ಮಾಜಿ ಸಂಸದೆ ರಮ್ಯಾ ಗೈರಿಗೆ ಡಿ.ಕೆ.ಶಿವಕುಮಾರ್ ಸಮಜಾಯಿಷಿ
Team Udayavani, Nov 28, 2018, 6:00 AM IST
ಬೆಂಗಳೂರು: ಹಿರಿಯ ನಟ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಮಾಜಿ ಸಂಸದೆ ರಮ್ಯಾ ಆಗಮಿಸದಿರುವ ಬಗ್ಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ. ರಮ್ಯಾ ಅವರ ಕಾಲಿಗೆ ಪೆಟ್ಟಾಗಿ ನಡೆಯಲಾಗದ ಸ್ಥಿತಿಯಲ್ಲಿ ಇರುವುದರಿಂದ ಅಂಬರೀಶ್ ಅವರ ಅಂತ್ಯ ಸಂಸ್ಕಾರಕ್ಕೆ ಆಗಮಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರು ನಿಧನರಾದ ನಂತರ ರಮ್ಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಯಿತು. ಅವರು ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವುದರಿಂದ ಅಂಬರೀಶ್ ಅಂತ್ಯ ಸಂಸ್ಕಾರಕ್ಕೆ ಬರಲು ಆಗಿಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಈ ಬೆಳವಣಿಗೆಗಳ ಬೆನ್ನಲ್ಲೇ ರಮ್ಯಾ ತಮ್ಮ ಕಾಲಿಗೆ ಪೆಟ್ಟಾಗಿ ನಡೆಯಲು ಬಾರದ ಸ್ಥಿತಿಯಲ್ಲಿದೆ ಎಂಬ ಬಗ್ಗೆ ಇನ್ಸ್ಟ್ರಾಗ್ರಾಂನಲ್ಲಿ ಫೋಟೊ ಅಪ್ಲೋಡ್ ಮಾಡಿದ್ದು, ತಾವು ಇನ್ನು ಕೆಲವು ದಿನಗಳವರೆಗೆ ನಡೆದಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ನನ್ನ ಕಾಲಿಗೆ ಕ್ಯಾನ್ಸರ್ ತಗುಲಿಲ್ಲ ಎಂದು ಸಂದೇಶ ಪೋಸ್ಟ್ ಮಾಡಿದ್ದಾರೆ. ಜತೆಗೆ ಸಲಹೆಯನ್ನೂ ನೀಡಿರುವ ರಮ್ಯಾ, ಯಾರಿಗಾದರೂ ದೇಹದಲ್ಲಿ ನೋವು ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನನ್ನ ಹಾಗೆ ನಿರ್ಲಕ್ಷ್ಯ ಮಾಡಬೇಡಿ. ದೊಡ್ಡ ಗಾತ್ರದ ಗಡ್ಡೆ ಉಂಟಾಗುವ ಸಾಧ್ಯತೆ ಇದ್ದು, ಈ ರೀತಿಯ ಸಮಸ್ಯೆ ಒಂದು ಮಿಲಿಯನ್ ಮಹಿಳೆಯರಲ್ಲಿ ಒಬ್ಬರಿಗೆ ತಗಲುತ್ತದೆ. ಅದು ಮಾರಣಾಂತಿಕವಾಗುವ ಸಾಧ್ಯತೆ ಇದೆ. ಹೀಗಾಗಿ ಅದನ್ನು ಆರಂಭದಲ್ಲಿಯೇ ತಡೆಯುವ ಪ್ರಯತ್ನ ಮಾಡಬೇಕು. ಅಲ್ಲದೇ ನನ್ನ ದೇಹದ ನೋವಿಗೆ
ಸ್ಪಂದಿಸಬೇಕು ಎನ್ನುವುದು ನಾನು ಕಲಿತ ದೊಡ್ಡ ಪಾಠ ಎಂದೂ ಹೇಳಿಕೊಂಡಿದ್ದಾರೆ.