ಬೋಗಸ್ ಮತ: ರುದ್ರೇಶ್ ಆರೋಪ
Team Udayavani, Nov 5, 2018, 6:00 AM IST
ರಾಮನಗರ: ವಿಧಾನಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಮತದಾನ ಬೆಳಗ್ಗೆಯಿಂದಲೂ ನೀರಸವಾಗಿ ನಡೆಯುತ್ತಿತ್ತು. ಆದರೆ, ಸಂಜೆ 5 ಗಂಟೆ ನಂತರ ಶೇ.20ಕ್ಕೂ ಹೆಚ್ಚು ಮತದಾನವಾಗಿದ್ದು, ಈ ಬಗ್ಗೆ ತಮಗೆ ಅನುಮಾನ ಇದೆ. ಈ ಸಂಬಂಧ ಜಿಲ್ಲಾಡಳಿತ ಸ್ಪಷ್ಟೀಕರಣ ಕೊಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾನದ ಕೊನೆಯ ಒಂದು ಗಂಟೆಯಲ್ಲಿ ಕನಕಪುರದಿಂದ ಬಂದ ಕೆಲವರು ಬೋಗಸ್ ಮತ ಹಾಕಿರುವುದಾಗಿ ಮಾಹಿತಿ ಇದೆ. ನ್ಯಾಯಯುತವಾಗಿ ಮತದಾನ ನಡೆದಿಲ್ಲ ಎಂದು ಆರೋಪಿಸಿದರು. ಮತದಾನಕ್ಕೆ ಎರಡು ದಿನ ಇದ್ದಾಗ ತಮ್ಮ ಪಕ್ಷದ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಣದಿಂದ ಹೊರ ನಡೆದಿರುವುದರ ಹಿಂದೆ ಎಷ್ಟು ಡೀಲ್ ಆಗಿದೆ ಎಂಬುದರ ಬಗ್ಗೆ ತಮಗೆ ಮಾಹಿತಿ ಇದೆ.
ಸಚಿವ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬಂದು, ಚಂದ್ರಶೇಖರ್ ಅವರ ವಿಚಾರದಲ್ಲಿ ಡೀಲ್ ಇತ್ಯರ್ಥಗೊಳಿಸಿರುವ ಬಗ್ಗೆಯೂ ಮಾಹಿತಿ ಇದೆ. ಆದರೆ, ಡಿಕೆಶಿ ಅವರು ಬಳ್ಳಾರಿಯಲ್ಲಿ ತಮಗೇನು ಗೊತ್ತೇ ಇಲ್ಲ ಎಂಬಂತೆ ವರ್ತಿಸಿದ್ದಾರೆ. ರಾಜ್ಯದ ಜನತೆಗೆ ಸುಳ್ಳು ಹೇಳಿದ್ದಾರೆ. ಡೀಲ್ ಆಗಿಲ್ಲ ಎಂಬುದಕ್ಕೆ ರಾಮನಗರದ ಜಾಮುಂಡೇಶ್ವರಿ ಅಮ್ಮನವರ ಬಳಿ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಈ ಎಲ್ಲಾ ವಿಚಾರಗಳ ಬಗ್ಗೆ ರಾಜ್ಯ ನಾಯಕರ ಮಾರ್ಗದರ್ಶನ ಪಡೆದು ಕಾನೂನು ಹೋರಾಟ ಆರಂಭಿಸುವುದಾಗಿ ಅವರು ತಿಳಿಸಿದರು.