ಅಸ್ಸಾಂನಲ್ಲಿ ಭೀಕರ ಪ್ರವಾಹ: ಕನಿಷ್ಠ 63 ಜನ ಬಲಿ; 31 ಲಕ್ಷ ಜನ ಸಂತ್ರಸ್ತ
Team Udayavani, Jun 19, 2022, 5:40 PM IST
ದಿಸ್ಪುರ: ಅಸ್ಸಾಂ ಕುಂಭದ್ರೋಣ ಮಳೆಯಿಂದಾಗಿ ಭೀಕರ ಪ್ರವಾಹಕ್ಕೆ ಸಿಲುಕಿದೆ. 32 ಜಿಲ್ಲೆಗಳಲ್ಲಿ 4,291 ಗ್ರಾಮಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ.ಮಳೆ ಸಂಬಂಧಿ ಸಾವಿನ ಸಂಖ್ಯೆ 62 ಕ್ಕೆ ಏರಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್ಡಿಎಂಎ) ಬಿಡುಗಡೆಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಪ್ರವಾಹ ಮತ್ತು ಭೂಕುಸಿತಗಳು ಎಂಟು ಜನರನ್ನು ಬಲಿ ತೆಗೆದುಕೊಂಡಿದೆ. ಎಂಟು ಜನರಲ್ಲಿ ಇಬ್ಬರು ಕರೀಂಗಂಜ್ ಜಿಲ್ಲೆಯಲ್ಲಿ ಮತ್ತು ಹೈಲಕಂಡಿ ಜಿಲ್ಲೆಯಲ್ಲಿ ಭೂಕುಸಿತದಲ್ಲಿ ಒಬ್ಬ ವ್ಯಕ್ತಿ ಜೀವಂತ ಸಮಾಧಿಯಾಗಿದ್ದು, ಆರು ಮಂದಿ ಪ್ರವಾಹದ ನೀರಿನಲ್ಲಿ ಸಾವನ್ನಪ್ಪಿದ್ದಾರೆ.
ಶನಿವಾರ ಅಸ್ಸಾಮ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ಸತತ ಐದನೇ ದಿನ ಮಳೆಯಾಗಿದ್ದು, ಅಸ್ಸಾಂನಲ್ಲಿ ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ರಾಜ್ಯದ ಹಲವೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಅಸ್ಸಾಂ ಪ್ರವಾಹದಿಂದ ತತ್ತರಿಸುತ್ತಿರುವಂತೆಯೇ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ನಿರಾಶ್ರಿತರಿಗೆ ಆಶ್ರಯ ನೀಡುವ ಹಲವಾರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿ ಕೇಂದ್ರದಿಂದ ರಾಜ್ಯಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಬೆಳಗ್ಗೆ 6 ಗಂಟೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನ ಪ್ರವಾಹ ಪರಿಸ್ಥಿತಿಯ ಬಗ್ಗೆ ವಿಚಾರಿಸಲು ನನಗೆ ಕರೆ ಮಾಡಿದರು. ಈ ನೈಸರ್ಗಿಕ ವಿಕೋಪದಿಂದ ಜನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸುವಾಗ, ಗೌರವಾನ್ವಿತ ಪ್ರಧಾನಿ ಕೇಂದ್ರ ಸರ್ಕಾರದಿಂದ ಎಲ್ಲಾ ಸಹಾಯವನ್ನು ಭರವಸೆ ನೀಡಿದರು ಎಂದು ಸಿಎಂ ಶರ್ಮಾ ಟ್ವೀಟ್ ಮಾಡಿದ್ದಾರೆ.