಗಳ ಮಂತ್ರಾಲಯದ ಅಧಿಕಾರಿಗಳು ರಾಜ್ಯ ವಿಧಾನಸಭೆ ಸಚಿವಾಲಯದ ಅಧಿಕಾರಿ/ ನೌಕರರಿಗೆ ಮೊದಲ ಹಂತದಲ್ಲಿ ವಿಧಾನಮಂಡಲದ ಮಾಹಿತಿಗಳನ್ನು ಸದಸ್ಯರಿಗೆ ಅಂತರ್ಜಾಲ ಹಾಗೂ ಮೊಬೈಲ್ಗಳಲ್ಲಿ ಹೇಗೆ ಒದಗಿಸಬೇಕೆಂಬ ಬಗ್ಗೆ ತರಬೇತಿ ಸಹ ನೀಡಿದರು.
ವಿಧಾನಸಭೆ ಉಪಾಧ್ಯಕ್ಷ ಕೆ.ಎಂ.ಕೃಷ್ಣಾರೆಡ್ಡಿ, ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.