ಶಬರಿಮಲೆಗೆ ಯುವತಿಯರ ಪ್ರವೇಶ: ಇಂದು ಹರತಾಳ
Team Udayavani, Jan 3, 2019, 5:06 AM IST
ಕಾಸರಗೋಡು: ಯುವತಿಯರಿಬ್ಬರು ಜ. 2ರಂದು ಮುಂಜಾನೆ ಶಬರಿಮಲೆ ಸನ್ನಿಧಾನ ತಲುಪಿ ದೇವರ ದರ್ಶನ ಪಡೆದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯಿತು.
ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಪ್ರತಿಭಟನೆ ಮೆರವಣಿಗೆ ನಡೆಯಿತು. ಶಬರಿಮಲೆ ಕ್ರಿಯಾ ಸಮಿತಿ ಜ. 3ರಂದು ಬೆಳಗ್ಗೆ 6 ಗಂಟೆ ಯಿಂದ ಸಂಜೆ 6ರ ತನಕ ರಾಜ್ಯ ವ್ಯಾಪಿ ಹರತಾಳಕ್ಕೆ ಕರೆ ನೀಡಿದೆ. ಬಿಜೆಪಿ, ಸಂಘ ಪರಿವಾರ ಸಹಿತ 64 ಸಂಘಟನೆಗಳು ಬೆಂಬಲ ಘೋಷಿಸಿವೆ.
ಶಿಷ್ಟಾಚಾರ ಮೀರದಿರಿ: ಪರ್ಯಾಯ ಶ್ರೀ
ಉಡುಪಿ: ರಾಷ್ಟ್ರಪತಿಗಳು, ಸರಕಾರಕ್ಕೆ ಪ್ರೊಟೋಕಾಲ್ ಇರುವಂತೆ ಧಾರ್ಮಿಕ ಸ್ಥಳಗಳಲ್ಲಿಯೂ ಪರಂಪರಾಗತ ಸಂಪ್ರದಾಯಗಳಿರುತ್ತವೆ. ಅವನ್ನು ಮುರಿಯಲಾಗದು ಎಂದು ಪರ್ಯಾಯ ಶ್ರೀಪಾದರು ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ಪ್ರತಿಭಟನೆ
ಮಂಗಳೂರು: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಬಲಾತ್ಕಾರ ಪ್ರವೇಶವನ್ನು ಮಂಗ ಳೂರಿನ ಅಯ್ಯಪ್ಪ ಭಕ್ತ ವೃಂದ ಖಂಡಿಸಿದೆ. ಇದನ್ನು ವಿರೋಧಿಸಿ ಶಬರಿಮಲೆ ಕ್ಷೇತ್ರ ಸಂರಕ್ಷಣ ಸಮಿತಿ ಜ.3ರಂದು ಕರೆ ನೀಡಿರುವ ಕೇರಳ ಬಂದ್ನ್ನು ಬೆಂಬಲಿಸಲಾಗುವುದು ಎಂದು ಗುರುಸ್ವಾಮಿ ವಿಶ್ವನಾಥ ಕಾಯರ್ಪಲ್ಕೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ, ಶ್ರೀರಾಮಸೇನೆ ಕೂಡ ಘಟನೆಯನ್ನು ಖಂಡಿಸಿವೆ.
ಇಂದು ಬೃಹತ್ ಪ್ರತಿಭಟನೆ
ಉಡುಪಿ: ಜಿಲ್ಲಾ ಶಬರಿಮಲೆ ಕ್ಷೇತ್ರ ಸಂರಕ್ಷಣ ಸಮಿತಿಯಿಂದ ಜ. 3ರ ಅಪರಾಹ್ನ 3ಕ್ಕೆ ಅಜ್ಜರಕಾಡು ಭುಜಂಗ ಪಾರ್ಕ್ ಸೈನಿಕರ ಹುತಾತ್ಮರ ಸ್ಮಾರಕದ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ.