ತೆಲಂಗಾಣ ರಾಜ್ಯಪಾಲರ ಪೌರೋಹಿತ್ಯದಲ್ಲಿ ವಿವಾಹ
Team Udayavani, Dec 3, 2018, 6:55 AM IST
ಗಂಗಾವತಿ: ತೆಲಂಗಾಣ ರಾಜ್ಯಪಾಲರ ಸೂಚನೆಯಂತೆ ಸಮೀಪದ ವಿದ್ಯಾನಗರದ ಶ್ರೀರಾಮ ಮಂದಿರದಲ್ಲಿ ಪ್ರೇಮಿಗಳಾದ ನಿರಂಜನಿ ಮನ್ನೆ ಮತ್ತು ವೆಂಕಟ ಭಾರ್ಗವ್ ಅವರ ಮದುವೆ ಪೊಲೀಸರ ಬಿಗಿಭದ್ರತೆ ನಡುವೆ ಭಾನುವಾರ ನೆರವೇರಿತು.
ಸಿದ್ದಾಪೂರ ಗ್ರಾಮದ ನಿರಂಜನಿ ಮನ್ನೆ ಮತ್ತು ಉಳೇನೂರಿನ ವೆಂಕಟ ಭಾರ್ಗವ್ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಪರಸ್ಪರ ಪರಿಚಯವಾಗಿದ್ದು, ಇದು ಪ್ರೇಮಕ್ಕೆ ತಿರುಗಿ ಮದುವೆ ಹಂತಕ್ಕೆ ಬಂದಿದೆ. ಮನೆಯವರು ಈ ಮದುವೆಗೆ ನಿರಾಕರಿಸಿದ್ದ ಸಂದರ್ಭದಲ್ಲಿ ಪ್ರೇಮಿಗಳು ಹೈದ್ರಾಬಾದ್ನ ಮಹಿಳಾ ಮಂಡಳಿಯ ನೆರವಿನಿಂದ ತೆಲಂಗಾಣ ರಾಜ್ಯಪಾಲ ನರಸಿಂಹನ್ ಅವರನ್ನು ಭೇಟಿಯಾಗಿ ಸಹಾಯ ಕೋರಿದ್ದರು. ರಾಜ್ಯಪಾಲ ನರಸಿಂಹನ್ ಅವರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿ ಮದುವೆಯಾಗಲು ಸಹಕರಿಸುವಂತೆ ಸೂಚಿಸಿದ್ದರು. ಈ ಸಂದರ್ಭದಲ್ಲಿ ಯುವಕ, ಯುವತಿ ಕಡೆಯವರು ಪರಸ್ಪರ ಜಗಳವಾಡಿಕೊಂಡಿದ್ದರು. ತೆಲಂಗಾಣ ಪೊಲೀಸರು ಪ್ರೇಮಿಗಳನ್ನು ಕರೆತಂದು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿ, ಮದುವೆ ಮಾಡಿಸುವಂತೆ ಮನವಿ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ವಿದ್ಯಾನಗರದ ಶ್ರೀರಾಮ ಮಂದಿರದಲ್ಲಿ ಪೊಲೀಸ್ ಬಿಗಿಭದ್ರತೆ ನಡುವೆ ವಿವಾಹ ಜರುಗಿತು. ಯುವಕನ ತಾಯಿ ಹೈದರಾಬಾದ್ ಮೂಲದವರು.
ಇಬ್ಬರು ವಯಸ್ಕರಾಗಿದ್ದರಿಂದ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಯುವತಿ ಮನೆಯವರು ಒಪ್ಪುತ್ತಿಲ್ಲವಾದ್ದರಿಂದ ಮದುವೆಯ ಸಂದರ್ಭದಲ್ಲಿ ಗಲಾಟೆಯಾಗುವ ಸಂಭವ ಇರುವುದರಿಂದ ತಮಗೆ ಪೊಲೀಸ್ ಭದ್ರತೆ ನೀಡುವಂತೆ ಪ್ರೇಮಿಗಳಿಬ್ಬರು ಕೋರಿದ್ದರಿಂದ ಭದ್ರತೆ ನೀಡಲಾಗಿದೆ.
– ಸಂತೋಷ ಬನಹಟ್ಟಿ, ಡಿವೈಎಸ್ಪಿ