“ಚೀನ ಯುದ್ಧ ವಿಮಾನ ಹಾರಾಟಕ್ಕೆ ಕಾರಣ ಹೇಳಲಾರೆ’
Team Udayavani, Jul 17, 2022, 10:55 PM IST
ನವದೆಹಲಿ: ಕಳೆದ ತಿಂಗಳು ಪೂರ್ವ ಲಡಾಖ್ನ ನೈಜ ಗಡಿ ನಿಯಂತ್ರಣ ರೇಖೆಗೆ ತೀರಾ ಸನಿಹದಲ್ಲಿ; ಚೀನ ಯುದ್ಧ ವಿಮಾನವೊಂದು ಹಾರಾಟ ನಡೆಸಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಭಾರತೀಯ ವಾಯುಸೇನಾ ಮುಖ್ಯಸ್ಥ ವಿ.ಆರ್.ಚೌಧರಿ, ಇದಕ್ಕೆ ನಿರ್ದಿಷ್ಟ ಕಾರಣವೇನೆಂದು ತಾನು ಹೇಳಲಾರೆ ಎಂದಿದ್ದಾರೆ.
ಆದರೆ ಚೀನದ ಯಾವುದೇ ಯುದ್ಧ ವಿಮಾನ ಭಾರತೀಯ ಗಡಿ ಸನಿಹ ಹಾರಿದಲ್ಲಿ, ತಕ್ಷಣ ಭಾರತೀಯ ಯುದ್ಧ ವಿಮಾನಗಳು ಮುನ್ನುಗ್ಗುತ್ತವೆ, ಹಾಗೆಯೇ ಸ್ಥಳದಲ್ಲಿ ಕಟ್ಟೆಚ್ಚರ ಪಾಲಿಸಲಾಗುತ್ತದೆ. ನಾವು ಗಡಿಯನ್ನು ರಕ್ಷಿಸಿಕೊಳ್ಳಲು ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಲಡಾಖ್ ಬಿಕ್ಕಟ್ಟು, 16ನೇ ಸುತ್ತಿನ ಮಾತುಕತೆ ಆರಂಭ: ಪೂರ್ವ ಲಡಾಖ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ-ಚೀನ ಸೇನಾಧಿಕಾರಿಗಳ ನಡುವೆ ಚುಶುಲ್-ಮೊಲ್ಡೊ ಭಾಗದಲ್ಲಿ 16ನೇ ಸುತ್ತಿನ ಮಾತುಕತೆ ಆರಂಭವಾಗಿದೆ. ಗಡಿಭಾಗದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವುದು ಮಾತುಕತೆಯ ಪ್ರಧಾನ ಉದ್ದೇಶವಾಗಿದೆ.