ತುಮಕೂರು : ನೀರಿಗಾಗಿ ಕಣ್ಣೀರಿಟ್ಟ ಬಿಜೆಪಿ ಶಾಸಕ ; ಸತ್ಯಾಗ್ರಹ ಆರಂಭ
Team Udayavani, Sep 14, 2018, 3:38 PM IST
ತುಮಕೂರು: ಹೇಮಾವತಿ ನದಿಯ ನೀರನ್ನು ತುರುವೇಕೆರೆಯ ನಾಲೆಗಳಿಗೆ ಹರಿಸುವಂತೆ ಬಿಜೆಪಿ ಶಾಸಕ ಮಸಾಲೆ ಜಯರಾಂ ಅವರು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಪ್ರಸಂಗ ಶುಕ್ರವಾರ ನಡೆದಿದೆ.
ಅಡವನಹಳ್ಳಿಯಲ್ಲಿರುವ ಹೇಮಾವತಿ ನಾಲೆ ಬಳಿ ಸರ್ಕಾರದ ಧೋರಣೆ ವಿರುದ್ದ ಸತ್ಯಾಗ್ರಹ ಆರಂಭಿಸಿರುವ ಶಾಸಕ ಮಸಾಲೆ ಜಯಾರಾಂ ಅವರು ನಾನು ಬಿಜೆಪಿಯವನು ಎಂದು ನನ್ನ ಕ್ಷೇತ್ರವನ್ನು ಕಡೆಗಣಿಸಿ ಸರ್ಕಾರ ತಾರತಮ್ಯ ಮಾಡಿದೆ ಎಂದರು.
9 ಕ್ಷೇತ್ರಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಆದರೆ ತುರುವೇಕೆರೆಯನ್ನು ಮಾತ್ರ ಬರ ಪೀಡಿತ ಎಂದು ಘೋಷಿಸಿಲ್ಲ. ಉಪಮುಖ್ಯಮಂತ್ರಿ ನನ್ನ ಕ್ಷೇತ್ರದ ಕುರಿತು ತಾರತಮ್ಯದ ಧೋರಣೆ ತೋರುತ್ತಿದ್ದಾರೆ ಎಂದರು.
ಜಲಾಶಯದಿಂದ ಬೇರೆ ತಾಲೂಕುಗಳಿಗೆ ನೀರು ಬಿಡಲಾಗುತ್ತಿದೆ ಆದರೆ ನಮಗೆ ನೀರು ಬರುತ್ತಿಲ್ಲ ಎಂದು ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಸತ್ಯಾಗ್ರಹಕ್ಕೆ ಬಿಜೆಪಿ ಮುಖಂಡರು ಮತ್ತು ಜನತೆ ಸಾಥ್ ನೀಡಿದ್ದಾರೆ.