ಮಗಳೆಂದರೆ ರೋಹಿಣಿಯಂತೆ ಇರಬೇಕು! ಲಾಲು ಪುತ್ರಿಯ ತ್ಯಾಗಕ್ಕೆ ಮೆಚ್ಚುಗೆಯ ಸುರಿಮಳೆ
Team Udayavani, Dec 7, 2022, 7:30 AM IST
ಪಾಟ್ನಾ:ತಮ್ಮ ತಂದೆಗೆ ತಮ್ಮದೇ ಕಿಡ್ನಿಯನ್ನು ದಾನ ಮಾಡಿರುವ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಿಕೆಯ ಸುರಿಮಳೆ ಪ್ರಾಪ್ತಿಯಾಗಿದೆ.
ಬಿಜೆಪಿಯ ಫೈರ್ಬ್ರಾಂಡ್ ನಾಯಕ ಗಿರಿರಾಜ್ ಸಿಂಗ್ ಅವರೂ ಟ್ವೀಟ್ ಮಾಡಿ, “ಮಗಳೆಂದರೆ ರೋಹಿಣಿಯಂತೆ ಇರಬೇಕು. ನೀವು ಎಲ್ಲರಿಗೂ ಮಾದರಿಯಾಗಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, “ನನಗೆ ಮಗಳಿಲ್ಲ. ಆದರೆ, ಇಂದು ರೋಹಿಣಿಯವರನ್ನು ನೋಡಿದ ಮೇಲೆ, ನನಗೇಕೆ ಮಗಳನ್ನು ಕೊಟ್ಟಿಲ್ಲ ಎಂದು ದೇವರಲ್ಲಿ ಜಗಳವಾಡಬೇಕು ಎಂದೆನಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ, ಕಿಡ್ನಿ ದಾನ ಮಾಡಿದ ಬಳಿಕ ಆಸ್ಪತ್ರೆಯ ಬೆಡ್ನಲ್ಲಿ ಮಲಗಿರುವ ರೋಹಿಣಿಯವರ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ರೋಹಿಣಿ “ಆಚಾರ್ಯ’ ಆಗಿದ್ದು ಹೇಗೆ?:
ಲಾಲು ಪುತ್ರಿ ರೋಹಿಣಿಗೆ “ಆಚಾರ್ಯ’ ಎಂಬ ಉಪನಾಮ ಬಂದಿದ್ದು ಹೇಗೆ ಗೊತ್ತಾ? 1979ರಲ್ಲಿ ಬಿಹಾರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಕಮಲಾ ಆಚಾರ್ಯ ಅವರೇ ಲಾಲು ಅವರ ಪತ್ನಿಯ 2ನೇ ಹೆರಿಗೆ ಮಾಡಿಸಿದ್ದರು. ಸಿಸೇರಿಯನ್ ಮೂಲಕ ರೋಹಿಣಿ ಜನಿಸಿದ್ದರು. ಆಗ, ವೈದ್ಯೆ ಕಮಲಾರಿಗೆ ಉಡುಗೊರೆ ನೀಡಲು ಲಾಲು ಅವರು ಮುಂದಾದಾಗ, ಅದನ್ನು ನಿರಾಕರಿಸಿದ್ದ ಕಮಲಾ, “ಗಿಫ್ಟ್ ಬದಲಾಗಿ ನಿಮ್ಮ ಮಗಳಿಗೆ ನನ್ನ ಉಪನಾಮವನ್ನು ಇಡುತ್ತೀರಾ’ ಎಂದು ಕೇಳಿದ್ದರು. ಅಂದಿನಿಂದ ರೋಹಿಣಿ ಅವರು “ರೋಹಿಣಿ ಆಚಾರ್ಯ’ ಆದರು.