ಕಂಬಳ ಕ್ಷೇತ್ರದ ಸಾಧಕ ವಿನು ವಿಶ್ವನಾಥ ಶೆಟ್ಟಿ ನಿಧನ
Team Udayavani, Dec 24, 2018, 10:16 AM IST
ಪಡುಬಿದ್ರಿ/ಕಾಪು: ಕಂಬಳ ಕ್ಷೇತ್ರದ ಸಾಧಕ, ಸಮಾಜ ಸುಧಾರಕ, ಪ್ರಾಣಿ ಪ್ರೇಮಿ ಮೂಡು ಬಿದಿರೆಯ ಕರಿಂಜೆ ವಿನು ವಿಶ್ವನಾಥ ಶೆಟ್ಟಿ (52) ಅವರು ಡಿ. 23ರಂದು ಬಂಟ್ವಾಳದ ಹೊಕ್ಕಾಡಿ ಗೋಳಿ ಕಂಬಳದಿಂದ ವಾಪ
ಸಾಗುವ ವೇಳೆ ಹೃದಯಾ ಘಾತದಿಂದ ನಿಧನ ಹೊಂದಿದರು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
15 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಅವರು ದಿಲ್ಲಿಯ ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದರು. ಮೂಲತಃ ಮೂಡುಬಿದಿರೆಯವರಾದ ವಿನು ಅವರು ಕಾಪು ಹಾಗೂ ಪಡುಬಿದ್ರಿಯ ಪಾದೆಬೆಟ್ಟಿನಲ್ಲಿ ವಾಸವಾಗಿದ್ದರು. ಪಾದೆಬೆಟ್ಟಿನಲ್ಲಿ ಕೋಣಗಳಿಗೆಂದೇ ಸ್ವಿಮ್ಮಿಂಗ್ ಪೂಲ್, ಹವಾನಿಯಂತ್ರಿತ ಕೊಠಡಿ ಹಾಗೂ ಸಂಗೀತ ವ್ಯವಸ್ಥೆಯನ್ನೂ ಅಳವಡಿಸಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಕೊಡುಗೈ ದಾನಿಯಾಗಿದ್ದರು.
ಕಾರ್ಮಿಕರ ಬಗ್ಗೆ ಒಲವು
ಕೋಣಗಳ ಆರೈಕೆ ಮಾಡುವ ಕೆಲಸ ದಾಳುಗಳ ಬಗ್ಗೆಯೂ ವಿಶೇಷ ಒಲವು ಹೊಂದಿದ್ದ ಶೆಟ್ಟರು ಅವರ ಬದುಕಿಗೆ ಪೂರಕವಾಗಿ ಮನೆ ಸಹಿತ ವಿಶೇಷ ವ್ಯವಸ್ಥೆಗಳನ್ನೂ ಕಲ್ಪಿಸಿಕೊಟ್ಟಿದ್ದರು. ಕಾರ್ಮಿಕ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸ, ಮದುವೆ – ಮುಂಜಿಗಳಿಗೆ ನಿರಂತರ ಸಹಕಾರ, ವೈದ್ಯಕೀಯ – ಆಸ್ಪತ್ರೆ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದರು. ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ತಾಳಿಯನ್ನೂ ನೀಡುತ್ತಿದ್ದರು.
1999ರಲ್ಲಿ ಪಾಂಚು, ಕುಟ್ಟಿ ಎಂಬ ಕೋಣಗಳ ಮೂಲಕ ಕಂಬಳ ಕ್ಷೇತ್ರಕ್ಕೆ ಪರಿಚಿತರಾದ ವಿನು ವಿಶ್ವನಾಥ ಶೆಟ್ಟರು ಆ ವರ್ಷ 15 ಕಂಬಳಗಳಲ್ಲಿ 13 ಪದಕಗಳನ್ನು ಗೆಲ್ಲುವ ಮೂಲಕ ಗುರುತಿಸಿಕೊಂಡಿದ್ದಾರೆ. ಕಂಬಳ ಕ್ಷೇತ್ರಕ್ಕಾಗಿ ಈಚೆಗಿನ ನ್ಯಾಯಾಲಯದ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದು ಸಣ್ಣ ಮಟ್ಟಿನ ಕಂಬಳವಾಗಲೀ, ದೊಡ್ಡ ವ್ಯವಸ್ಥಾಪನದ ಕಂಬಳವಾಗಲೀ ಎಲ್ಲೆಡೆಗೆ ತಮ್ಮ ಕೋಣಗಳನ್ನು ಒಯ್ಯುತ್ತಿದ್ದರು. ಹಗ್ಗ ಕಿರಿಯ ವಿಭಾಗದಲ್ಲೂ ಅವರ ಕೋಣಗಳೇ ಪ್ರಥಮ ಸ್ಥಾನ ಬಾಚಿಕೊಳ್ಳುತ್ತಿದ್ದು ಸದ್ಯ ಹಿರಿಯ ವಿಭಾಗದಲ್ಲೂ ಇದನ್ನು ಮುಂದುವರಿಸಿರುವುದೂ ದಾಖಲೆ ಎನಿಸಿದೆ.
ದುಬಾೖಯಲ್ಲಿ ಹೊಟೇಲ್ ಉದ್ಯಮವನ್ನು ವಿನು ವಿಶ್ವನಾಥ ಶೆಟ್ಟಿ ಹೊಂದಿದ್ದು ಅವಿಭಜಿತ ಜಿಲ್ಲೆಯಲ್ಲೂ ಉದ್ಯಮಿಯಾಗಿಯೂ ಹೆಸರು ಗಳಿಸಿದ್ದರು. ಬಂಟ ಸಮಾಜದ ಅಭ್ಯುದಯಕ್ಕೂ ಕೊಡುಗೆ ಸಲ್ಲಿಸಿದ್ದಾರೆ.
ಗೆಲುವಿನ ಸಂಭ್ರಮದಲ್ಲಿ ಮರಳುತ್ತಿದ್ದಾಗ…
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಎಲಿಯನಡುಗೋಡು ಗ್ರಾಮದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ನಡೆದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವೇ ವಿನು ವಿಶ್ವನಾಥ ಶೆಟ್ಟಿ ಪಾಲ್ಗೊಂಡ ಕೊನೆಯ ಕಂಬಳ. ಬೆಳಗ್ಗೆ ಸುಮಾರು ಹತ್ತೂವರೆ ಗಂಟೆಗೆ ತಮ್ಮದೇ ಕಾರನ್ನು ಚಲಾಯಿಸಿಕೊಂಡು ಬಂದಿದ್ದ ಅವರು ಕಂಬಳ ಸಂಘಟಕರಲ್ಲಿ, ತಮ್ಮ ಓಟದ ಕೋಣಗಳ ತಂಡದವರಲ್ಲಿ, ತೀರ್ಪುಗಾರರಲ್ಲಿ ಮಾತುಕತೆ ನಡೆಸಿದ್ದರು.
ಹಗ್ಗ ಹಿರಿಯ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಅವರ ಓಟದ ಕೋಣಗಳು ರಾತ್ರಿ ಸೆಮಿಫೈನಲ್ ಹಂತಕ್ಕೆ ತಲುಪಿದಾಗ ಮೆಡಲ್ ಪಡೆದುಕೊಂಡೇ ಹೋಗುವುದಾಗಿ ಗೆಳೆಯರಲ್ಲಿ ತಿಳಿಸಿದ್ದರು. ಫೈನಲ್ ಹಂತಕ್ಕೆ ಬಂದಾಗ ಬಹಳ ಸಂತಸದಲ್ಲಿದ್ದರು ಎಂದು ನಿಕಟವರ್ತಿಗಳು ತಿಳಿಸಿದ್ದಾರೆ. ರಾತ್ರಿ ಆರೋಗ್ಯದಲ್ಲಿ ಏನೋ ಏರುಪೇರಾಗುತ್ತಿರುವುದಾಗಿ ಕೆಲಸದವರಲ್ಲಿ ತಿಳಿಸಿದ್ದರು. ತಮ್ಮ ಕೋಣಗಳು ಬಹುಮಾನದ ಸನಿಹ ಇವೆ ಎಂಬ ಖುಷಿಯಲ್ಲಿ ಅನಾರೋಗ್ಯದತ್ತ ಹೆಚ್ಚು ಗಮನಹರಿಸಿರಲಿಲ್ಲ. ಮಧ್ಯಾಹ್ನ ಬಹುಮಾನ ವಿತರಣೆಯ ಬಳಿಕ (ಅವರ ತಂಡದ ಮುಖ್ಯಸ್ಥರು ಬಹುಮಾನ ಸ್ವೀಕರಿಸುತ್ತಾರೆ) ಕಾಪುವಿಗೆ ಹೊರಟಿದ್ದರು. ಸಿದ್ದಕಟ್ಟೆ ಬಳಿ ಎದೆ ನೋವು ಕಾಣಿಸಿದ್ದರಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಹೋಗಿದ್ದರು. ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದ್ದರು. ಬಳಿಕ ವಿನು ಅವರು ತನ್ನ ಸ್ನೇಹಿತರಿಗೆ ಕರೆಮಾಡಿದ್ದರು. ಅವರು ಆಗಮಿಸಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಾಗ ತುಂಬೆ ಆಸ್ಪತ್ರೆ ಬಳಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಹೊಕ್ಕಾಡಿಗೋಳಿ ಕಂಬಳದಲ್ಲಿ ಅವರ ಕೋಣಗಳು ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದವು. ಈ ಬಾರಿಯ ಐದು ಕಂಬಳ ಕೂಟಗಳಲ್ಲಿ ಪೈವಳಿಕೆ ಹೊರತುಪಡಿಸಿ ನಾಲ್ಕರಲ್ಲಿ ಅವರ ಕೋಣಗಳು ಪದಕ ಪಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?