ಅಭಿನಂದನ್ ಹಸ್ತಾಂತರಕ್ಕೆ ಕ್ಷಣಗಣನೆ: ವಾಘಾ ಭಿಗಿ ಭದ್ರತೆ, ಜನಸಂದೋಹ
Team Udayavani, Mar 1, 2019, 7:05 AM IST
ಹೊಸದಿಲ್ಲಿ : ಪಾಕಿಸ್ಥಾನ ತನ್ನ ವಶದಲ್ಲಿರುವ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಇಂದು ಶುಕ್ರವಾರ ಮಧ್ಯಾಹ್ನ 2ರಿಂದ 4 ಗಂಟೆಯ ಒಳಗೆ ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಿದೆ ಎಂದು ಅಧಿಕೃತವಾಗಿ ತಿಳಿದು ಬರುತ್ತಿರುವಂತೆಯೆ ವಾಘಾ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪಾಕ್ ಎಫ್ 16 ವಿಮಾನವನ್ನು ಹೊಡೆದುರುಳಿಸುವಲ್ಲಿ ಎಂಟೆದೆಯ ಸಾಹಸ ತೋರಿ, ತನ್ನ ಮಿಗ್ 21 ವಿಮಾನ ಪತನಗೊಳ್ಳುತ್ತಿದ್ದಂತೆಯೇ ಪ್ಯಾರಾಶೂಟ್ ಮೂಲಕ ಹೊರ ಜಿಗಿದು, ದುರದೃಷ್ಟಕ್ಕೆ ಪಿಓಕೆಯಲ್ಲಿ ಗಾಯಾಳುವಾಗಿ ಬಿದ್ದು, ಪಾಕ್ ಸೇನೆಯ ಕೈವಶವಾದ ಹೊರತಾಗಿಯೂ ಎಲ್ಲರ ಶುಭ ಹಾರೈಕೆಯ ಫಲವಾಗಿ ಅಭಿನಂದನ್ ಇದೀಗ ಯಶಸ್ವಿಯಾಗಿ ದೇಶಕ್ಕೆ ಮರಳಿ ಬರುತ್ತಿರುವುದರಿಂದ ಆತ ಜನಮಾನಸದಲ್ಲಿ ಅಪ್ರತಿಮ ಹೀರೋ ಆಗಿ ಬಿಟ್ಟಿದ್ದಾರೆ.
ಅಂತೆಯೇ ಅಭಿನಂದನ್ ಅವರನ್ನು ಸ್ವೀಕರಿಸುವ ವಾಘಾ ಗಡಿಯಲ್ಲಿನ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಜನರು ಭಾರೀ ಸಂಖ್ಯೆಯಲ್ಲಿ ವಾಘಾ ಗಡಿ ಪ್ರದೇಶದಲ್ಲಿ ಜಮಾಯಿಸುತ್ತಿದ್ದಾರೆ.
ಅಭಿನಂದನ್ ಅವರನ್ನು ಪಾಕಿಸ್ಥಾನ ಹಸ್ತಾಂತರಿಸಿದ ಬಳಿಕ ಎಲ್ಲವೂ ಶುಭಾಂತ್ಯವಾಗಿದೆ ಎಂದು ಯಾರೂ ಭಾವಿಸದೆ ಭಯೋತ್ಪಾದನೆ ವಿರುದ್ಧದ ದೇಶದ ಹೋರಾಟವನ್ನು ಮುಂದುವರಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.