ನಮ್ಮೊಳಗಿನ ಆರ್ಥಿಕ ಅಹಂಕಾರಕ್ಕೆ ಮದ್ದು ಹುಡುಕುವ ಕಾಲ


Team Udayavani, Nov 25, 2017, 1:23 PM IST

25-27.jpg

ನಾವು ಬಳಸುವ ಉತ್ಪನ್ನಗಳ ಸಂಪೂರ್ಣ ಬಳಕೆ ಹಾಗೂ ಬೇಡವೆನಿಸಿದ್ದರ ಮರುಬಳಕೆಯತ್ತ ಗಮನಿಸುವುದೂ ಪರಿಸರ ಸ್ನೇಹಿ ಬದುಕಿನ ಕ್ರಮದಲ್ಲಿ ಒಂದು. ಇದರತ್ತ ಸಂಚರಿಸಲು ನಮ್ಮ ಆರ್ಥಿಕ ಅಹಂಕಾರಕ್ಕೆ ಮದ್ದು ಹುಡುಕಬೇಕು.

ಸಂತೋಷದ ಸಂಗತಿಯೊಂದಿಗೆ ಆರಂಭಿಸೋಣ. ನಾವೀಗ ಸಮಾಧಾನದ ಹೊತ್ತಿನಲ್ಲಿದ್ದೇವೆ. ನಿಧಾನವಾಗಿ ಪರಿಸರ ಜಾಗೃತಿಯ ಮಾತು ಮತ್ತು ಕೃತಿ ಒಟ್ಟೊಟ್ಟಿಗೇ ಆರಂಭವಾಗುತ್ತಿದೆ. ದೇಶದ ಪ್ರತಿ ಊರಿನಲ್ಲೂ ಒಂದಿಷ್ಟು ಮಂದಿ, ಒಂದಿಷ್ಟು ಕುಟುಂಬಗಳು ಇದರತ್ತ ಹೆಜ್ಜೆ ಇಡುತ್ತಿವೆ. ತಮ್ಮದೇ ಆದ ನೆಲೆ ಮತ್ತು ಮಾರ್ಗದಲ್ಲಿ ಪರಿಸರ ಬಗೆಗಿನ ಕಾಳಜಿಯನ್ನು ವ್ಯಕ್ತಪಡಿಸುತ್ತಿವೆ. ಇದರೊಂದಿಗೆ ಕೆಲವು ಸೇವಾ ಸಂಸ್ಥೆಗಳ ರೀತಿಯಲ್ಲಿ ಇದನ್ನೂ ವೃತ್ತಿಯನ್ನಾಗಿಸಿಕೊಳ್ಳದೇ ಹವ್ಯಾಸದ ಮೂಲಕವೇ ನೆರವೇರಿಸುತ್ತಿರುವುದು ಮತ್ತೂಂದು ಖುಷಿ ಸಮಾಚಾರ.

ಪುಣೆಯಿಂದ ಬೆಂಗಳೂರು ವರೆಗೂ ಒಂದಷ್ಟು ಜನರು ವೈಯಕ್ತಿಕವಾಗಿಯೇ ಪರಿಸರ ಸ್ನೇಹಿ ಕೆಲಸ ಮಾಡುತ್ತಿದ್ದಾರೆ. ಪುತ್ತೂರಿನವರೊಬ್ಬರು ನಿತ್ಯವೂ ಪ್ಲಾಸ್ಟಿಕ್‌ ಸಂಗ್ರಹಿಸಿ ಸ್ಥಳೀಯ ಗ್ರಾಮ ಪಂಚಾಯತ್‌ಗಳಿಗೆ ಕೊಡುತ್ತಾ ತಮ್ಮ ಪರಿಸರ ಪ್ರೀತಿಯನ್ನು ತೋರ್ಪಡಿಸಿದ್ದರು. ಇನ್ನೊಂದಿಷ್ಟು ಮಂದಿ ತಮ್ಮದೇ ಆದ ತೋಟಗಳಲ್ಲಿ ನೀರನ್ನು ಉಳಿಸುವ ಮೂಲಕ ಪರಿಸರ ಪ್ರೀತಿ ತೋರುತ್ತಿದ್ದಾರೆ. ಪುಣೆಯಲ್ಲಿ ಒಬ್ಬರು ತಾವು ಬಳಸುವ ಪ್ರತಿ ಹನಿ ನೀರನ್ನೂ ವ್ಯರ್ಥ ಮಾಡಬಾರದೆಂದು ಅದರ ಪುನರ್‌ ಬಳಕೆ ಕುರಿತು ಕಾರ್ಯ ನಿರತರಾಗಿದ್ದಾರೆ. ಮಾಧ್ಯಮಗಳೂ ಇಂಥ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಿರುವುದು ಮತ್ತು ಆ ಮೂಲಕ ಮತ್ತಷ್ಟು ಮಂದಿಯತ್ತ ಪ್ರಸರಿಸುತ್ತಿರುವುದೂ ನಡೆದೇ ಇದೆ.

ಏಕ ಮಾರ್ಗವಿಲ್ಲ
ನಮ್ಮ ಹಿರಿಯರ ಪರಂಪರೆ ಯಾವಾಗಲೂ ನನ್ನನ್ನು ಪ್ರಭಾವಿಸುತ್ತದೆ. ಅದಕ್ಕೆ ಹಲವು ಕಾರಣಗಳಿವೆ. ಎಷ್ಟೊಂದು ಅನಿಶ್ಚಿತಗಳ ಮಧ್ಯೆಯೂ ನಿಶ್ಚಿತ ಬದುಕು ಮುಗಿಸಿದ ತಲೆಮಾರು ಅದು. ಬದುಕನ್ನು ಅನುಭವಿಸುತ್ತಲೇ ತಾವೂ ರಸವಾಗುತ್ತಾ, ತಮ್ಮ ಬದುಕಿನೊಳಗೆ ರಸವನ್ನು ತುಂಬಿಕೊಂಡವರು. ನನ್ನಪ್ಪನ, ದೊಡ್ಡಪ್ಪನ ಬದುಕಿನಲ್ಲಿ ಬೇಸರ ಹಾಗೂ ಈ ಆಧುನಿಕ ಜೀವನ ಶೈಲಿಯ “ಬೋರ್‌’ ಕಂಡಿದ್ದೇ ಇಲ್ಲ. ಇದರೊಂದಿಗೇ ತಮ್ಮನ್ನು ಬದುಕಿಗೆ ಬೆಸೆದುಕೊಂಡದ್ದು ಪರಿಸರವನ್ನು. ಎಷ್ಟು ಬೇಕೋ ಅಷ್ಟನ್ನೇ ಬಳಸುವ ಜೀವನಶೈಲಿಯಲ್ಲಿ ಸಂಗ್ರಹ ಉದ್ದೇಶ ಕಡಿಮೆ. ಅನಗತ್ಯವೆನ್ನುವಷ್ಟು ಸಂಗ್ರಹಿಸಿದ್ದೂ ಇಲ್ಲ. ಹಾಗೆಂದು ಇಲ್ಲವೆಂದು ಕೊರಗಿದ್ದೂ ಇಲ್ಲ. ಇದೇ ಬಹುಶಃ ಅತ್ಯಂತ ಸರಳವಾದ ಪರಿಸರ ಸ್ನೇಹಿ ಬದುಕು ಎಂಬುದೀಗ ನಿಧಾನವಾಗಿ ಅರ್ಥವಾಗುತ್ತಿದೆ. ಇದೇ ಕಾರಣಕ್ಕಾಗಿ ನಮ್ಮ ಬದುಕಿನಲ್ಲೂ ಅಂಥ ಸರಳವಾದ ಎರಡು ಮಾರ್ಗಗಳನ್ನು ಮಾಡಿಕೊಳ್ಳಬೇಕೆನಿಸುವುದು ಸಹಜ.

ಇದು ನನ್ನ ಮೊದಲ ಉದಾಹರಣೆ. ನಮ್ಮ ಊರಿನಲ್ಲಿ ಒಬ್ಬರಿದ್ದರು. ಆ ಸಂದರ್ಭದಲ್ಲಿ ಊರಿನ ಹಲವರಿಗಿಂತ ಇವರು ಕೊಂಚ ಹಣದಲ್ಲಿ ಹೆಚ್ಚಿದವರು. ನಗರದಲ್ಲಿ ಬಂದದ್ದನ್ನು ಒಂದೆರಡು ವಾರದೊಳಗೆ ಮನೆಗೆ ತುಂಬಿಸಿಕೊಳ್ಳಬಲ್ಲಷ್ಟು ಸಮರ್ಥರಿದ್ದರು. ಆಗ ಊರಿನಲ್ಲಿ ಡೆಕ್‌ (ಸ್ಪೀಕರ್‌)ಗಳ ಕಾಲ. ಟೇಪ್‌ ರೆಕಾರ್ಡರ್‌ನಲ್ಲಿ ಹಾಡುಗಳನ್ನು ತುಂಬಿಸಿಕೊಂಡು ಸ್ಪೀಕರ್‌ನಲ್ಲಿ ಹಾಕಿ ಊರಿಗೆಲ್ಲ ಕೇಳಿಸುವುದೆಂದರೆ ಒಂದು ಬಗೆಯ ಪ್ರತಿಷ್ಠೆಯೂ ಹೌದು. ಅದರಂತೆಯೇ ಅವರ ಮಗ ನಗರದಿಂದ ಸ್ಪೀಕರ್‌ ತಂದ. ಇದನ್ನು ಅವರು ಏನಿದು ವಿಶೇಷ ಎಂಬಂತೆ ಕಂಡರು. ಮಗ ಎಲ್ಲವನ್ನೂ ವಿವರಿಸಿದ. ಒಂದಿಷ್ಟು ದಿನಗಳ ಕಾಲ ಸ್ಪೀಕರ್‌ ಆ ಮನೆಯಲ್ಲಿ ಕುಣಿಯಿತು.

ಎರಡು ವರ್ಷಗಳೆನ್ನುವಷ್ಟರಲ್ಲಿ ಟ್ರೆಂಡ್‌ ಬದಲಾಯಿತು. ಮಗನೂ ಅದರ ಬಗ್ಗೆ ಆಸಕ್ತಿ ಕಳೆದುಕೊಂಡ. ಇವರಿಗೆ ಅದರ ಮೇಲೆ ಇದ್ದ ಒಲವು ಕಡಿಮೆ. ಸ್ಪೀಕರ್‌ ಹಾಕಿದಾಗಲೆಲ್ಲ ಪಕ್ಕದ ಮನೆಯವನ ಹುಡುಗ ಬಂದು ನಿಂತು ಕಣ್ಣರಳಿಸಿ ನೋಡುತ್ತಿದ್ದ. ಕ್ರಮೇಣ ಅವನೊಳಗೆ ಈ ಸ್ಪೀಕರ್‌ ಬಿತ್ತಿದ ಆಸೆಯನ್ನು ಇವರು ಕಂಡಿದ್ದರು. ಮಗನ ಆಸಕ್ತಿಯೂ ಕುಸಿಯತೊಡಗಿದ್ದನ್ನು ಗಮನಿಸಿ, ಒಂದು ದಿನ ತಮ್ಮ ಮಗನಲ್ಲಿ “ಹೇಗಿದ್ದರೂ ಇದನ್ನು ಹೀಗೇ ಇಟ್ಟುಕೊಂಡು ಏನು ಮಾಡುವುದು? ಇಷ್ಟು ದಿನ ಅನುಭವಿಸಿದ್ದು ಆಯಿತು. ಪಕ್ಕದ ಮನೆಯ ಹುಡುಗ ಬಹಳ ನಿರೀಕ್ಷೆಯಿಂದ ಯಾವಾಗಲೂ ಇದನ್ನು ನೋಡುತ್ತಾನೆ. ಅವನಿಗೆ ಕೊಟ್ಟು ಬಿಡುವ’ ಎಂದರು. ಮಗನಿಗೆ ಸರಿ ಎನಿಸಲಿಲ್ಲ. ತನ್ನ ಮೊದಲ ಸಂಬಳದಲ್ಲಿ ತಂದದ್ದು, ಇದನ್ನು ಬೇರೆಯವನಿಗೆ ಕೊಟ್ಟು ಬಿಟ್ಟರೆ ಹೇಗೆ ಎನಿಸಿ ಒಪ್ಪಲಿಲ್ಲ. ಸರಿ, ಇವರೂ ಹಠ ಮಾಡಲಿಲ್ಲ. ಮಗ ಮತ್ತೆ ನಗರಕ್ಕೆ ಹೋದ. ಮತ್ತೂಮ್ಮೆ ಬರುವಾಗ ಟಿವಿ ಮನೆಗೆ ಬಂದಿತು. ಈಗಲಂತೂ ಇವರಿಗೆ ಏನು ಮಾಡಬೇಕೋ ತೋಚಲಿಲ್ಲ. ಸ್ಪೀಕರ್‌ಗಳು ಮತ್ತಷ್ಟು ಬಡವಾದವು. ಕೊನೆಗೂ ಮಗನಲ್ಲಿ “ನೋಡು, ಟಿವಿ ತಂದಿದ್ದೀ. ಇನ್ನು ಸ್ಪೀಕರ್‌ಗಳನ್ನು ಯಾರು ಕೇಳುತ್ತಾರೆ? ಈಗಲಾದರೂ ಯಾರಿಗಾದರೂ ಬಳಸುವವರಿಗೆ ಕೊಟ್ಟುಬಿಡೋಣ’ ಎಂದರು. ಮಗನಿಗೆ ಏನನಿಸಿತೋ? ಅರೆ ಮನಸ್ಸಿನಿಂದ ಒಪ್ಪಿಕೊಂಡ. ಅದರಂತೆ ತಡ ಮಾಡದೇ ಸ್ಪೀಕರ್‌ಗಳನ್ನು ಆ ಪಕ್ಕದ ಮನೆಯ ಕಣ್ಣರಳಿಸುವ ಹುಡುಗನಿಗೆ ಕೊಟ್ಟರು. ಅವನಿಗೋ ಬಹಳ ಖುಷಿ. ದಿನವೂ ಸಂಭ್ರಮಿಸತೊಡಗಿದ.

ಇವರಿಗಂತೂ ಡಬ್ಬಲ್‌ ಸಂಭ್ರಮ. ಮೊದಲನೆಯದು- ಆಸೆ ಪಟ್ಟವನಿಗೆ ಕೊಟ್ಟೆ ಎಂಬುದು. ಎರಡನೆಯದು- ಒಂದು ವಸ್ತು ವ್ಯರ್ಥವಾಗದೇ ಮರು ಬಳಕೆಯಾಗುತ್ತಿದೆ ಎಂಬುದು. ಇವೆರಡರಲ್ಲೂ ಅವರು ಗೆದ್ದರು. ಇಂಥದ್ದೇ ಇನ್ನೊಂದು ಉದಾಹರಣೆ ಇದೆ. ಮತ್ತೂಬ್ಬರ ಮನೆಯಲ್ಲಿ ತಮ್ಮ ಮಗನಿಗೆ ತೆಗೆದುಕೊಟ್ಟ ಸೈಕಲ್‌ ಇತ್ತು. ಸಣ್ಣದು. ಅವನೀಗ ದೊಡ್ಡ ಸೈಕಲ್‌ ಹೊಡೆಯತೊಡಗಿದ್ದ. ಹಾಗಾಗಿ ಸಣ್ಣ ಸೈಕಲ್‌ ತುಕ್ಕು ಹಿಡಿಯುತ್ತಿತ್ತು. ಒಮ್ಮೆ ಹತ್ತಿರದ ಮನೆಯವರೊಬ್ಬರು ಬಂದು, “ಈ ಸೈಕಲ್‌ ಯಾರೂ ಹೊಡೆಯುತ್ತಿಲ್ಲವೇ?’ ಎಂದು ಕೇಳಿದರು. ಅದಕ್ಕೆ “ಇಲ್ಲ, ಈಗ ಅವನು ದೊಡ್ಡ ಸೈಕಲ್‌ ಹೊಡೆಯುತ್ತಿದ್ದಾನೆ’ ಎಂದರು. “ಹಾಗಾದರೆ ಇದನ್ನೇನು ಮಾಡುತ್ತೀರಿ?’ ಎಂದು ಕೇಳಿದರು. ಅದಕ್ಕೆ “ಏನು ಮಾಡೋದು? ಗುಜರಿಯವ ಬರೀ ನೂರು ರೂಪಾಯಿ ಕೊಡುತ್ತೀನಿ ಎಂದ. ನಾನು ಎರಡೂವರೆ ಸಾವಿರ ರೂ. ಕೊಟ್ಟಿದ್ದೆ’ ಎಂದರು. “ನೀವು ಏನೂ ಬೇಸರ ಮಾಡಿಕೊಳ್ಳದಿದ್ದರೆ ಈ ಸೈಕಲ್‌ ಕೊಟ್ರೆ ನನ್ನ ಮೊಮ್ಮಗನಿಗೆ ಬಳಸುತ್ತೇನೆ’ ಎಂದು ಕೇಳಿದರು ಹತ್ತಿರದ ಮನೆಯವರು. ಆಗ ಈತ, “ಸ್ವಲ್ಪ ದುರಸ್ತಿ ಮಾಡಿಕೊಂಡು ಬಳಸುವುದಾದರೆ ಬಳಸಿ’ ಎಂದು ಕೊಟ್ಟರು.

ತತ್‌ಕ್ಷಣ ನಮಗೆ ಇದೇನೂ ದೊಡ್ಡದೆನಿಸುವುದಿಲ್ಲ. ಇದರಲ್ಲೇನು ದೊಡ್ಡಸ್ತಿಕೆ ಎಂದೂ ಎನ್ನಿಸುವುದಿದೆ. ಆದರೆ ನಮ್ಮ ಮನೆಯೊಳಗಿನ ರಾಶಿಯನ್ನು ಖಾಲಿ ಮಾಡದಿರುವುದಕ್ಕೂ ಯಾವುದೋ ಒಂದು ಕಾರಣವಿದೆ. ಅದರಿಂದಲೇ ಮನೆಯನ್ನು ಮ್ಯೂಸಿಯಂ ಮಾಡಿಕೊಳ್ಳಲು ಹೊರಟಿದ್ದೇವೆ ಎನಿಸುವುದುಂಟು. ಒಂದು ವಸ್ತುವಿನ ಸಂಪೂರ್ಣ ಬಳಕೆಯೂ ಸಹ ಪರಿಸರದ ಬಗೆಗಿನ ಪ್ರೀತಿಯೇ. ಅದರತ್ತ ನಾವು ಮನಸ್ಸು ಮಾಡಿದರೆ ಪರಿಸರ ಸ್ನೇಹಿ ಬದುಕನ್ನು ನಡೆಸಿದಂತೆಯೇ. ನಾವೇ ಲೆಕ್ಕ ಹಾಕಿಕೊಳ್ಳೋಣ. ಒಂದು ಉತ್ಪನ್ನಕ್ಕೆ ಬಳಸುವ ಕಚ್ಚಾವಸ್ತು, ಸಂಪನ್ಮೂಲ ಹಾಗೂ ಅದರ ಉತ್ಪಾದನೆಗೆ ತೊಡಗಿಸಿದ ಮಾನವ ಸಂಪನ್ಮೂಲ ಎಲ್ಲವೂ ಅಮೂಲ್ಯವಾದುದೇ. ಒಂದರ ಮರುಬಳಕೆ ಯಿಂದ ಆ ಉತ್ಪನ್ನದ ಸಂಪೂರ್ಣ ಬಳಕೆ ಸಾಧ್ಯ ವಾಗುತ್ತದೆ. ಇದರಿಂದ ಮತ್ತೂಂದಿಷ್ಟು ಉತ್ಪನ್ನ ಗಳು ಉತ್ಪಾದನೆಯಾಗುವುದನ್ನು ನಿಲ್ಲಿಸಿದಂತಾಗು ತ್ತದೆ. ಇದರಿಂದ ಪರಿಸರ ನಾಶವಾಗುವುದನ್ನು, ಅದರಲ್ಲೂ ಅನಗತ್ಯವಾಗಿ ನಾಶವಾಗುವುದನ್ನು ತಡೆಯಬಹುದು.

ನಮ್ಮ ಮನೆಯಲ್ಲೇ ಎರಡು ಹಾಳೆಗಳನ್ನು ಉಳಿಸಿದರೆ, ಒಂದು ಮರದ ಆಯುಷ್ಯವನ್ನು ಹೆಚ್ಚಿಸಿದಂತೆ. ಇದನ್ನೇ ನಾವು ಬಳಸುವ ನಿತ್ಯ ಬಳಕೆಯ ವಸ್ತುಗಳು, ಅದಕ್ಕೆ ಬಳಕೆಯಾಗುವ ಕಚ್ಚಾವಸ್ತು, ಸಂಪನ್ಮೂಲಗಳನ್ನು ಲೆಕ್ಕ ಹಾಕಿದರೆ ತಿಳಿಯುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ್ದನ್ನು ಹೊರತುಪಡಿಸಿ ಬೇಕಾದಷ್ಟು ಮರುಬಳಕೆಗೆ ಯೋಗ್ಯವೆನಿಸುವ ಹಲವು ವಸ್ತುಗಳಿವೆ. ಆದರೆ ನಗರದ ಬದುಕೆಂದರೆ ಬರೀ ಸಂಗ್ರಹ ನೆಲೆಯದ್ದು. ಮರು ಬಳಕೆಯತ್ತ ಯೋಚಿಸುವುದೇ ಕಡಿಮೆ. ಜತೆಗೆ ನಮ್ಮೊಳಗಿನ ಆರ್ಥಿಕ ಅಹಂಕಾರವೂ, ಒಮ್ಮೆ ಬಳಸಲಾದ, ಒಬ್ಬರು ಬಳಸಿದ ವಸ್ತುಗಳು ತಿರಸ್ಕೃತಗೊಳ್ಳಲು ಯೋಗ್ಯವಂಥವು ಎಂಬುದನ್ನು ಬಿಂಬಿಸುತ್ತದೆ. ಇವೆಲ್ಲವೂ ನಮ್ಮನ್ನು ಮತ್ತು ನಮ್ಮ ಮನೆಗಳನ್ನು ತ್ಯಾಜ್ಯ ಸೃಷ್ಟಿಸುವ ಕಾರ್ಖಾನೆಗಳನ್ನಾಗಿಸಿವೆ ಎಂಬುದು ಖಂಡಿತ ಅತಿಶಯೋಕ್ತಿಯಲ್ಲ.

ನಮ್ಮ ಆರ್ಥಿಕ ಅಹಂಕಾರವನ್ನು ತೊಡೆದು ಹಾಕಿ ಮರುಬಳಕೆಯತ್ತ ನಮ್ಮ ಚಿತ್ತ ಬೆಳೆಸುವುದರ ಬಗ್ಗೆ ಕಾರ್ಯೋನ್ಮುಖವಾದರೆ ಬರೀ ಪರಿಸರವನ್ನು ಉಳಿಸಿದಂತಾಗುವುದಿಲ್ಲ, ಬೆಳೆಸಿದಂತಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ನಮ್ಮ ನಿತ್ಯದ ಬದುಕನ್ನೇ ಸ್ವರ್ಗವನ್ನಾಗಿಸಿ ಕೊಳ್ಳಬಹುದು. ಯಾಕೆಂದರೆ, ನಮ್ಮ ಮನೆಗಳು ತ್ಯಾಜ್ಯ ಸೃಷ್ಟಿಸುವ ಕಾರ್ಖಾನೆಯಾಗುವುದಿಲ್ಲ. ಇದು ಅಕ್ಷರಶಃ ಸತ್ಯ.

ಅರವಿಂದ ನಾವಡ

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.