ಜವುಳಿಗೆ ದಸರೆ ಧಮಾಕ; 7 ಮೆಗಾ ಜವುಳಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಒಪ್ಪಿಗೆ
Team Udayavani, Oct 7, 2021, 6:50 AM IST
ಹೊಸದಿಲ್ಲಿ: ದಸರೆಯ ಶುಭ ಸಂದರ್ಭದಲ್ಲಿಯೇ ಕೇಂದ್ರ ಸರಕಾರ ಜವುಳಿ ಉದ್ದಿಮೆಗೆ ಸಂತೋಷದ ಸುದ್ದಿ ನೀಡಿದೆ. ದೇಶದ ವಿವಿಧ ಭಾಗಗಳಲ್ಲಿ ಏಳು ಪ್ರಧಾನಮಂತ್ರಿ-ಮೆಗಾ ಏಕೀಕೃತ ಜವುಳಿ ಮತ್ತು ಉಡುಪು (ಪಿಎಂ-ಮಿತ್ರ) ಪಾರ್ಕ್ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆ ಸಮ್ಮತಿಸಿದೆ.
ಐದು ವರ್ಷಗಳ ಅವಧಿಯಲ್ಲಿ ಒಟ್ಟು 4,445 ಕೋಟಿ ರೂ. ಮೊತ್ತವನ್ನು ಸರಕಾರ ವಿನಿಯೋಗ ಮಾಡಲಿದೆ ಎಂದು ಸಂಪುಟ ಸಭೆಯ ಬಳಿಕ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಬುಧವಾರ ತಿಳಿಸಿದ್ದಾರೆ.
ಜವುಳಿ ಕ್ಷೇತ್ರದಲ್ಲಿ ವಿದೇಶಿ ಬಂಡ ವಾಳ ಹೂಡಿಕೆಗೆ ಅನುವಾಗು ವಂತೆಯೂ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ಮೂಲಕ ಜಗತ್ತಿನ ಜವುಳಿ ಉದ್ಯಮ ಕ್ಷೇತ್ರದಲ್ಲಿ ದೇಶದ ಮುಂಚೂಣಿಯಲ್ಲಿ ಇರುವಂತೆ ಮತ್ತು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಜವುಳಿ ಕ್ಷೇತ್ರ ಬಲಪಡಿಸಲು ಕೇಂದ್ರ ಸರಕಾರ ಪಣತೊಟ್ಟಿದೆ. ಏಳು ಜವುಳಿ ಪಾರ್ಕ್ ಗಳ ಪೈಕಿ ಕೆಲವನ್ನು ಹೊಸದಾಗಿನಿರ್ಮಿಸಲಾಗುತ್ತದೆ (ಗ್ರೀನ್ ಫೀಲ್ಡ್), ಹಾಲಿ ಇರುವ ಪಾರ್ಕ್ಗಳನ್ನೇ ಮತ್ತೆ ಅಭಿವೃದ್ಧಿ ಪಡಿಸುವ (ಬ್ರೌನ್ಫೀಲ್ಡ್) ಗುರಿ ಕೇಂದ್ರದ್ದಾಗಿದೆ. ಇದರಿಂದಾಗಿ ನೇರವಾಗಿ 7 ಲಕ್ಷ ಮತ್ತು 14 ಲಕ್ಷ ಪರೋಕ್ಷ ಉದ್ಯೋಗದ ಅವಕಾಶ ಗಳು ಸೃಷ್ಟಿಯಾಗಲಿವೆ ಎಂದು ಗೋಯಲ್ ಅವರು ತಿಳಿಸಿದ್ದಾರೆ.
ಖಾಸಗಿ ಮತ್ತು ಸರಕಾರಿ ಸಹ ಭಾಗಿತ್ವದಲ್ಲಿ ವಿಶೇಷ ಉದ್ದೇಶಿತ ವಾಹಕದ ಮೂಲಕ ಈ ಪಾರ್ಕ್ ಗಳನ್ನು ಅಭಿವೃದ್ಧಿ ಮಾಡಲಾಗು ತ್ತದೆ. ಇದರಿಂದಾಗಿ ದೇಶದ ಜವುಳಿ ಕಂಪೆನಿಗಳಿಗೂ ಜಗತ್ತಿನ ಗುಣ ಮಟ್ಟಕ್ಕನುಸಾರವಾಗಿ ಉತ್ಪಾದನೆಗೆ ಅನುಕೂಲವಾಗಲಿದೆ. ಐದು ಎಫ್ ಸೂತ್ರಗಳನ್ನು ಅಂದರೆ ಕೃಷಿ ಜಮೀನಿ ನಿಂದ ಎಳೆ (ಫಾರ್ಮ್ ಟು ಫೈಬರ್), ಅಲ್ಲಿಂದ ಕಾರ್ಖಾನೆ (ಫ್ಯಾಕ್ಟರಿ), ಅಲಂಕಾರ (ಫ್ಯಾಶನ್), ವಿದೇಶಕ್ಕೆ (ಫಾರಿನ್) ಅನ್ನು ಒಳಗೊಂಡಿದೆ ಎಂದೂ ಗೋಯಲ್ ಹೇಳಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡದಲ್ಲಿರುವ ಚಾರ್ಧಾಮ್ಗೆ ಇ-ಪಾಸ್ ಕಡ್ಡಾಯ
ಕರ್ನಾಟಕ, ತಮಿಳುನಾಡು, ಪಂಜಾಬ್, ಒಡಿಶಾ, ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ಅಸ್ಸಾಂ, ಮಧ್ಯಪ್ರದೇಶ, ತೆಲಂಗಾಣ ರಾಜ್ಯಗಳು ಜವುಳಿ ಪಾರ್ಕ್ ಸ್ಥಾಪನೆಗೆ ಮುಂದಾಗಿವೆ. ಈ ವರ್ಷದ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಘೋಷಣೆ ಮಾಡಿದ್ದರು.
ರೈಲ್ವೇ ಉದ್ಯೋಗಿಗಳಿಗೆ ಬೋನಸ್
ರೈಲ್ವೇ ಸಚಿವಾಲಯದ 11.56 ಲಕ್ಷ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ 78 ದಿನಗಳ ಉತ್ಪಾದನ ಆಧಾರಿತ ಬೋನಸ್ ಸಿಗಲಿದೆ.
ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಈ ಮಾಹಿತಿ ನೀಡಿದ್ದಾರೆ.
2020-21ನೇ ಸಾಲಿಗೆ ಸಂಬಂಧಿಸಿ ದಂತೆ ಈ ಕೊಡುಗೆ ಅನ್ವಯವಾಗಲಿದೆ. ರೈಲ್ವೇ ಭದ್ರತಾ ಪಡೆ (ಆರ್ಪಿಎಫ್) ಮತ್ತು ರೈಲ್ವೇ ಭದ್ರತೆಗಾಗಿ ವಿಶೇಷ ಪಡೆ(ಆರ್ಪಿಎಸ್ಎಪ್) ಸಿಬಂದಿ ಮತ್ತು ಅಧಿಕಾರಿಗಳಿಗೆ ಈ ಕೊಡುಗೆ ಅನ್ವಯ ವಾಗದು. ಗುರುವಾರದಿಂದ ದಸರಾ ಆರಂಭವಾಗಲಿರುವಂತೆಯೇ ರೈಲ್ವೇ ಉದ್ಯೋಗಿಗಳಿಗೆ ಸಂತೋಷದ ಸುದ್ದಿ ಯನ್ನು ಕೇಂದ್ರ ಸಂಪುಟ ನೀಡಿದೆ. ಈ ನಿರ್ಧಾರದಿಂದಾಗಿ ಸರಕಾರದ ಬೊಕ್ಕಸಕ್ಕೆ 1,985 ಕೋಟಿ ರೂ. ಹೊರೆ ಬೀಳಲಿದೆ.
ಕೇಂದ್ರದ ನಿರ್ಧಾರ ಜವುಳಿ
ಕ್ಷೇತ್ರಕ್ಕೆ ನೆರವಾಗಲಿದೆ. ಹೊಸದಾಗಿ ಆರಂಭಿಸುವ ಪಾರ್ಕ್ಗೆ 500 ಕೋಟಿ ರೂ., ಹಾಲಿ ಇರುವ ಜವುಳಿ ಪಾರ್ಕ್ ಅಭಿವೃದ್ಧಿಗೆ 200 ಕೋಟಿ ರೂ. ನೆರವು ಸ್ವಾಗತಾರ್ಹ.
– ರಾಜ ಎಂ. ತಿರುಪ್ಪೂರ್,
ರಫ್ತು ಸಂಘಟನೆ ಅಧ್ಯಕ್ಷ