ಫೋನಿ ಚಂಡಮಾರುತ : ಒಡಿಶಾದ 11 ಜಿಲ್ಲೆಗಳಲ್ಲಿ ಚು.ನೀತಿ ಸಂಹಿತೆ ತೆರವು: ಆಯೋಗ
Team Udayavani, May 1, 2019, 11:30 AM IST
ಹೊಸದಿಲ್ಲಿ : ಇದೇ ಶುಕ್ರವಾರದೊಳಗೆ ವಿನಾಶಕಾರಿ ಫೊನಿ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿರುವುದನ್ನು ಅನುಸರಿಸಿ ಚುನಾವಣಾ ಆಯೋಗ ಇಂದು ಬುಧವಾರ, ಫೊನಿ ಚಂಡಮಾರುತದಿಂದ ಬಾಧಿತವಾಗಲಿರುವ ಒಡಿಶಾದ 11 ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆಯನ್ನು ತೆರವುಗೊಳಿಸಿದೆ.
ಮಾದರಿ ನೀತಿ ಸಂಹಿತೆ ತೆರವಾಗಿರುವ ಜಿಲ್ಲೆಗಳೆಂದರೆ ಪುರಿ, ಜಗತ್ಸಿಂಗ್ಪುರ, ಕೇಂದ್ರಪಾರಾ,ಭದ್ರಕ್, ಬಾಲಸೋರ್, ಮಯೂರ್ ಭಂಜ್, ಗಜಪತಿ, ಗಂಜಾಮ್, ಖೋರ್ಧಾ, ಕಟಕ್ ಮತ್ತು ಜಾಜ್ಪುರ.
ಫೊನಿ ಚಂಡಮಾರುತದಿಂದ ಈ ಜಿಲ್ಲೆಗಳು ಬಾಧಿತವಾದಲ್ಲಿ ರಕ್ಷಣಾ ಕಾರ್ಯ, ಪರಿಹಾರ, ಪುನರ್ ಸ್ಥಾಪನೆ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಅದಕ್ಕೆ ಚುನಾವಣಾ ನೀತಿ ಸಂಹಿತೆಯಿಂದ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಆಯೋಗ ಈ ಕ್ರಮ ತೆಗೆದುಕೊಂಡಿದೆ.