ಆಪರೇಷನ್ ಕಮಲ ಭೀತಿಯಿಂದ ಪಾರಾಗಲು ಕಾಂಗ್ರೆಸ್ ಯತ್ನ
Team Udayavani, Jan 24, 2019, 1:31 AM IST
ಬೆಂಗಳೂರು: ಆನಂದ್ ಮೇಲೆ ಹಲ್ಲೆ ನಡೆದಿರುವ ಪ್ರಕರಣ ಕಾಂಗ್ರೆಸ್ಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾಗಿದ್ದು, ಈ ಪ್ರಕರಣದಲ್ಲಿ ಆನಂದ್ ಸಿಂಗ್ ಅವರನ್ನು ರಕ್ಷಣೆ ಮಾಡುವ ಮೂಲಕ ಆಪರೇಷನ್ ಕಮಲದ ಭೀತಿಯಿಂದ ಪಾರಾಗುವ ಪ್ರಯತ್ನ ನಡೆಸುತ್ತಿದೆ.
ಆನಂದ್ ಸಿಂಗ್ ಕೂಡ ಬಿಜೆಪಿಯವರ ಆಪರೇಷನ್ ಕಮಲದ ಪಟ್ಟಿಯಲ್ಲಿ ಇದ್ದರು ಎಂದು ಅನುಮಾನ ಪಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಆಪರೇಷನ್ ಕಮಲಕ್ಕೆ ಒಳಗಾಗುವವರ ಮಾಹಿತಿ ನೀಡಿ ಬಿಜೆಪಿಯ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡುವಲ್ಲಿ ಆನಂದ್ ಸಿಂಗ್ ಮಹತ್ವದ ಪಾತ್ರ ವಹಿಸಿದ್ದರು. ಹೀಗಾಗಿ ಆನಂದ್ ಸಿಂಗ್ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಪಕ್ಷ ತಮ್ಮ ಜೊತೆಗೆ ಇದೆ ಎನ್ನುವುದನ್ನು ಬಿಂಬಿಸಲು ಪ್ರಯತ್ನಿಸುತ್ತಿದೆ.
ಲೋಕಸಭಾ ಚುನಾವಣೆ ದೃಷ್ಠಿಯಿಂದ ಆನಂದ್ ಸಿಂಗ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದು ಬಳ್ಳಾರಿ ರಾಜಕೀಯದಲ್ಲಷ್ಟೇ ಅಲ್ಲ. ಬಿಜೆಪಿ ಆಪರೇಷನ್ ಕಮಲದ ಪ್ರಯತ್ನಕ್ಕೂ ಹಿನ್ನಡೆಯುಂಟು ಮಾಡಿದಂತಾಗುತ್ತದೆ. ಆನಂದ್ ಸಿಂಗ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದರಿಂದ ಬಿಜೆಪಿ ಬಲವಾಗಿ ನಂಬಿರುವ ಶಕ್ತಿ ತಮ್ಮೊಂದಿಗೆ ಉಳಿದಂತಾಗುತ್ತದೆ. ಅಲ್ಲದೆ, ಅವರ ಮೇಲೆ ಹಲ್ಲೆ ನಡೆಸಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಯಾವ ನಾಯಕರೂ ರಕ್ಷಣೆ ನೀಡಬಾರದು ಎಂದು ಹೈಕಮಾಂಡ್ ಕೂಡ ಸ್ಪಷ್ಟ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಗಣೇಶ್ ಪಕ್ಷ ತೊರೆದರೂ, ಆನಂದ್ ಸಿಂಗ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಮೂಲಕ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಲು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದ್ದಾರೆ.