PM ಮೋದಿ ಅಫೀಮು ಸೇವಿಸಿದವರಂತೆ ಮಲಗಿದ್ದರು: ಖರ್ಗೆ ತೀವ್ರ ವಾಗ್ದಾಳಿ
Team Udayavani, Apr 4, 2024, 7:36 PM IST
ಜೈಪುರ:ಪ್ರಧಾನಿ ನರೇಂದ್ರ ಮೋದಿ ಸುಳ್ಳುಗಾರರ ಸರದಾರ. ಚೀನಾ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದಾಗ ಅಫೀಮು ಸೇವಿಸಿದವರಂತೆ ಮಲಗಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಚಿತ್ತೋರ್ಗಢದಲ್ಲಿ ಚುನಾವಣ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ‘ಮೋದಿಯವರು ದೇಶಕ್ಕಾಗಿ ಯೋಚಿಸುವುದಿಲ್ಲ ಆದರೆ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಗಾಂಧಿ ಕುಟುಂಬವನ್ನು ನಿಂದಿಸುವಲ್ಲಿ ನಿರತರಾಗಿದ್ದಾರೆ’ ಎಂದು ಕಿಡಿ ಕಾರಿದರು.
“ನನಗೆ 56 ಇಂಚಿನ ಎದೆಯಿದೆ, ನಾನು ಹೆದರುವುದಿಲ್ಲ ಎಂದು ಮೋದಿ ಹೇಳುತ್ತಾರೆ. ನಿಮಗೆ ಭಯವಿಲ್ಲದಿದ್ದರೆ ನಮ್ಮ ಭೂಮಿಯಲ್ಲಿ ಹೆಚ್ಚಿನ ಭಾಗವನ್ನು ಚೀನಾಕ್ಕೆ ಏಕೆ ಬಿಟ್ಟಿದ್ದೀರಿ. ಅವರು ಒಳಗೆ ಬರುತ್ತಿದ್ದಾರೆ ಮತ್ತು ನೀವು ಮಲಗುತ್ತಿದ್ದೀರಿ. ನೀವು ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡಿದ್ದೀರಾ? ಅವರು ರಾಜಸ್ಥಾನದ ಹೊಲಗಳಿಂದ ಅಫೀಮು ತೆಗೆದುಕೊಂಡು ನಿಮಗೆ ತಿನ್ನಿಸಿದ್ದಾರೆಯೇ?” ಎಂದು ಪ್ರಶ್ನಿಸಿದರು.
‘ಪ್ರಧಾನಿಯವರು ವಿದೇಶ ಪ್ರವಾಸ ಮಾಡಿದ್ದಾರೆ, ಲೋಕಸಭೆ ಚುನಾವಣೆ ವೇಳೆ ದೇಶಾದ್ಯಂತ ಭೇಟಿ ನೀಡುತ್ತಿದ್ದಾರೆ, ಆದರೆ ಅವರು ಗಲಭೆಗಳನ್ನು ಕಂಡ ಮಣಿಪುರಕ್ಕೆ ಹೋಗಲಿಲ್ಲ’ಎಂದರು.