ಹುಟ್ಟೂರಲ್ಲಿ ರೆಬೆಲ್ ಸ್ಟಾರ್:ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ
Team Udayavani, Nov 25, 2018, 5:15 PM IST
ಮಂಡ್ಯ: ರೆಬೆಲ್ ಸ್ಟಾರ್ ಅವರ ಅಂತಿಮ ದರ್ಶನಕ್ಕೆ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜನಸಾಗರವೇ ಹರಿದು ಬಂದಿದೆ. ನೆಚ್ಚಿನ ಜನನಾಯಕನನ್ನು ಕೊನೇ ಬಾರಿಗೆ ನೋಡಲು ಕಿಲೋಮೀಟರ್ಗಟ್ಟಲೇ ಉದ್ದನೆಯ ಸಾಲುಗಳಲ್ಲಿ ಜನ ನಿಂತಿದ್ದಾರೆ.
ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಕಂಠೀರವ ಕ್ರೀಡಾಂಗಣದಿಂದ ವಿಶೇಷ ಅಂಬುಲೆನ್ಸ್ ಮೂಲಕ ಝಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಾಯುಪಡೆಯ ಹೆಲಿಕ್ಯಾಪ್ಟರ್ ಮೂಲಕ ಸಂಜೆ 5 ಗಂಟೆಗೆ ಮಂಡ್ಯಕ್ಕೆ ತರಲಾಯಿತು.
ನಾಳೆ ಬೆಳಗ್ಗೆ 6ಗಂಟೆಯ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಕಂಠೀರವ ಸ್ಟುಡಿಯೊ
ಮಧ್ಯಾಹ್ನ ದಿಂದಲೇ ಅಂಬರೀಶ್ ಅಭಿಮಾನಿಗಳು ಕ್ರೀಡಾಂಗಣದ ಸುತ್ತ ನೆರೆದಿದ್ದು, ರಾತ್ರಿ ಇಡೀ ಮಂಡ್ಯದ ಸಾಟಿಯಿಲ್ಲದ ನಾಯಕನ ಕೊನೇ ಬಾರಿಯ ದರ್ಶನ ಪಡೆಯಲಿದ್ದಾರೆ.
ಯುವಕರು, ವೃದ್ಧರು , ಮಹಿಳೆಯರು ಈಗಾಗಲೇ ಅಂತಿಮ ದರ್ಶನಕ್ಕಾಗಿ ಆಗಮಿಸಿದ್ದು ಕಣ್ಣೀರಿಡುತ್ತಿದ್ದಾರೆ.
ಅಂಬರೀಶ್ ಅವರ ಪಾರ್ಥೀವ ಶರೀರ ಕಂಡೊಡನೆಯೇ ನೆರೆದಿದ್ದ ಸಾವಿರಾರು ಮಂದಿ ಅಂಬರೀಶ್ ಅಣ್ಣಂಗೆ…ಜೈ..ಮಂಡ್ಯದ ಗಂಡಿಗೇ…ಮತ್ತೆ ಹುಟ್ಟಿ ಬನ್ನಿ ಅಂತ ಜೈಕಾರಗಳನ್ನು ಕೂಗಿದರು.
ಮಂಡ್ಯದಲ್ಲಿ ಅಭಿಮಾನಿಗಳ ಭಾರೀ ಒತ್ತಾಯದ ಹಿನ್ನಲೆಯಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಾಲಾಗಿದೆ. ಜನರ ಆಕ್ರೋಶ ಗಮನಿಸಿದ ಸಿಎಂ ಎಚ್ಡಿಕೆ ಅವರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿ ಸೇನಾ ಹೆಲಿಕ್ಯಾಪ್ಟರ್ಗಳ ವ್ಯವಸ್ಥೆ ಮಾಡಲಾಗಿತ್ತು.