ಟ್ರಾಫಿಕ್ ಠಾಣೆಗೆ ನುಗ್ಗಿದ ನಾಗರ!
Team Udayavani, Nov 9, 2018, 6:00 AM IST
ಶಿವಮೊಗ್ಗ: ನಗರದ ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಗೆ ಗುರುವಾರ ನಾಗರ ಹಾವೊಂದು ನುಗ್ಗಿ ಕೆಲ ಕಾಲ ಆತಂಕ ಸೃಷ್ಟಿಸಿತು. ಠಾಣೆಯಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ ರಘುಚಂದ್ರ ಎಂಬುವರು ಮಧ್ಯಾಹ್ನ ಠಾಣೆ ಒಳಗೆ ಬರುತ್ತಿದ್ದಂತೆ ಕಂಪ್ಯೂಟರ್ ರೂಮ್ ಪಕ್ಕದ ಕೋಣೆಯಲ್ಲಿ ಕಾಣಿಸಿ ಕೊಂಡಿದೆ. ತಕ್ಷಣ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಮೇಲಧಿಕಾರಿಗಳು ಉರಗ ತಜ್ಞ
ಕಿರಣ್ಗೆ ಫೋನ್ ಮಾಡಿ ಕರೆಸಿದರು. ಸ್ನೇಕ್ ಕಿರಣ್ ಆಗಮಿಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.
ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯು ಸಂಪೂರ್ಣ ಶಿಥಿಲಗೊಂಡಿದ್ದು ಕ್ರಿಮಿಕೀಟ, ವಿಷಜಂತುಗಳ ಕಾಟ ನಿರಂತರವಾಗಿದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ. ಈ ಹಿಂದೆ ಎರಡು ಮೂರು ಬಾರಿ ಹಾವು ಕಾಣಿಸಿಕೊಂಡಿದೆ. ಠಾಣೆಯೊಳಗೆ ಕಪ್ಪೆಗಳ ಪ್ರವೇಶ ಸಾಮಾನ್ಯವಾಗಿದ್ದು ಕಪ್ಪೆ ವಾಸನೆ ಹಿಡಿದು ಹಾವು ಬಂದಿರಬಹುದು ಎಂದು ಶಂಕಿಸಲಾಗಿದೆ. ಈ ಕಟ್ಟಡವನ್ನು ಕೆಡವಲು ಈಗಾಗಲೇ ಆದೇಶ ದೊರೆತಿದ್ದು ಪರ್ಯಾಯ ಕಟ್ಟಡಕ್ಕೆ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಎಂಆರ್ಎಸ್ ಬಳಿಯ ಬಾಡಿಗೆ ಕಟ್ಟಡಕ್ಕೆ ಠಾಣೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.