ನಹುಷ, ಯಯಾತಿ, ಪೃಥು, ಅಂಬರೀಷರ ವಿಶೇಷ ಸಂದೇಶ
Team Udayavani, Jan 14, 2018, 8:02 PM IST
ಅಧಿಕಾರದಲ್ಲಿದ್ದು ಅಹಂಕಾರದಿಂದ ಮಾಡಬಾರದ್ದನ್ನು ಮಾಡಿದರೆ ಏನಾಗುತ್ತದೆ ಎಂಬ ಎಚ್ಚರಿಕೆಯನ್ನು ನಹುಷನ ಜೀವನವೃತ್ತಾಂತ ತಿಳಿಸುತ್ತದೆ. ಒಂದು ಬಾರಿ ತಪ್ಪೆಸಗಿ ಹೊಂಡಕ್ಕೆ ಬಿದ್ದರೆ ಮತ್ತೆ ಎದ್ದು ಬರಲು ಬಲು ತ್ರಾಸ ಎನ್ನುವುದನ್ನೂ ಈ ಕಥೆ ತಿಳಿಸುತ್ತದೆ. ಒಳ್ಳೆಯ ಕೆಲಸ ಮಾಡಿದರೆ ನಮ್ಮ ಹೆಸರು ಎಷ್ಟು ಕಾಲ ಉಳಿಯಬಹುದು ಎನ್ನುವುದಕ್ಕೆ ಪೃಥು ಚಕ್ರವರ್ತಿ, ಅಂಬರೀಷ ಮಹಾರಾಜ ಉದಾಹರಣೆಯಾಗಿ ಕಾಣುತ್ತಾರೆ. ಅತಿ ಭೋಗದಾಸೆ ಸಲ್ಲದು ಎಂದು ಸ್ವತಃ ಅನುಭವಿಸಿ ಯಯಾತಿಯೇ ಹೇಳುತ್ತಾನೆ. ಇಂತಹ ವಿಶಿಷ್ಟ ಸಾಧಕರ ಸ್ಮರಣೆ ಮಾಡುವಂತೆ ಶ್ರೀರಾಜರಾಜೇಶ್ವರಯತಿಗಳು ಮಾಡಿದ್ದಾರೆ, ‘ಮಂಗಲಾಷ್ಟಕ’ ಮೂಲಕ.
ಮಾಂಧಾತಾ ನಹುಷೋ—ಂಬರೀಷಸಗರೌ ರಾಜಾಪೃಥುಹೈìಹಯಃ ಶ್ರೀಮಾನ್ ಧರ್ಮಸುತೋ ನಳೋ ದಶರಥೋ ರಾಮೋ ಯಯಾತಿರ್ಯದುಃ|
ಮಾಂಧಾತ ಸೂರ್ಯವಂಶದ ರಾಜ. ಯುವನಾಶ್ವ ಈತನ ತಂದೆ. ಈತ ಪುತ್ರ ಸಂತಾನಕ್ಕಾಗಿ ಒಂದು ಯಾಗ ಮಾಡುತ್ತಾನೆ. ರಾಜಪತ್ನಿ ಕುಡಿಯಬೇಕಾದ ತೀರ್ಥವನ್ನು ಗೊತ್ತಿಲ್ಲದೆ ಯುವನಾಶ್ವ ಕುಡಿದ ಕಾರಣ ಆತನೇ ಗರ್ಭ ಹೊರಬೇಕಾಯಿತು. ಮಾಂಧಾತ ಸೂರ್ಯ ಹರಡುವಲ್ಲೆಲ್ಲ ಸಾಮ್ರಾಜ್ಯ ಹೊಂದಿದ್ದ.
ನಹುಷ ಪ್ರಶ್ನೆ
ನಹುಷ ಚಂದ್ರವಂಶದ ಚಕ್ರವರ್ತಿ. ಕೆಲವು ಕಾಲ ಇಂದ್ರ ಪದವಿಯಲ್ಲಿದ್ದು ಆಳ್ವಿಕೆ ನಡೆಸಿದವ. ಆದರೆ ಇಂದ್ರ ಪದವಿಯ ಕಾರಣ ಅಹಂಕಾರ ಬಂತು. ಇಂದ್ರ ಸ್ಥಾನದಲ್ಲಿದ್ದ ಪುರಂದರನ ಪತ್ನಿ ಶಚಿಯನ್ನು ಮೋಹಿಸಿದಾಗ ಅವಳೊಂದು ಷರತ್ತು ಹಾಕಿದಳು. ಅದೆಂದರೆ ಸಪ್ತರ್ಷಿಗಳು ಹೊತ್ತುಕೊಂಡ ಮೇನೆಯಲ್ಲಿ ಬರಬೇಕು ಎಂಬುದಾಗಿ. ಸಪ್ತರ್ಷಿಗಳು ಹೊರುವಾಗ ಅಗಸ್ತ್ಯರು ವೇದ ಪ್ರಾಮಾಣ್ಯವೋ? ಅಲ್ಲವೋ? ಎಂದು ಪ್ರಶ್ನಿಸಿದರು.
ಈತ ಮಾಡಲು ಹೊರಟ ಕೆಲಸ ವೇದಕ್ಕೆ ವಿರುದ್ಧವಾದ ಕಾರಣ ವೇದ ಅಪ್ರಾಮಾಣ್ಯ, ಇದೆಲ್ಲ ಸುಳ್ಳು ಎಂದ. ಅಗಸ್ತ್ಯರು ವೇದ ಪ್ರಾಮಾಣ್ಯ ಎಂದು ಸಮರ್ಥಿಸಿದರು. ನಹುಷನಿಗೆ ಉತ್ತರ ಕೊಡಲು ಆಗದಾಗ ಸಿಟ್ಟು ಬಂದು ಅಗಸ್ತ್ಯರನ್ನು ತುಳಿದ. ಅವರು ಹೆಬ್ಟಾವಾಗಿ ಜನಿಸು ಎಂದು ಶಾಪವಿತ್ತರು. ನಹುಷನಿಗೆ ತಪ್ಪಿನ ಅರಿವಾಗಿ ಶಾಪವಿಮೋಚನೆಗೆ ಪ್ರಾರ್ಥಿಸಿದ. ಧರ್ಮರಾಜ ಸಿಕ್ಕಿ ನಿನ್ನ ಪ್ರಶ್ನೆಗೆ ಉತ್ತರ ಕೊಟ್ಟಾಗ ಮುಕ್ತಿ ದೊರೆಯುತ್ತದೆ ಎಂದು ಅಗಸ್ತ್ಯರು ತಿಳಿಸಿದಂತೆ ವನವಾಸದ ಅವಧಿಯಲ್ಲಿ ಹೆಬ್ಟಾವು ಭೀಮನನ್ನು ನುಂಗಿತು. ಆಗ ಕೇಳಿದ ಪ್ರಶ್ನೆಗೆ ಧರ್ಮರಾಜ ಉತ್ತರಿಸಿದ. ಆಗಲೇ ನಹುಷನಿಗೆ ಹೆಬ್ಟಾವಿನ ಜನ್ಮದಿಂದ ಮುಕ್ತಿದೊರಕಿತು. ಈ ಕಥೆ ನಹುಷ ಪ್ರಶ್ನೆ ಎಂದು ಮಹಾಭಾರತದಲ್ಲಿ ಪ್ರಸಿದ್ಧವಾಗಿದೆ.
ಧಾರ್ಮಿಕ ರಾಜ ಅಂಬರೀಷ
ಅಂಬರೀಷ ಏಕಾದಶೀ ವ್ರತದಲ್ಲಿ ಮಹತ್ಸಾಧನೆ ಮಾಡಿದವ, ಈ ವಿಷಯದಲ್ಲಿ ದೂರ್ವಾಸಮುನಿಗಳನ್ನೂ ಮೆಚ್ಚಿಸಿದವ. ಈತನಿಗೆ ಧರ್ಮಸ್ಥಾಪಕ ರಾಜರಲ್ಲಿ ಪ್ರಮುಖ ಸ್ಥಾನವಿದೆ.
ಪೃಥುವಿನ ಸಂದೇಶ
ಪೃಥುವಿನಿಂದಾಗಿ ಭೂಮಿಗೆ ಪೃಥ್ವೀ ಎಂಬ ಹೆಸರು ಬಂತು. ಈತನ ತಂದೆ ವೇನ. ಈತ ಧರ್ಮವನ್ನು ನಾಶ ಮಾಡಿದ್ದರೆ, ಪೃಥು ಚಕ್ರವರ್ತಿ ಧರ್ಮದ ಕ್ರಾಂತಿ ಮಾಡಿದ. ವೇನ ‘ದೇವಸ್ಥಾನಗಳೆಲ್ಲ ಏಕೆ? ನನಗೇ ಪೂಜೆ ಮಾಡಿ’ ಎಂದವ. ಆ ಕಾಲದಲ್ಲಿಯೂ ಇಂತಹವರು ಇದ್ದಾರೆಂಬುದಕ್ಕೆ ಈತನೊಬ್ಬ ಉದಾಹರಣೆ. ವೇನನನ್ನು ಹೂಂಕಾರದಿಂದಲೇ ಕೊಂದು ಅವನ ಬಲಗೈಯಿಂದ ಪೃಥುವನ್ನು ಹುಟ್ಟುವಂತೆ ಮಾಡಿದವರು ಋಷಿಗಳು. ವೇನನ ದುರಾಡಳಿತದಿಂದ ಭೂಲೋಕದಲ್ಲಿ ಬರಗಾಲ ಬಂದಿತ್ತು. ಆಗ ಮಳೆ ಬೆಳೆ ಕೊಡುವಂತೆ ಭೂಮಿಯನ್ನು ಬೆನ್ನಟ್ಟಿ ಹೋದಾಗ ಅದು ಗೋರೂಪದಲ್ಲಿ ಓಡಿ ಹೋಯಿತು. ಕೊನೆಗೆ ‘ಬೆನ್ನಟ್ಟುವುದು ಏಕೆ? ಧರ್ಮಮಾರ್ಗದಲ್ಲಿ ನಡೆ’ ಎಂದು ತಿಳಿಸಿದಂತೆ ಪೃಥು ನಡೆದುಕೊಂಡ. ಈಗ ಲೇಔಟ್, ಉಪನಗರ, ನಗರ, ಗ್ರಾಮ, ರಸ್ತೆಗಳಿಗೆ ಒಬ್ಬೊಬ್ಬರ ಹೆಸರು ಇಡುವುದಿದೆ. ಪೃಥು ಚಕ್ರವರ್ತಿ ಮಾಡಿದ ಸಾಧನೆಗೆ ಇಡೀ ಭೂಮಂಡಲಕ್ಕೇ ಈತನ ಹೆಸರು ಬಂತು.
ಕಳೆದುಹೋದರೆ ಈತನನ್ನು ಸ್ಮರಿಸಿ
ಹೈಹಯರನ್ನು ಕಾರ್ತ್ಯವೀರ್ಯಾರ್ಜುನ ಎನ್ನುತ್ತಾರೆ. ಈತನಿಗೆ ಸಾವಿರ ಕೈಗಳು. ಈತ ದತ್ತಾತ್ರೇಯನ ಉಪಾಸಕ. ವಸ್ತುಗಳು ಕಳೆದು ಹೋದರೆ ಕಾರ್ತ್ಯವೀರ್ಯಾರ್ಜುನನನ್ನು ಸ್ಮರಿಸಿಕೊಂಡರೆ ಸಿಗುತ್ತದೆ ಎಂಬ ನಂಬಿಕೆ ಇದೆ.
ಧರ್ಮರಾಜ ಪಾಂಡವರಲ್ಲಿ ಹಿರಿಯವ, ನಡವಳಿಕೆಯಲ್ಲಿ ಯಾವತ್ತೂ ಧರ್ಮ ಮಾರ್ಗದಲ್ಲಿಯೇ ನಡೆದವನೆಂಬುದು ಸರ್ವರಿಗೂ ತಿಳಿದ ವಿಷಯ. ಇಡೀ ಮಹಾಭಾರತದಲ್ಲಿ ಈತನದ್ದು ಆದರ್ಶ ಪಾತ್ರ.
ಕರ್ಮದಲ್ಲಿ ಎಚ್ಚರ: ನಳ ಸಂದೇಶ
ಕಲಿ ಪ್ರವೇಶದಿಂದ ನಳ ದಮಯಂತಿಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಪಾಂಡವರಿಗಿಂತ ಹೆಚ್ಚು ಕಷ್ಟಪಟ್ಟವರು ಇವರು. ಆದರೆ ಧರ್ಮಮಾರ್ಗ ಬಿಡದವ. ಇಷ್ಟಾಗಿ ಈತನ ಸಾಮರ್ಥ್ಯ ಅದ್ಭುತ. ಈಗಲೂ ಉತ್ತಮ ಅಡುಗೆ ತಯಾರಿಸಿದರೆ ‘ನಳಪಾಕ’ ಎಂದು ಕರೆಯುತ್ತಾರೆ. ಈತ ಅಡುಗೆ ಮಾಡುವಲ್ಲಿ ಸಿದ್ಧಹಸ್ತ. ಕೇವಲ ಅಗ್ನಿಸೂಕ್ತ ಪಠಿಸಿ ಅಗ್ನಿಯನ್ನು ಹೊತ್ತಿಸುತ್ತಿದ್ದ, ರಥ ಓಡಿಸುವಾಗ ಮರದಲ್ಲಿ ಎಲೆಗಳು ಎಷ್ಟಿವೆ ಎನ್ನುವುದನ್ನು ಹೇಳುತ್ತಿದ್ದ ಎಂಬ ವರ್ಣನೆ ಇದೆ. ನಾವು ಕರ್ಮ ಮಾಡುವಾಗ ಎಚ್ಚರ ಇರಬೇಕು ಎಂಬ ಸಂದೇಶವಿದೆ. ಕಾಲು ತೊಳೆಯದೆ ಮನೆಯೊಳಗೆ ಹೋದ ಕಾರಣ ಕಲಿ ಈತನನ್ನು ಹಿಡಿದು ಕಷ್ಟಕೊಟ್ಟ. ನಾವು ಇಂತಹ ಆಚರಣೆಗಳನ್ನು ಎಷ್ಟು
ಕೈಬಿಟ್ಟಿದ್ದೇವೆ ಎನ್ನುವುದನ್ನು ಸ್ಮರಿಸುವ ಕಾಲದಲ್ಲಿದ್ದೇವೆ.
ಆದರ್ಶಪುರುಷ ರಾಮ
ದಶರಥ, ರಾಮಚಂದ್ರನ ಪಾತ್ರಕ್ಕಾಗಿಯೇ ರಾಮಾಯಣ ರಚನೆಯಾಯಿತು ಎಂಬ ಭಾಸ ಬಾರದೆ ಇರದು. ಇಂತಹ ಪ್ರತಿಯೊಂದು ಪಾತ್ರದ ನೀತಿ ಸಾಮಾನ್ಯ ಜನರಿಗೆ ಒಂದೊಂದು ಪಾಠವನ್ನು ಸಾರುತ್ತದೆ. ಏಕಪತ್ನಿ ವ್ರತಸ್ಥನಾಗಿ,
ಮರ್ಯಾದಾ ಪುರುಷೋತ್ತಮನಾಗಿ ರಾಮಚಂದ್ರ ಪ್ರಸಿದ್ಧನಾದ. ಗಾಂಧೀಜಿಯವರೂ ಹೇಳುವ ‘ರಾಮರಾಜ್ಯ’ದ ಕಲ್ಪನೆಗೆ ರಾಮನೇ ಮೂಲಕಾರಣ.
ಯಯಾತಿ ಸಾರ್ವಕಾಲಿಕ ಸಂದೇಶ
ಭೋಗಕ್ಕೊಂದು ಮಿತಿ ಇದೆ, ಮಿತಿ ಬೇಕು ಎಂಬ ಸಂದೇಶವನ್ನು ಮನುಕುಲಕ್ಕೆ ನೀಡಿದವ ಯಯಾತಿ. ಈತ ದೊಡ್ಡ ಚಕ್ರವರ್ತಿ. ಈತನಿಗೆ ಐದು ಮಕ್ಕಳು ಜನಿಸಿದರೂ ಮತ್ತಷ್ಟು ಸುಖವನ್ನು ಭೋಗಿಸಬೇಕೆಂಬ ಅಭಿಲಾಶೆ ಇತ್ತು. ನಾಲ್ಕು ಮಕ್ಕಳನ್ನು ಕರೆದು ಅವರ ಯವ್ವನವನ್ನು ತನಗೆ ಕೊಟ್ಟು, ತನ್ನ ವೃದ್ಧಾಪ್ಯವನ್ನು ಅವರು ತೆಗೆದುಕೊಳ್ಳಬೇಕೆಂದು ಹೇಳಿದ. ಆದರೆ ಯಾವ ಮಕ್ಕಳೂ ಮುಂದೆ ಬರಲಿಲ್ಲ. ಐದನೆಯ ಮಗ ಪೂರು ಇದಕ್ಕೆ ಒಪ್ಪಿದ. ಮಗನ ಯವ್ವನವನ್ನು ಪಡೆದುಕೊಂಡು ಜೀವನವ ಭೋಗಿಸಿದ. ಆದರೇನು? ಅದು ಮತ್ತಷ್ಟೂ ಕೆರಳಿಸಿತೆ ವಿನಾ, ಸಾಕು ಎಂದೆನಿಸಲಿಲ್ಲ, ವೈರಾಗ್ಯ ಬರಲಿಲ್ಲ. ಕೊನೆಗೆ ಆಸೆಯನ್ನು ಅನುಭವಿಸಿ ಇನ್ನಿಲ್ಲದಂತೆ ಮಾಡಲಾಗುವುದಿಲ್ಲ, ಬೆಂಕಿಗೆ ತುಪ್ಪ ಸುರಿದರೆ ಮತ್ತಷ್ಟು ಬೆಂಕಿ ಉರಿಯುತ್ತದೆ ವಿನಾ ಬೆಂಗಿ ಆರುವುದಿಲ್ಲ ಎಂಬ ಸಂದೇಶ ನೀಡಿದ ಯಯಾತಿ. ಯದು ಯಯಾತಿಯ ಮಗ. ಮುಂದೆ ಶ್ರೀಕೃಷ್ಣ ಇದೇ ವಂಶದಲ್ಲಿ ಜನಿಸಿದ. ಯಾದವರಿಗೆ ಮೂಲ ಯದು.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
MUST WATCH
ಹೊಸ ಸೇರ್ಪಡೆ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ