ದಿಲ್ಲಿ, ಮುಂಬಯಿಗೆ 3ನೇ ಅಲೆ
Team Udayavani, Dec 31, 2021, 6:30 AM IST
ಹೊಸದಿಲ್ಲಿ: ದಿಲ್ಲಿ ಮತ್ತು ಮುಂಬಯಿಯಲ್ಲಿ ಕೊರೊನಾ ಸೋಂಕಿನ 3ನೇ ಅಲೆ ಆರಂಭವಾಗಿದೆ! ದೇಶದ ಬಹುತೇಕ ರಾಜ್ಯಗಳಿಗೆ ಒಮಿಕ್ರಾನ್ ರೂಪಾಂತರಿಯು ಕಾಲಿಟ್ಟಿರುವಂತೆಯೇ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಪ್ರಸ್ತುತ ಪ್ರಕರಣಗಳ ಸಂಖ್ಯೆಯನ್ನು ಮತ್ತು ಅದು ದ್ವಿಗುಣಗೊಳ್ಳುತ್ತಿರುವ ವೇಗವನ್ನು ನೋಡಿದರೆ, ದಿಲ್ಲಿ ಮತ್ತು ಮುಂಬಯಿಯ ಕನಿಷ್ಠ ಕೆಲವು ಕ್ಲಸ್ಟರ್ಗಳಲ್ಲಿ ಸೋಂಕಿನ 3ನೇ ಅಲೆ ಬಂದಿರುವುದು ಸ್ಪಷ್ಟ ಎಂದು ನಿರ್ಧರಿಸಬಹುದು ಎಂದು ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆ ಸದಸ್ಯ ಡಾ| ರಾಹುಲ್ ಪಂಡಿತ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳ ವಂಶವಾಹಿ ಪರೀಕ್ಷೆಗಳ ವರದಿಗಾಗಿ ನಾವು ಕಾಯುತ್ತಿದ್ದೇವೆ. ಅದರ ವರದಿ ಬಂದರೆ ಒಮಿಕ್ರಾನ್ನ ಪಾಲು ಎಷ್ಟು ಎಂಬುದು ತಿಳಿದುಬರಲಿದೆ. ಅಲ್ಲದೇ ಒಮಿಕ್ರಾನ್ ಮತ್ತು ಡೆಲ್ಟಾದ ಸಮ್ಮಿಶ್ರಣವಾಗಿದೆಯೇ ಎಂಬ ಅನುಮಾನವೂ ಇದೆ ಎಂದೂ ಅವರು ತಿಳಿಸಿದ್ದಾರೆ.
ಶೇ.46 ಹೆಚ್ಚಳ: ಗುರುವಾರ ಮುಂಬಯಿಯಲ್ಲಿ 3671 ಹೊಸ ಕೊರೊನಾವೈರಸ್ ಪ್ರಕರಣಗಳು ದೃಢಪಟ್ಟಿವೆ. ಬುಧವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ.46ರಷ್ಟು ಹೆಚ್ಚಳವಾದಂತಾಗಿದೆ. ಅಷ್ಟೇ ಅಲ್ಲ, ಇದು ಮೇ 5ರ ಬಳಿಕ ದಾಖಲಾದ ಗರಿಷ್ಠ ಪ್ರಕರಣಗಳು. ಮಂಗಳವಾರ ಮುಂಬಯಿಯಲ್ಲಿ 1,377 ಮತ್ತು ಬುಧವಾರ 2,510 ಮಂದಿಗೆ ಸೋಂಕು ದೃಢಪಟ್ಟಿತ್ತು. ಮಹಾರಾಷ್ಟ್ರದಲ್ಲಿ ಗುರುವಾರ 198 ಮಂದಿಗೆ ಒಮಿಕ್ರಾನ್ ಸೋಂಕು ತಗಲಿದೆ. ಮುಂಬಯಿಯೊಂದರಲ್ಲೇ 190 ಮಂದಿಯ ವರದಿ ಪಾಸಿಟಿವ್ ಬಂದಿದೆ. ಇದೇ ವೇಳೆ, ದಿಲ್ಲಿಯಲ್ಲಿ ಗುರುವಾರ 1,313 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಪಾಸಿಟಿವಿಟಿ ದರ ಶೇ.1.73ಕ್ಕೇರಿದೆ.
ನ್ಯೂ ಇಯರ್ ಆಚರಣೆಗೆ ಬ್ರೇಕ್: ಮುಂಬಯಿಯಲ್ಲಿ ಒಮಿಕ್ರಾನ್ನ ವೇಗ ಹೆಚ್ಚುತ್ತಿರುವಂತೆಯೇ ಎಚ್ಚೆತ್ತಿರುವ ಮುಂಬಯಿ ಪೊಲೀಸರು, ಹೊಟೇಲ್, ರೆಸ್ಟೊರೆಂಟ್, ರೆಸಾರ್ಟ್, ಬಾರ್ ಸೇರಿದಂತೆ ಒಳಾಂಗಣ ಅಥವಾ ಹೊರಾಂಗಣದಲ್ಲಿ ಎಲ್ಲೂ ಹೊಸ ವರ್ಷ ಆಚರಣೆ ಮಾಡುವಂತಿಲ್ಲ ಎಂದು ಸೂಚಿಸಿದ್ದಾರೆ. ಬುಧವಾರದಿಂದಲೇ ಅನ್ವಯವಾಗುವಂತೆ ಜ.7ರ ವರೆಗೆ ನಿಷೇಧಾಜ್ಞೆಯನ್ನೂ ಹೇರಲಾಗಿದೆ. ಈ ಮಧ್ಯೆ, ಪಶ್ಚಿಮ ಬಂಗಾಲ ಸರಕಾರವು ಜ.3ರಿಂದ ಯುಕೆ ಹಾಗೂ ಇತರ ಹೈರಿಸ್ಕ್ ದೇಶಗಳಿಂದ ರಾಜ್ಯಕ್ಕೆ ಇರುವ ಎಲ್ಲ ನೇರ ವಿಮಾನಗಳ ಸಂಚಾರವನ್ನು ರದ್ದು ಮಾಡಿ ಗುರುವಾರ ಆದೇಶ ಹೊರಡಿಸಿದೆ.
ಮೊಲ್ನುಪಿರವಿರ್ ಚಿಕಿತ್ಸೆಗೆ 3,000 ರೂ.? :
ಕೊರೊನಾ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ನೀಡಲು ಇತ್ತೀಚೆಗಷ್ಟೇ ಅನುಮತಿ ಪಡೆದ ಮೊಲು°ಪಿರವಿರ್ ಮಾತ್ರೆಯ ಮೂಲಕ ಚಿಕಿತ್ಸೆ ನೀಡಲು ಸುಮಾರು 2 ಸಾವಿರ ರೂ.ಗಳಿಂದ 3 ಸಾವಿರ ರೂ.ಗಳವರೆಗೆ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ 13 ಔಷಧ ತಯಾರಕ ಸಂಸ್ಥೆಗಳಿಗೆ ಈ ಮಾತ್ರೆ ಉತ್ಪಾದಿಸಲು ಡಿಸಿಜಿಐ ಅನುಮತಿ ನೀಡಿದೆ. ನಿಯಮದ ಪ್ರಕಾರ, 5 ದಿನಗಳ ಕಾಲ ದಿನಕ್ಕೆ 2 ಬಾರಿಯಂತೆ 800 ಮಿ.ಗ್ರಾಂ. ಮೊಲು°ಪಿರವಿರ್ ಅನ್ನು ಸೋಂಕಿತರಿಗೆ ನೀಡಲಾಗುತ್ತದೆ. ಈ 5 ದಿನಗಳ ಚಿಕಿತ್ಸೆಗೆ 3 ಸಾವಿರ ರೂ.ವರೆಗೆ ವೆಚ್ಚವಾಗಬಹುದು ಎಂದು ಹೇಳಲಾಗಿದೆ.
ಒಮಿಕ್ರಾನ್ಗೆ ವಿಶ್ವಾದ್ಯಂತ 58 ಬಲಿ :
ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಒಮಿಕ್ರಾನ್ ಸದ್ದು ಮಾಡುತ್ತಿದ್ದು, ಈವರೆಗೆ ಮೃತಪಟ್ಟವರ ಸಂಕ್ಯೆ 58ಕ್ಕೇರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಅವರೇ ಈ ವಿಚಾರ ತಿಳಿಸಿದ್ದಾರೆ.
ಆಕ್ಸಿಜನ್ ಲಭ್ಯತೆ: ಸಚಿವ ಗೋಯಲ್ ಸಭೆ :
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಗುರುವಾರ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನ ಸಭೆ ನಡೆಸಿ, ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆ ಸಾಕಷ್ಟಿರುವಂತೆ ನೋಡಿಕೊಳ್ಳಲು ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ದೇಶಾದ್ಯಂತ ಆಕ್ಸಿಜನ್ ಅಭಾವ ಕಂಡುಬಂದಿತ್ತು. ಈಗ ಮತ್ತೆ ಇದೇ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳುವ ಸಲುವಾಗಿ ಸರಕಾರ ಸಿದ್ಧತೆ ನಡೆಸಿದೆ.
ಡೆಲ್ಟಾವನ್ನು ಹಿಂದಿಕ್ಕಲಿದೆ ಒಮಿಕ್ರಾನ್? :
ಸದ್ಯದಲ್ಲೇ ಒಮಿಕ್ರಾನ್ ರೂಪಾಂತರಿಯು ಡೆಲ್ಟಾವನ್ನು ಹಿಂದಿಕ್ಕಿ ಅತ್ಯಂತ ಪ್ರಬಲ ರೂಪಾಂತರಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಸಿಂಗಾಪುರದ ತಜ್ಞರು ಅಂದಾಜಿಸಿದ್ದಾರೆ. ಒಮಿಕ್ರಾನ್ ಹಬ್ಬುತ್ತಿರುವ ವೇಗ ನೋಡಿದರೆ, ಡೆಲ್ಟಾವನ್ನು ಮೀರಿಸುವುದು ಖಚಿತ ಎಂದು ಅವರು ಹೇಳಿದ್ದಾರೆ.
ದಿಲ್ಲಿಯಲ್ಲಿ ಪರೀಕ್ಷಿಸಲಾದ ಮಾದರಿಗಳ ಪೈಕಿ ಶೇ.46ರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಈ ಸೋಂಕಿತರಲ್ಲಿ ಯಾರೂ ವಿದೇಶಗಳಿಂದ ಬಂದವರಲ್ಲ. ಇದು ಒಮಿಕ್ರಾನ್ ರೂಪಾಂತರಿಯು ಸಮುದಾಯಕ್ಕೆ ಹಬ್ಬಿರುವುದಕ್ಕೆ ಸಾಕ್ಷಿ. -ಸತ್ಯೇಂದ್ರ ಜೈನ್, ದಿಲ್ಲಿ ಆರೋಗ್ಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು