ಬಾಲಿಯ ನೃತ್ಯದಲ್ಲಿ ರಾಮಾಯಣ
Team Udayavani, Feb 11, 2018, 8:15 AM IST
ಇಂಡೋನೇಷ್ಯಾದಲ್ಲಿ ದೇವರ ದ್ವೀಪ ಎಂದೇ ಹೆಸರಾದದ್ದು ಬಾಲಿ. ಆ ದೇವರಿಗೂ ಆಕರ್ಷಕ ಎನಿಸುವಷ್ಟು ಚೆಂದದ ದ್ವೀಪ ಎನ್ನುವುದರ ಜತೆ ಕಣ್ಣು ಹಾಯಿಸಿದಲ್ಲೆಲ್ಲಾ ದೇವಾಲಯಗಳೇ! ನಿಸರ್ಗದ ಅಂಶಗಳಾದ ಕಲ್ಲು, ನೀರು, ಅಗ್ನಿ, ಮಣ್ಣು, ಗಾಳಿ ಜನರಿಗೆ ಶಕ್ತಿ ಸಂಕೇತಗಳು. ಹಿರಿಯರು ಮತ್ತು ದೇವರು ಕೂಡಾ ನಿಸರ್ಗದಲ್ಲಿ ಲೀನವಾಗಿದ್ದಾರೆ. ಹಾಗಾಗಿ, ಅವುಗಳ ಮೂಲಕ ಎಲ್ಲೆಲ್ಲೂ ಇದ್ದಾರೆ ಎಂದು ಹೇಳುತ್ತಾರೆ. ಆದ್ದರಿಂದಲೇ ಇಲ್ಲಿ ನೀರು, ಕಲ್ಲು, ಮಣ್ಣು ಎಲ್ಲವೂ ಪವಿತ್ರ. ಹಿಂದೂ ಸಂಸ್ಕೃತಿಯನ್ನು ಅನುಸರಿಸುವ ಇಲ್ಲಿನ ಜನ ಜಗತ್ತಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಶಕ್ತಿ ಎರಡೂ ಇವೆ. ಎರಡರ ನಡುವೆ ಸಮತೋಲನ ಇದ್ದಾಗ ಮಾತ್ರ ಶಾಂತಿ ಸಾಧ್ಯ ಎಂದು ನಂಬುತ್ತಾರೆ. ತಮ್ಮ ಪೂರ್ವಜರು ಕೆಟ್ಟ ಶಕ್ತಿಗಳಿಂದ ಕಾಪಾಡಲು ನಾಡಿನ ವಿವಿಧ ಆಯಕಟ್ಟಿನ ಜಾಗಗಳಲ್ಲಿ ಒಂಬತ್ತು ದೇಗುಲಗಳನ್ನು ಕಟ್ಟಿಸಿದ್ದಾರೆ ಎಂದು ನುಡಿಯುತ್ತಾರೆ. ಇವುಗಳಲ್ಲಿ ಆರರಲ್ಲಿ ಬಾಲಿಯ ಜನರು ದೊಡ್ಡ ಉತ್ಸವ ಮಾಡಿ ಪೂಜಿಸುತ್ತಾರೆ. ಅವುಗಳಲ್ಲಿ ಸಮುದ್ರದ ಮಧ್ಯೆ ದೊಡ್ಡ ಶಿಲೆಯ ಮೇಲೆ ನೆರೆ -ತೊರೆ , ಗಾಳಿ – ಮಳೆಗೆ ಅಂಜದೆ ನಿಂತ ಕಾವಲುಗಾರನಂತೆ ತೋರುವ ಪವಿತ್ರ ದೇಗುಲ, ಪುರ ಲುಹುರ್ ಉಲುವಾಟು!
ಎಲ್ಲಿದೆ?
ಬಾಲಿ ದ್ವೀಪದ ಬಾಡುಂಗ್ ರೀಜೆನ್ಸಿಯ ಕುಟ ಜಿಲ್ಲೆಯ ಪೆಕಾಟು ಗ್ರಾಮದಲ್ಲಿದೆ. ಕುಟದಿಂದ ದಕ್ಷಿಣಕ್ಕೆ ಸುಮಾರು ಇಪ್ಪತೈದು ಕಿಮೀ ದೂರದಲ್ಲಿದ್ದು ದಾರಿ ಕಿರಿದಾಗಿದ್ದು ದಟ್ಟಣೆಯಿಂದ ಕೂಡಿರುತ್ತದೆ. ಹೀಗಾಗಿ, ಒಂದು ತಾಸಿನ ಪಯಣ. ಪ್ರಮುಖ ಸ್ಥಳವಾದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲ.ಹೀಗಾಗಿ ಬಾಡಿಗೆ ವಾಹನ ಮಾಡಿಕೊಳ್ಳುವುದು ಅನಿವಾರ್ಯ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಆರರವರೆಗೆ ಪ್ರವಾಸಿಗರು ಸಂದರ್ಶಿಸಬಹುದು.ಬಾಲಿಯ ಯಾವುದೇ ದೇಗುಲ ಪ್ರವೇಶಿಸಬೇಕಾದರೂ ಕಾಲು ಮುಚ್ಚುವ ಸರೊಂಗ್ ಮತ್ತು ಪಟ್ಟಿ ಕಡ್ಡಾಯ. ಪ್ರವೇಶ ಧನ ಸುಮಾರು 700 ರೂ.
ನಿರ್ಮಾಣ
ಪುರ (ದೇಗುಲ), ಲುಹುರ್ ( ದೈವಿಕ), ಉಲು (ಭೂಮಿಯ ತುದಿ), ವಾಟು (ಬಂಡೆ) ಹೀಗೆ ಹೆಸರೇ ಸೂಚಿಸುವ ಹಾಗೆ ಬಾಲಿಯ ದಕ್ಷಿಣ ಭೂಭಾಗದ ತುದಿಯಲ್ಲಿ ಸಮುದ್ರ ಮಟ್ಟದಿಂದ 70 ಮೀ. ಎತ್ತರದ ಕಡಿದಾದ ಬಂಡೆಯ ಮೇಲಿರುವ ದೈವಿಕ ಶಕ್ತಿಯುಳ್ಳ ಈ ದೇಗುಲ ಪವಿತ್ರವಷ್ಟೇ ಅಲ್ಲ, ರುದ್ರ ರಮಣೀಯವೂ ಹೌದು.ಒಂಬತ್ತನೆಯ ಶತಮಾನದಲ್ಲಿ ರಾಜ ಮರಕತನ ಆಳ್ವಿಕೆಯಲ್ಲಿ ಜಾವಾದ ಮುನಿ ಎಂಪು ಕುಟುರಾನ್ ಕಟ್ಟಿಸಿದ ಎಂದು ಅನೇಕರ ಅಭಿಪ್ರಾಯ. ಸ್ಥಳೀಯರ ಪ್ರಕಾರ ಜಾವಾದ ಮಜಾಪಾಹಿತ್ ಪ್ರಾಂತ್ಯದ ಯೋಗಿ ದಾಂಗ್ ಹ್ಯಾಂಗ್ ನಿರರ್ಥ ಈ ದೇವಾಲಯ ನಿರ್ಮಾಣಕ್ಕೆ ಕಾರಣಕರ್ತ.
ವಾನರ ಸೇನೆ
ದೇಗುಲಕ್ಕೆ ಹೋಗುವ ದಾರಿಯಲ್ಲಿ ಚಿಕ್ಕ ಅರಣ್ಯವಿದ್ದು ಅಲ್ಲಿ ನೂರಾರು ಮಂಗಗಳಿವೆ.ಕೆಟ್ಟ ಶಕ್ತಿಗಳನ್ನು ನಿಗ್ರಹಿಸುವಲ್ಲಿ ಇವುಗಳು ಪಾತ್ರ ವಹಿಸುತ್ತವೆ ಎಂದು ಜನ ನಂಬಿದ್ದಾರೆ. ಹೀಗಾಗಿ ಇವುಗಳಿಗೆ ವಿಶೇಷ ಸ್ಥಾನಮಾನ. ಎತ್ತರದಲ್ಲಿರುವ ಬಂಡೆಯ ಮೇಲಿನ ದೇಗುಲಕ್ಕೆ ಹೋಗಲು ದಾರಿ ಕಡಿದಾಗಿದ್ದು ಅಂಕುಡೊಂಕಾಗಿದೆ. ಆದರೆ, ಅಲ್ಲಲ್ಲಿ ಮೆಟ್ಟಿಲುಗಳನ್ನು ಮಾಡಿದ್ದು ಉದ್ದಕ್ಕೂ ಭದ್ರವಾದ ತಡೆಗೋಡೆ ನಿರ್ಮಿಸಲಾಗಿದೆ. ದಾರಿ ಮಧ್ಯೆ ವಿಶ್ರಮಿಸಲು ಅಲ್ಲಲ್ಲಿ ಅಟ್ಟಣಿಗೆ ಕಟ್ಟಲಾಗಿದ್ದು ಆಯಾಸ ಪರಿಹರಿಸಿಕೊಳ್ಳುತ್ತಲೇ ಸುತ್ತಲಿನ ಪ್ರಕೃತಿ ಸೌಂದರ್ಯ ಸವಿಯಬಹುದು. ದೇಗುಲ ಮುಟ್ಟಲು ಕಾಲ್ನಡಿಗೆಯಲ್ಲಿ ಸುಮಾರು ಒಂದು ತಾಸಿನ ದಾರಿ.
ದೇಗುಲಕ್ಕೆ ಎರಡು ದ್ವಾರಗಳಿದ್ದು ಅವುಗಳ ಮೇಲೆ ಎಲೆ -ಹೂವಿನ ಸುಂದರ ಕೆತ್ತನೆಯಿದೆ. ದ್ವಾರದ ಮುಂದೆ ಮಾನವ ದೇಹ ಆನೆಯ ತಲೆಯಿರುವ ಹಲವು ಶಿಲ್ಪಗಳು ಕಂಡುಬರುತ್ತವೆ. ಒಳಗಿನ ಅಂಗಳದಲ್ಲಿ ಸಮುದ್ರದತ್ತ ಮುಖ ಮಾಡಿರುವ ಬ್ರಾಹ್ಮಣನ ಮೂರ್ತಿಯಿದ್ದು ಇದನ್ನು ಯೋಗಿ ನಿರರ್ಥ ಎನ್ನಲಾಗುತ್ತದೆ. ದೇಗುಲದ ಕೆಲ ಭಾಗಗಳಲ್ಲಿ ಪೂಜೆ ನಡೆಯುವಾಗ ಪ್ರವೇಶ ನಿಷಿದ್ಧ.
ಕೆಚಕ್ ನೃತ್ಯ
ಉಲುವಾಟುವಿನಲ್ಲಿ ಕೇಚಕ್ ನೃತ್ಯ ನೋಡಲು ಸೂಕ್ತ ಸ್ಥಳ. “ತರಿ ಕೇಚಕ್’ ಎಂಬುದು ವಿಶಿಷ್ಟವಾದ ಸಾಂಪ್ರದಾಯಿಕ ಬಾಲಿಯ ನೃತ್ಯ. ಇದು ಪ್ರವಾಸಿಗರಲ್ಲಿ ಮಂಕಿ ಚಾಂಟ್ ಡಾನ್ಸ್ ಎಂದೇ ಜನಪ್ರಿಯವಾಗಿದೆ. ನೃತ್ಯ ಅಂದೊಡನೆ ದೃಶ್ಯ ಶ್ರವ್ಯ ಮಾಧ್ಯಮವಾಗಿರುವುದರಿಂದ ಸಂಗೀತ ಮತ್ತು ಇತರ ಸಾಧನಗಳ ಬಳಕೆ ಸಾಮಾನ್ಯ. ಆದರೆ ಈ ನೃತ್ಯದಲ್ಲಿ ಪುರುಷ ಪಾತ್ರಧಾರಿಗಳ “ಕೇ ಚಕ್’ ಎಂಬ ವಿವಿಧ ಗತಿ ಲಯಗಳ, ಏರಿಳಿತದ ದನಿಯ ಹಿನ್ನೆಲೆ ಮಾತ್ರ ಇರುತ್ತದೆ. ಹೀಗೆ ಬರೀ ಕೇಚಕ್ ಎಂಬ ಶಬ್ದದ ಹಿನ್ನೆಲೆಯಲ್ಲಿ ಒಂದು ಗಂಟೆಯ ನೃತ್ಯ ರೂಪಕ ನಡೆಯುತ್ತದೆ. ಸಾಮಾನ್ಯವಾಗಿ ನೂರಕ್ಕೂ ಹೆಚ್ಚು ಪುರುಷ ಪಾತ್ರಧಾರಿಗಳು ಮತ್ತು ಒಂದೆರಡು ಸ್ತ್ರೀಪಾತ್ರಗಳು ಇರುತ್ತವೆ. ರಾಮಾಯಣದ ಆಯ್ದ ವಿವಿಧ ಭಾಗಗಳನ್ನು ಅಭಿನಯಿಸಲಾಗುತ್ತದೆ. ರಾಮ, ಸೀತಾ, ರಾವಣ, ಲಕ್ಷ್ಮಣ, ಹನುಮಾನ್ ಮತ್ತು ಸುಗ್ರೀವ ಮುಖ್ಯ ಪಾತ್ರಗಳು. ರಾಮ ವನವಾಸಕ್ಕೆ ಹೊರಡುವದರೊಂದಿಗೆ ಆರಂಭವಾಗಿ ರಾವಣ ದಹನದಲ್ಲಿ ಕೊನೆಯಾಗುತ್ತದೆ. ನೃತ್ಯದ ಕೊನೆಯಲ್ಲಿ ಮಧ್ಯದಲ್ಲಿ ದೊಡ್ಡ ಬೆಂಕಿಯನ್ನು ಹಾಕಿ ನರ್ತಿಸುವುದರಿಂದ ಇದಕ್ಕೆ “ಬೆಂಕಿ ನೃತ್ಯ’ ಎಂದೂ ಕರೆಯುತ್ತಾರೆ. “ಕೇಚಕ್’ ಎಂದರೆ ಮಂಗಗಳ ಮಾಡುವ ಸದ್ದು , ಆ ಶಬ್ದವೇ ಪ್ರಧಾನವಾದ ಕಾರಣ ನೃತ್ಯಕ್ಕೂ ಆ ಹೆಸರು!
ಮೂಲ
ಈ ನೃತ್ಯದ ಮೂಲ ಪ್ರಾಚೀನ ಬಾಲಿನೀಸ್ ವಿಧಿ ಸಂಘಾÂಂಗ್ನಲ್ಲಿದೆ. ಇದರಲ್ಲಿ ಭೂತೋಚ್ಚಾಟನೆಗೆ ಮಾಡಲಾಗುತ್ತಿದ್ದ ಈ ನೃತ್ಯದಲ್ಲಿ ಪಾತ್ರಧಾರಿಗಳು ಒಂದು ಬಗೆಯ ಸಮೂಹ ವಶೀಕರಣಕ್ಕೆ ಒಳಗಾದವರಂತೆ ವರ್ತಿಸುತ್ತಿದ್ದರು. ಕೆಲವು ಬಾರಿ ಇಡೀ ರಾತ್ರಿ,ವಾರಗಳ ಕಾಲ ಇದು ದೇಗುಲಗಳ ಒಳಗೆ ನಡೆಯುತ್ತಿತ್ತು. 1930 ರಲ್ಲಿ ವಾಲ್ಟರ್ ಸ್ಪೆçಸ್ ಎಂಬ ಜರ್ಮನ್ ಕಲಾವಿದ ಬಾಲಿಯ ವಯಾನ್ ಲಿಂಬಕ್ ಜತೆ ಸೇರಿ ಈ ವಿಧಿಗೆ ಪ್ರದರ್ಶನಕ್ಕಾಗಿ ಹೊಸ ರಂಗರೂಪ ನೀಡಿದ. ಸಂಜೆ ಆರುಗಂಟೆಗೆ ಉಲುವಾಟುವಿನ ಹೊರ ಅಂಗಳದಲ್ಲಿ ಇರುವ ಬಯಲು ರಂಗಮಂದಿರದಲ್ಲಿ ದಿನವೂ ನೃತ್ಯಪ್ರದರ್ಶನ ಇರುತ್ತದೆ.
ಕೆ. ಎಸ್. ಚೈತ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್