ಹೆಚ್ಚು ಅಂಕಗಳಿಕೆಗೆ ಸಂತೋಷವೇ ಮದ್ದು
Team Udayavani, Jan 30, 2017, 3:45 AM IST
ನವದೆಹಲಿ: ಪರೀಕ್ಷೆ ಎಂಬುದು ಹಬ್ಬವಿದ್ದಂತೆ, ಸಂತೋಷದಿಂದ ಸ್ವೀಕರಿಸಬೇಕೆ ಹೊರತು ಒತ್ತಡ ಎಂದು ಭಾವಿಸಬಾರದು. ಸಂತೋಷದ ಮನಸ್ಥಿತಿಯು ಹೆಚ್ಚು ಅಂಕ ಪಡೆಯುವ ಸಾಧನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿ ಸಮೂಹಕ್ಕೆ ಕಿವಿಮಾತು ಹೇಳಿದ್ದಾರೆ.
ರೇಡಿಯೋ ಕಾರ್ಯಕ್ರಮದ ಮನ್ ಕಿ ಬಾತ್ನಲ್ಲಿ ಭಾನುವಾರ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದ ಅವರು, ಪರೀಕ್ಷೆ ವೇಳೆ ಮನೆಯಲ್ಲಿ ಪೋಷಕರು ಹಬ್ಬದ ವಾತಾವರಣ ಸೃಷ್ಟಿಸಬೇಕು ಎಂದಿದ್ದಾರೆ. ಜೀವನದ ಯಶಸ್ಸಿಗೆ ಪರೀಕ್ಷೆಗಳು ಮಾನದಂಡವಲ್ಲ. ಧ್ಯೇಯ ಹಾಗೂ ಆಕಾಂಕ್ಷೆಗಳು ಒಂದೇ ಆಗಿದ್ದರೆ ಅಂಕಗಳೇ ನಿಮ್ಮನ್ನು ಹಿಂಬಾಲಿಸುತ್ತವೆ. ನೀವು ಅಂಕಗಳ ಹಿಂದೆ ಹೋಗಬೇಕಾಗಿಲ್ಲ ಎಂದು ತಿಳಿಸಿದರು.
ನಿಮಗೆ ನೀವೇ ಸ್ಪರ್ಧಿಗಳಾಗಬೇಕು. ಇದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಇದಕ್ಕೆ ಸಚಿನ್ ತೆಂಡುಲ್ಕರ್ ಉದಾಹರಣೆ. 20 ವರ್ಷಗಳಿಂದ ಅವರ ದಾಖಲೆಗಳನ್ನು ಅವರೇ ಸರಿಗಟ್ಟಿದ್ದಾರೆ. ಇದೇ ಅವರ ಸಾಧನೆಗೆ ಕಾರಣ ಎಂದು ಮೋದಿ ವಿವರಿಸಿದರು.
ಮೋದಿಗೆ ಸಚಿನ್ ಥ್ಯಾಂಕ್ಸ್
ಮನ್ ಕಿ ಬಾತ್ನಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಯಶಸ್ಸಿನ ಗುಟ್ಟುಗಳನ್ನು ತಿಳಿಸಿದ್ದಕ್ಕೆ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರು ಟ್ವೀಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹುತಾತ್ಮರಿಗಾಗಿ ಮೌನಾಚರಿಸೋಣ
ಮೋದಿ ಜ.30ರ ಹುತಾತ್ಮರ ದಿನಾಚರಣೆ ಅಂಗವಾಗಿ 2 ನಿಮಿಷ ಮೌನಾಚರಣೆ ಮಾಡಲು ಕರೆ ನೀಡಿದ್ದಾರೆ. “ಜ.30ರ ಸೋಮವಾರ ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮರ ದಿನಾಚರಣೆ. ಆ ಹುತಾತ್ಮರಿಗೆ ಗೌರವ ಸಲ್ಲಿಸಲು ಸೋಮವಾರ ಬೆಳಗ್ಗೆ 2 ನಿಮಿಷ ಮೌನಾಚರಣೆ ಮಾಡೋಣ’ ಎಂದು ಹೇಳಿದ್ದಾರೆ.