ಗುಜರಾತ್ ನ ಸರ್ ಕ್ರೀಕ್ ನಲ್ಲಿ ದೋಣಿ ಪತ್ತೆ; ಉಗ್ರರಿಂದ ದಾಳಿ ಸಾಧ್ಯತೆ; ಗುಪ್ತಚರ ಇಲಾಖೆ
Team Udayavani, Sep 9, 2019, 6:16 PM IST
ಅಹಮ್ಮದಾಬಾದ್:ದಕ್ಷಿಣ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದ್ದಿರುವುದಾಗಿ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಗುಜರಾತ್ ನ ಸರ್ ಕ್ರೀಕ್ ನ ಕರಾವಳಿ ಪ್ರದೇಶದಲ್ಲಿ ದೋಣಿಯೊಂದು ಪತ್ತೆಯಾಗಿದೆ.
ಕಛ್ ನ ಕರಾವಳಿ ಪ್ರದೇಶದ ಮೂಲಕ ಪಾಕಿಸ್ತಾನದ ಕಮಾಂಡೋಗಳು ನುಸುಳುವ ಸಾಧ್ಯತೆ ಇದ್ದು, ಅವರು ಗುಜರಾತ್ ನಲ್ಲಿ ಕೋಮು ಸಾಮರಸ್ಯ ಕದಡುವ ನಿಟ್ಟಿನಲ್ಲಿ ದಾಳಿ ನಡೆಸುವ ಸಾಧ್ಯತೆ ಇದ್ದಿರುವುದಾಗಿ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ ಬಳಿಕ ಗುಜರಾತ್ ನ ಬಂದರು ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಲಾಗಿತ್ತು.
ದಕ್ಷಿಣ ಭಾರತದ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿ ನಡೆಯುವ ಬಗ್ಗೆ ನಾವು ಗುಪ್ತಚರ ಇಲಾಖೆಯಿಂದ ಹಲವು ಮಾಹಿತಿ ಪಡೆದಿದ್ದೇವೆ. ಏತನ್ಮಧ್ಯೆ ಸರ್ ಕ್ರೀಕ್ ಪ್ರದೇಶದಲ್ಲಿ ದೋಣಿಯೊಂದು ಪತ್ತೆಯಾಗಿದೆ ಎಂದು ಜನರಲ್ ಆಫೀಸರ್ ಕಮಾಂಡಿಂಗ್ ಎಸ್ ಕೆ ಸೈನಿ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ದೋಣಿ ಮೂಲಕ ಉಗ್ರರು ನುಸುಳಿರುವ ಸಾಧ್ಯತೆ ಇದ್ದಿರುವುದಾಗಿ ಶಂಕಿಸಲಾಗಿದ್ದು, ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ವರದಿ ತಿಳಿಸಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ನೆಲೆಸಿತ್ತು.