ಶಸ್ತ್ರಪೂಜೆಗೆ ಕೈ ಆಕ್ಷೇಪ, ಕಾಂಗ್ರೆಸ್ಗೆ ಸಂಸ್ಕೃತಿ ಗೊತ್ತಿಲ್ಲ: ಶಾ
ಬಿಜೆಪಿಯದ್ದು ತಮಾಷೆ: ಖರ್ಗೆ
Team Udayavani, Oct 10, 2019, 6:30 AM IST
ಕತಿಹಾರ್/ಕಲಬುರಗಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫ್ರಾನ್ಸ್ನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಶಸ್ತ್ರ ಪೂಜೆ ಸಲ್ಲಿಸಿದ್ದಕ್ಕೆ ಟೀಕೆ ಮಾಡಿರುವ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ರಕ್ಷಣಾ ಖರೀದಿಯನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಕೆ ಮಾಡುತ್ತಿದೆ ಎಂದು ಇತರ ವಿಪಕ್ಷಗಳು ಟೀಕಿಸಿವೆ. ಅದರ ವಿರುದ್ಧ ಹರಿಹಾಯ್ದಿರುವ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ಗೆ ದೇಶದ ಸಂಸ್ಕೃತಿ ಗೊತ್ತಿಲ್ಲ ಎಂದಿ ದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ನಡೆದ ಬೋಫೋರ್ಸ್ ಖರೀದಿ ವೇಳೆ ಒಟ್ಟಾವಿಯೋ ಕ್ವಾಟ್ರೋಚಿ ಪೂಜೆ ನಡೆಯು ತ್ತಿತ್ತು ಎಂದು ಬಿಜೆಪಿ ಟೀಕಿಸಿದೆ.
ತಮಾಷೆ ಎಂದ ಖರ್ಗೆ: ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ವೇಳೆಯಲ್ಲಿಯೇ ಫ್ರಾನ್ಸ್ನಲ್ಲಿ ರಫೇಲ್ ವಿಮಾನ ಹಾರಾಟ ನಡೆಸುವ ಮೂಲಕ ಕೇಂದ್ರ ಬಿಜೆಪಿ ಸರಕಾರ ಭಾವನಾತ್ಮಕ ಶೋಷಣೆಗೆ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿ ಸಿದರು. ಕಲಬುರಗಿಯಲ್ಲಿ ಮಾತನಾಡಿದ ಅವರು, ನಿಜಕ್ಕೂ ಇಂತಹ ನಾಟಕದ ಅಗತ್ಯವಿಲ್ಲ. ಅನೇಕ ವರ್ಷಗಳಿಂದ ಯುದ್ಧ ವಿಮಾನಗಳ ಖರೀದಿ ನಡೆಯುತ್ತಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬೋಫೋರ್ಸ್ ಸಹಿತ ಹಲವು ಯುದ್ಧ ವಿಮಾನ, ಗನ್ಗಳನ್ನು ತರಲಾಗಿದೆ. ಆದರೆ, ವಿದೇಶಕ್ಕೆ ಹೋಗಿ ವಿಮಾನದಲ್ಲಿ ಕುಳಿತು, ಹಾರಾಟ ಮಾಡುವ ತೋರ್ಪಡಿಕೆಯನ್ನು ಯಾರೂ ಮಾಡಿಲ್ಲ. ಯುದ್ಧ ವಿಮಾನಗಳ ಸಾಮರ್ಥ್ಯ ಅಳೆಯುವವರು ಸೇನಾಧಿ ಕಾರಿಗಳು. ದೇಶದ ರಕ್ಷಣೆ, ಸೇನೆ ಹೆಸರಲ್ಲಿ ರಾಜಕೀಯ ಸಲ್ಲದು ಎಂದು ಟೀಕಿಸಿದ್ದಾರೆ.
ದೇಶದ ಸಂಸ್ಕೃತಿ ಗೊತ್ತಿಲ್ಲ: ಖರ್ಗೆ ಹೇಳಿಕೆಗೆ ಪ್ರಬಲ ಆಕ್ಷೇಪ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ಗೆ ದೇಶದ ಸಂಸ್ಕೃತಿಯ ಅರಿವು ಇಲ್ಲ ಎಂದು ಟೀಕಿಸಿ ದ್ದಾರೆ. ಹರ್ಯಾಣದ ಕೈಥಾಲ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸಿಗರು ರಫೇಲ್ ವಿಮಾನಕ್ಕೆ ಪೂಜೆ ಮಾಡಿದ್ದಕ್ಕೂ ಆಕ್ಷೇಪ ಮಾಡುತ್ತಾರೆ ಎಂದು ದೂರಿದರು. ದೇಶದಲ್ಲಿ ಶಸ್ತ್ರ ಪೂಜೆ ಎನ್ನುವುದು ಹೊಸ ವಿಚಾರ ಅಲ್ಲ. ಇದು ದೇಶದ ಸಂಸ್ಕೃತಿಯ ಭಾಗ. ಕಾಂಗ್ರೆಸ್ ನಾಯಕರೇ ಯಾವುದನ್ನು ವಿರೋಧಿಸಬೇಕು, ವಿರೋಧಿಸಬಾರದು ಎನ್ನುವುದನ್ನು ಮೊದಲು ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.
ಬಳಕೆ ಮಾಡಿರಲಿಲ್ಲ
ಮಹಾರಾಷ್ಟ್ರದ ಅಕೋಲಾದಲ್ಲಿ ಚುನಾವಣಾ ಪ್ರಚಾರ ಸಭೆ ಯಲ್ಲಿ ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ದಿ| ಇಂದಿರಾ ಗಾಂಧಿ ಸೇನೆಯ ಹೆಸರಿನಲ್ಲಿ ಮತ ಯಾಚನೆ ಮಾಡಿ ರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅಂಥ ಕೆಲಸ ಮಾಡಿದ್ದಾರೆ ಎಂದು ಟೀಕಿಸಿ ದ್ದಾರೆ. 1971ರಲ್ಲಿ ನಡೆದ ಯುದ್ಧದಲ್ಲಿ ಸಿಕ್ಕಿದ ಗೆಲುವನ್ನು ಸೇನೆಗೆ ಇಂದಿರಾ ಅರ್ಪಿಸಿದ್ದರು. ಆದರೆ, ಐಎಎಫ್ ದಾಳಿಯಿಂದ ಬಾಲಾಕೋಟ್ ಕಾರ್ಯಾ ಚರಣೆ ಸಾಧ್ಯವಾ ಯಿತು. ಆದರೆ ಮೋದಿ ಸಾಹೇಬರು ನಾವು ಮಾಡಿದ್ದು ಎಂದು ಹೇಳಿಕೊಂಡರು ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಮಹಾರಾಷ್ಟ್ರದಲ್ಲಿನ ಬಿಜೆಪಿ-ಶಿವಸೇನೆ ಸರಕಾರ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಮಹಾರಾಷ್ಟ್ರಾದ್ಯಂತ ಈ ಬಾರಿ ಆಡಳಿತ ಬದಲಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ ಎಂದು ಹೇಳಿ ಕೊಂಡಿದ್ದಾರೆ. ಇದೇ ವೇಳೆ “ನ್ಯೂಸ್ 18’ಗೆ ನೀಡಿದ ಸಂದರ್ಶನದಲ್ಲಿ ಮಾತ ನಾಡಿದ ಅವರು, ಸಿಬಿಐ, ಇ.ಡಿ.ಗಳ ಮೂಲಕ ರಾಜಕೀಯ ವಿರೋಧಿಗಳನ್ನು ಹಣೆಯ ಲಾಗುತ್ತಿದೆ ಎಂದಿದ್ದಾರೆ.
ಚಿದಂಬರಂ ವಿರುದ್ಧ ಇ.ಡಿ.ಯಾಕೆ ವಿಚಾರಣೆ ಪೂರ್ಣಗೊಳಿಸುತ್ತಿಲ್ಲ, ಹಲವು ದಿನಗಳಿಂದ ಅವರೇಕೆ ಜೈಲಲ್ಲಿದ್ದಾರೆ, ಸರಕಾರ ನಮ್ಮನ್ನು ಮೌನವಾಗಿ ಇರಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.
ಸೋಲೊಪ್ಪಿಕೊಂಡಿದ್ದಾರೆ ಎಂದ ಫಡ್ನವೀಸ್
ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರಕ್ಕೆ ತೆರಳದೆ ವಿದೇಶ ಪ್ರವಾಸಕ್ಕೆ ತೆರಳಿರುವುದು ವಿಪಕ್ಷಗಳು ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡಂತೆ ಎಂದು ಮಹಾ ರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಲೇವಡಿ ಮಾಡಿದ್ದಾರೆ. ಮಹಾರಾಷ್ಟ್ರದ ಧುಲೆಯಲ್ಲಿ ಮಾತನಾಡಿದ ಅವರು, ಎನ್ಪಿಸಿ ಈಗಾಗಲೇ ಅರ್ಧ ಖಾಲಿಯಾಗಿದೆ. ಅ. 24ರಂದು ಫಲಿತಾಂಶ ಬರುವ ವೇಳೆ ಪೂರ್ತಿಯಾಗಿ ಬರಿದಾಗಲಿದೆ ಎಂದರು. ಇದರ ಜತೆಗೆ ಕಾಂಗ್ರೆಸ್-ಎನ್ಸಿಪಿ ಪ್ರಣಾಳಿಕೆಯಲ್ಲಿ ಜನಾಕರ್ಷಣೀಯವಾದದ್ದು ಇಲ್ಲವೆಂದಿದ್ದಾರೆ.
ಹಲ್ಲೆ ನಡೆಸಿದಾತ ಶಿವಸೇನೆ ಅಭ್ಯರ್ಥಿ
ಜವಾಹರ್ಲಾಲ್ ನೆಹರೂ ವಿವಿಯ ವಿದ್ಯಾರ್ಥಿ ಸಂಘಟನೆ ಮಾಜಿ ನಾಯಕ ಉಮರ್ ಖಾಲಿದ್ಗೆ ಹಲ್ಲೆ ನಡೆಸಿದ ನವೀನ್ ದಲಾಲ್ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆಯಿಂದ ಸ್ಪರ್ಧಿಸುತ್ತಿದ್ದಾರೆ. ಬಹಾದುರ್ಗಢ ಕ್ಷೇತ್ರದಿಂದ ಅವರಿಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಗೋ ರಕ್ಷಕ ಎಂದು ಹೇಳಿಕೊಂಡಿರುವ ಅವರು ಆರು ತಿಂಗಳ ಹಿಂದಷ್ಟೇ ಶಿವಸೇನೆಗೆ ಸೇರ್ಪಡೆಯಾಗಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಗೋವುಗಳ ಹೆಸರಲ್ಲಿ ಕೇವಲ ರಾಜಕೀಯ ಮಾಡು ತ್ತಿವೆ ಎನ್ನುವುದು ದಲಾಲ್ ವಾದ.