ಯಡಿಯೂರಪ್ಪ ದಿಲ್ಲಿಗೆ ದೌಡು
Team Udayavani, Jan 9, 2019, 12:39 AM IST
ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯಲು “ಆಪರೇಷನ್ ಕಮಲ’ದ ಮೂಲಕ ಪ್ರಯತ್ನ ನಡೆಸಿದರೂ ಯಶಸ್ಸು ಕಾಣದೆ ಸರ್ಕಾರ ರಚನೆ ಕಸರತ್ತು ತಣ್ಣಗಾಯಿತು ಎಂಬ ಸ್ಥಿತಿ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲೇ ಯಡಿಯೂರಪ್ಪ ಅವರು ದಿಢೀರ್ ದೆಹಲಿಗೆ ತೆರಳಿ
ವರಿಷ್ಠರನ್ನು ಭೇಟಿಯಾಗಿರುವ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಜ.3ರಂದು ತೆರಳಿದ್ದ ಒಂದು ವಾರ ಕಾಲ ಅಲ್ಲೇ ವಾಸ್ತವ್ಯ ಹೂಡುವ ಪೂರ್ವನಿಯೋಜಿತ ಕಾರ್ಯಕ್ರಮಗಳನ್ನು ಹಾಕಿಕೊಂಡಿ ದ್ದರು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದೂ ಅವರ ಉದ್ದೇಶವಾಗಿತ್ತು. ಆದರೆ,
ದೆಹಲಿ ನಾಯಕರ ಸೂಚನೆ ಮೇರೆಗೆ ದಿಢೀರ್ ಬೆಂಗಳೂರಿಗೆ ಬಂದು ಮಂಗಳವಾರ ಬೆಳಿಗ್ಗೆ ದೆಹಲಿಗೆ ತೆರಳಿ, ರಾತ್ರಿಯೇ ವಾಪಸ್ಸಾಗಿದ್ದಾರೆ. ಈ ನಡುವೆ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ ಹಾಗೂ ಮಹೇಶ್ ಕಮಟಳ್ಳಿ ಅವರು ದೆಹಲಿಯಲ್ಲಿರುವುದು ಕುತೂಹಲ ಮೂಡಿಸಿದೆ. ಮಂಗಳವಾರ ಅಮಿತ್ ಶಾ ಅವರ ಭೇಟಿಗೆ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಹಾಗಾಗಿ ದೆಹಲಿಯಲ್ಲೇ ವಾಸ್ತವ್ಯ ಮುಂದುವರಿಸಿರುವ ಅವರು ಬುಧವಾರ ಅಮಿತ್ ಶಾ ಅವರನ್ನು ಭೇಟಿಯಾಗಲು ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಡಿಕೆಶಿ ಜತೆ ಪ್ರಯಾಣ
ಮಂಗಳವಾರ ಯಡಿಯೂರಪ್ಪ ಹಾಗೂ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ವಿಮಾನನಿಲ್ದಾಣದಿಂದ ದೆಹಲಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದು ಸಹ ಚರ್ಚೆಗೆ ಗ್ರಾಸವಾಗಿದೆ. ಆದರೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕೆಲ ಕೇಂದ್ರ
ಸಚಿವರ ಭೇಟಿಗೆ ತೆರಳಿದ್ದರು ಎಂದು ಅವರ ಆಪ್ತರು ಸಮಜಾಯಿಷಿ ನೀಡಿದ್ದಾರೆ.