ತಮಿಳು ನಾಡು ಅನಿಶ್ಚಿತತೆ: ಮುಂಬಯಿಯಲ್ಲೇ ಉಳಿದ ರಾಜ್ಯಪಾಲರು
Team Udayavani, Feb 8, 2017, 4:11 PM IST
ಮುಂಬಯಿ : ತಮಿಳು ನಾಡಿನಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿರುವುದರ ನಡುವೆಯೇ, ರಾಜ್ಯದ ಹೆಚ್ಚುವರಿ ಹೊಣೆಗಾರಿಕೆಯನ್ನು ಹೊಂದಿರುವ ಮಹಾರಾಷ್ಟ್ರ ರಾಜ್ಯಪಾಲ ಸಿಎಚ್ ವಿದ್ಯಾಸಾಗರ ರಾವ್ ಅವರಿಂದು ಮುಂಬಯಿಯಲ್ಲೇ ಉಳಿದಿದ್ದು ಅವರು ಚೆನ್ನೈಗೆ ಯಾವಾಗ ಪ್ರಯಾಣಿಸುತ್ತಾರೆ ಎಂಬುದರ ಸುಳಿವು ಲಭ್ಯವಾಗಿಲ್ಲ.
“ಮುಂಬಯಿಯಿಲ್ಲಿ ಇಂದು ಸಂಜೆ ನಿಗದಿಯಾಗಿರುವ ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲರು ಭಾಗವಹಿಸಲಿದ್ದಾರೆ; ಅವರು ನಾಳೆ ದಿಲ್ಲಿ ಅಥವಾ ಚೆನ್ನೈಗೆ ಪ್ರಯಾಣಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ರಾಜಭವನದ ಅಧಿಕಾರಿಯೋರ್ವರು ಹೇಳಿದ್ದಾರೆ.
ನಿನ್ನೆ ರಾಜಭವನದ ಮೂಲಗಳು, “ರಾಜ್ಯಪಾಲರು ಇನ್ನೊಂದು ಅಥವಾ ಎರಡು ದಿನಗಳ ಒಳಗೆ ಚೆನ್ನೈಗೆ ನಿರ್ಗಮಿಸುವ ಸಾಧ್ಯತೆಗಳಿವೆ’ ಎಂದು ಹೇಳಿದ್ದವು.
ತಮಿಳು ನಾಡಿನ ಮುಖ್ಯಮಂತ್ರಿ ಓ ಪನ್ನೀರ ಸೆಲ್ವಂ ಅವರು ನಿನ್ನೆ ಮಂಗಳವಾರ ರಾತ್ರಿ “ಎಐಎಡಿಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ಅವರು ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡುವಂತೆ ನನ್ನನ್ನು ಬಲವಂತ ಪಡಿಸಿದ್ದಾರೆ’ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದರು. ಶಶಿಕಲಾ ಅವರು ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಸ್ವೀಕರಿಸುವುದಕ್ಕೆ ಸಿದ್ಧರಾಗಿ ನಿಂತಿದ್ದಾರೆ.