ಭಾಷಣ ವೇಳೆ ಆಹಾರ ವಿತರಣೆ: ರಾಷ್ಟ್ರಪತಿಗೆ ಕಿರಿಕಿರಿ
Team Udayavani, Dec 28, 2017, 7:00 AM IST
ಅಮರಾವತಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣ ಮಾಡುವ ವೇಳೆ ಆಯೋಜಕರು ಅವರಿಗೆ ಇರುಸು ಮುರುಸಾಗುವಂತೆ ನಡೆದುಕೊಂಡ ಘಟನೆ ಇಲ್ಲಿ ನಡೆದ ಭಾರತೀಯ ಅರ್ಥಶಾಸ್ತ್ರ ಸಹಯೋಗ ಸಮ್ಮೇಳನದಲ್ಲಿ ನಡೆಯಿತು. ಇದರಿಂದಾಗಿ ಅವರು ಭಾಷಣದ ಮಧ್ಯೆ ವಿರಾಮ ತೆಗೆದುಕೊಳ್ಳಬೇಕಾಯಿತು.
ಕಾರ್ಯಕ್ರಮದಲ್ಲಿ ಅವರು ಭಾರತೀಯ ಆರ್ಥಿಕತೆ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಆಯೋಜಕರು ಸಭಿಕರಿಗೆ ಆಹಾರ ಪೊಟ್ಟಣಗಳನ್ನು ಹಂಚಲಾರಂಭಿಸಿದರು. ಅಷ್ಟರಲ್ಲಿ, ಅಲ್ಲಿದ್ದವರೆಲ್ಲ ತಮ್ಮ ಸೀಟುಗಳಿಂದ ಎದ್ದು ಆಹಾರ ಪೊಟ್ಟಣವನ್ನು ತೆಗೆದುಕೊಳ್ಳಲು ಧಾವಿಸಿದರು. ಇದರಿಂದ ಕಸಿವಿಸಿಗೊಂಡ ಕೋವಿಂದ್, ತಮ್ಮ ಭಾಷಣವನ್ನು 2 ನಿಮಿಷ ನಿಲ್ಲಿಸಿದರು. ಅಲ್ಲದೆ, ಅರ್ಥಶಾಸ್ತ್ರ ಪ್ರಪಂಚದಲ್ಲಿ ಏನಾಗುತ್ತಿದೆಯೋ ಅದು ಈ ಸಭಾಂಗಣದಲ್ಲೂ ಆಗುತ್ತಿದೆ. ಆಹಾರ ಮುಖ್ಯ ಹೌದು ಆದರೆ ಅದನ್ನು ಯಾವಾಗ ಹಂಚಬೇಕು ಎಂಬ ಅರಿವು ನಿಮಗಿರಬೇಕು ಎಂದರು. ಜತೆಗೆ, ದಯವಿಟ್ಟು ನನ್ನ ಭಾಷಣ ಮುಗಿಯುವವರೆಗಾದರೂ ಆಹಾರ ವಿತರಣೆ ನಿಲ್ಲಿಸುತ್ತೀರಾ ಎಂದು ಕೇಳಿದರು.