ಟಿಟಿಡಿ ಮಂಡಳಿಯಿಂದ ಭ್ರಷ್ಟಾಚಾರ: ಆರೋಪ
Team Udayavani, May 17, 2018, 6:40 AM IST
ಚೆನ್ನೈ: ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದೇಗುಲದ ಪ್ರಧಾನ ಅರ್ಚಕ ಎ.ವಿ.ರಮಣ ದೀಕ್ಷಿತುಲು ಆರೋಪ ಮಾಡಿದ್ದಾರೆ.
ಚೆನ್ನೈನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಗುಲದ ಪಾವಿತ್ರ್ಯತೆ ಕಾಪಾಡುವಲ್ಲಿ ಆಡಳಿತ ಮಂಡಳಿ ಉತ್ಸಾಹ ತೋರುತ್ತಿಲ್ಲ. ದೇಗುಲದಲ್ಲಿ ಸಂಗ್ರಹಿಸಲಾಗಿರುವ ಮೊತ್ತವನ್ನು ಬೇರೆಡೆ ವರ್ಗಾಯಿಸಲಾಗುತ್ತಿದೆ ಎಂದೂ ಸಂಶಯ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಪ್ರಾಚೀನವಾ ಗಿರುವ ಆಭರಣಗಳನ್ನೂ ಲಪಟಾಯಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
“ವಂಶಪಾರಂಪರ್ಯವಾಗಿ ಅರ್ಚಕ ಹುದ್ದೆ ನಿರ್ವಹಿಸುತ್ತಾ ಬಂದಿದ್ದೇವೆ. 1996ರ ವರೆಗೆ ನಾವೇ ದೇವರ ಆಭರ ಣಗಳ ಉಸ್ತುವಾರಿ ವಹಿಸಿದ್ದೆವು. ಅದಕ್ಕೆ ಸಂಬಂಧಿಸಿದಂತೆ ಸೂಕ್ತವಾದ ದಾಖಲೆಗಳನ್ನೂ ಇರಿಸಿಕೊಂಡಿದ್ದೆವು. ಈಗ ಎಲ್ಲಾ ಆಂಧ್ರಪ್ರದೇಶ ಸರಕಾರವೇ ವಹಿಸಿಕೊಂಡಿದೆ. 22 ವರ್ಷಗಳ ಅವಧಿಯಲ್ಲಿ ಒಂದು ಬಾರಿಯೂ ಆಭರಣಗಳ ಲೆಕ್ಕಾಚಾರ ನಡೆದಿಲ್ಲ. ಅವುಗಳು ಎಲ್ಲಿವೆ?’ ಎಂದು ಪ್ರಶ್ನಿಸಿದ್ದಾರೆ.
ಅವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ನಡೆಯಲಿ ಎಂದು ಒತ್ತಾಯಿಸಿದ ಅವರು, ವೇದಗಳಲ್ಲಿ ಉಲ್ಲೇಖವಾಗಿರುವ ಸಂಪ್ರದಾಯಗಳನ್ನು ಆಡಳಿತ ಮಂಡಳಿ ಗೌರವಿಸುತ್ತಿಲ್ಲ. ವಿಐಪಿ ದರ್ಶನ, ಕೆಲವೊಂದು ಸಂಪ್ರದಾಯಗಳನ್ನು ವಾಣಿಜ್ಯೀಕರಣಗೊಳಿಸಲಾಗಿದೆ ಎಂದು ರಮಣ ದೀಕ್ಷಿತುಲು ಆರೋಪಿಸಿದ್ದಾರೆ.