ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ
ಉತ್ತಮ ಮಳೆ ಹಿನ್ನೆಲೆ ; ಎಣ್ಣೆ ಕಾಳುಗಳು, ಆಹಾರ ಧಾನ್ಯ ಬೆಳೆಯಲು ಆದ್ಯತೆ
Team Udayavani, Sep 23, 2020, 1:20 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ಪ್ರಸಕ್ತ ಸಾಲಿನಲ್ಲಿ ದೇಶದ ಹಲವು ಭಾಗಗಳಲ್ಲಿ ಉತ್ತಮ ಮುಂಗಾರು ಮಳೆಯಾಗಿದೆ. ಹೀಗಾಗಿ, ಜಲಸಂಗ್ರಹಾಗಾರಗಳಲ್ಲಿ ನೀರಿನ ಸಂಗ್ರಹ ತೃಪ್ತಿದಾಯಕವಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರ ಉತ್ಪಾದನೆಯ ಗುರಿಯನ್ನು ಕೇಂದ್ರ ಸರಕಾರ ಹಾಕಿಕೊಂಡಿದೆ. ಜತೆಗೆ ಈ ನಿಟ್ಟಿನಲ್ಲಿ ಆಮದು ಪ್ರಮಾಣ ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಕ್ರಮಕ್ಕೆ ಮುಂದಾಗಿದೆ. ಅದರ ಅನ್ವಯ 2020-21ನೇ ಸಾಲಿನಲ್ಲಿ 300 ದಶಲಕ್ಷ ಟನ್ಗಳಷುc ಆಹಾರ ಉತ್ಪಾದನೆಗೆ ಮುಂದಾಗಿದೆ. 2019-20ನೇ ಸಾಲಿಗಿಂತ ನಾಲ್ಕು ಟನ್ಗಳಷ್ಟು ಗುರಿ ಪ್ರಮಾಣ ಅಧಿಕವಾಗಿದೆ. ಎಣ್ಣೆ ಕಾಳು ಮತ್ತು ಆಹಾರ ಧಾನ್ಯಗಳನ್ನು
ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಆದ್ಯತೆ ನೀಡಲಾಗಿದೆ. ಅದರ ಅನ್ವಯ ಎಣ್ಣೆ ಕಾಳುಗಳು, ಸಾಸಿವೆಯನ್ನು 92 ಲಕ್ಷ ಟನ್ಗಳಿಂದ 1.25 ಕೋಟಿ ಟನ್ಗಳಿಗೆ ಬೆಳೆ ಪ್ರಮಾಣ ಏರಿಸಲು ನಿಗದಿ ಮಾಡಲಾಗಿದೆ. ಇದರಿಂದಾಗಿ ಇತರ ದೇಶಗಳಿಂದ ಈ ಉತ್ಪನ್ನಗಳ ಆಮದು ತಗ್ಗಿಸಲು ಕೇಂದ್ರ ಸರಕಾರ ಯೋಜಿಸುತ್ತಿದೆ. ಅದಕ್ಕಾಗಿ ಈ ಬೆಳೆಗಳಿಗೆ ಶೇ.5.1ರಷ್ಟು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಸೋಮವಾರ ಸರಕಾರ ಹೆಚ್ಚಿಸಿದೆ. ಸಾಮಾನ್ಯವಾಗಿ ಬೆಳೆಯಲಾಗುವ ಬೇಳೆ ಕಾಳುಗಳ ಬೆಳೆ ಗುರಿಯನ್ನು 2.56 ಕೋಟಿ ಟನ್ಗಳಷ್ಟು ಹೆಚ್ಚಿಸಲಾಗಿದೆ. ಮುಂದಿನ ತಿಂಗಳ ಮಧ್ಯಭಾಗದಿಂದ ರಬಿ ಬೆಳೆ ಕಾಲ ಶುರುವಾಗುವ ಹಿನ್ನೆಲೆಯಲ್ಲಿ ಈ ಉದ್ದೇಶಗಳನ್ನು ಪ್ರಕಟಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಎಣ್ಣೆ ಕಾಳುಗಳ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಮೂಲಕ ಅವುಗಳನ್ನು ಆಮದು ಮಾಡುವುದರ ಮೇಲೆ ಅವಲಂಬನೆ ಕಡಿಮೆ ಮಾಡಲಾಗುತ್ತದೆ ಎಂದಿದ್ದಾರೆ.