ಶ್ರೀನಗರ: ಗ್ರೆನೇಡ್ ದಾಳಿ: ಸಿಆರ್ಪಿಎಫ್ ಸಿಬ್ಬಂದಿ ಮೇಲೆ ಎಸೆತ
ಒಬ್ಬ ಯೋಧಗೆ ಗಾಯ
Team Udayavani, Aug 14, 2022, 12:52 AM IST
ಶ್ರೀನಗರ: ದೇಶದಲ್ಲಿ ಸ್ವಾತಂತ್ರ್ಯದ ಅಮೃತೋ ತ್ಸವ ಸಂಭ್ರ ಮಾಚರಣೆ ಆರಂಭ ವಾಗಿರುವ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಎದುರಾಗಿದೆ.
ಶನಿವಾರ ಇಲ್ಲಿನ ಈದ್ಗಾ ಪ್ರದೇ ಶ ದಲ್ಲಿ ಉಗ್ರರು ಸಿಆರ್ಪಿಎಫ್ ಯೋಧರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಸಿಆರ್ಪಿಎಫ್ ಯೋಧ ಗಾಯಗೊಂಡಿದ್ದಾರೆ.
ಶ್ರೀನಗರ ಪೊಲೀಸರ ಪ್ರಕಾರ, ಈದ್ಗಾ ಪ್ರದೇಶದಲ್ಲಿನ ಅಲಿ ಜನ್ ರಸ್ತೆಯಲ್ಲಿ ಉಗ್ರರು ಯೋಧರ ಮೇಲೆ ಬಾಂಬ್ ಎಸೆದ ಪರಿಣಾಮ ಸ್ಫೋಟ ಉಂಟಾಗಿ ಒಬ್ಬ ಸಿಬಂದಿ ಗಾಯಗೊಂಡರು ಎಂದಿದ್ದಾರೆ.
ಗ್ರೆನೇಡ್ ಎಸೆದ ಉಗ್ರರಿಗಾಗಿ ಶೋಧ ಕಾರ್ಯ ನಡೆದಿದ್ದು, ಸದ್ಯದಲ್ಲೇ ಬಂಧಿಸಲಾಗುತ್ತದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಸೇನೆಯೇ ಗುರಿ
ಕಳೆದ ಗುರುವಾರವಷ್ಟೇ ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿನ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದು, ನಾಲ್ವರು ಯೋಧರು ಹುತಾತ್ಮರಾಗಿದ್ದರು. ಸೇನೆಯೂ ಮರು ಕಾರ್ಯಾ ಚರಣೆ ನಡೆಸಿ ಇಬ್ಬರು ಉಗ್ರರನ್ನು ಕೊಂದು ಹಾಕಿತ್ತು.
2019ರ ಪುಲ್ವಾಮಾ ದಾಳಿ ಬಳಿಕ ನಡೆದ ಅತ್ಯಂತ ದೊಡ್ಡ ದಾಳಿ ಇದಾಗಿತ್ತು. ಅಲ್ಲದೆ ಸೇನಾ ಕ್ಯಾಂಪ್ ಅನ್ನು ಗುರಿಯಾಗಿಸಿಕೊಂಡೇ ದಾಳಿ ಮಾಡಿ, ಹೆಚ್ಚು ಸಾವು ನೋವುಗಳು ಸಂಭವಿಸುವಂತೆ ಮಾಡುವುದು ಉಗ್ರರ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿವೆ. ಯೋಧರು ಹಾಕಿಕೊಳ್ಳುವ ರಕ್ಷಾ ಕವಚವನ್ನು ಛಿದ್ರ ಮಾಡುವ ಗುಂಡುಗಳನ್ನು ಉಗ್ರರು ಬಳಸುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಆದರೆ ಯೋಧರು ಹೆಚ್ಚು ಮುನ್ನೆಚ್ಚರಿಕೆ ವಹಿಸಿದ್ದರಿಂದಾಗಿ ದೊಡ್ಡ ಮಟ್ಟದ ಅಪಾಯ ತಪ್ಪಿದೆ ಎಂದು ಹೇಳಲಾಗಿದೆ.