ದೇಶದಲ್ಲಿ ಕೋವಿಡ್ ಸೋಂಕು ಇನ್ನೂ ಹೋಗಿಲ್ಲ: ಪ್ರಧಾನಿ ಮೋದಿ
Team Udayavani, Apr 10, 2022, 11:00 PM IST
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಇನ್ನೂ ಹೋಗಿಲ್ಲ. ಬಹುರೂಪಿಯಾಗಿರುವ ಅದು ಯಾವಾಗ ಯಾವ ರೂಪದಲ್ಲಾದರೂ ಮತ್ತೆ ಮರುಕಳಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ಜುನಾಗಢ ಜಿಲ್ಲೆಯ ಮಾ ಉಮಿಯಾ ಧಾಮ್ ದೇಗುಲದಲ್ಲಿ ಭಾನುವಾರ ನಡೆದ ಉತ್ಸವದಲ್ಲಿ ವರ್ಚುವಲ್ ಆಗಿ ಮಾತನಾಡಿದ ಅವರು, “ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ 185 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ಸಾರ್ವಜನಿಕರ ಸಹಾಯದಿಂದಲೇ ಈ ಪ್ರಮಾಣದಲ್ಲಿ ಲಸಿಕೆ ಅಭಿಯಾನ ನಡೆಸಲು ಸಾಧ್ಯವಾಗಿದೆ. ಸೋಂಕು ಇನ್ನೂ ಹೋಗದ ಕಾರಣ ಜನರು ಮುನ್ನೆಚ್ಚರಿಕೆ ಬಿಡಬಾರದು’ ಎಂದು ಹೇಳಿದರು.
ಇದೇ ವೇಳೆ ಟ್ವಿಟರ್ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಗ್ಗೆ ಮಾಹಿತಿ ನೀಡಿರುವ ಅವರು, “ಈ ದೇಶವು ಕೃಷಿಕರ ಬಗ್ಗೆ ಹೆಮ್ಮೆಯಿಟ್ಟುಕೊಂಡಿದೆ. ಅವರು ಎಷ್ಟು ಶಕ್ತಿಯುತರಾಗುತ್ತಾರೋ ಭಾರತವು ಅಷ್ಟು ಸಮೃದ್ಧವಾಗುತ್ತದೆ. ಪಿಎಂ ಕಿಸಾನ್ನಂತಹ ಯೋಜನೆಗಳು ಅವರಿಗೆ ಶಕ್ತಿ ತುಂಬುತ್ತಿವೆ’ ಎಂದು ಬರೆದುಕೊಂಡಿದ್ದಾರೆ. ಈವರೆಗೆ 11.3 ಕೋಟಿ ರೈತರಿಗೆ 1.82 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ಅವರ ಖಾತೆಗಳಿಗೆ ಸಂದಾಯ ಮಾಡಿರುವುದಾಗಿಯೂ ಅವರು ತಿಳಿಸಿದ್ದಾರೆ.