ಸೆಮಿಫೈನಲ್ಗೆ ದಿನ ನಿಗದಿ
Team Udayavani, Oct 7, 2018, 6:37 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆಗೂ ಮೊದಲಿನ “ಸೆಮಿಫೈನಲ್’ ಎಂದೇ ಭಾವಿಸಲಾಗಿರುವ ಪಂಚ ರಾಜ್ಯಗಳ ಚುನಾವಣೆಗೆ ದಿನ ನಿಗದಿಯಾಗಿದೆ. ರಾಜಸ್ಥಾನ, ತೆಲಂಗಾಣದಲ್ಲಿ ಡಿ.7ಕ್ಕೆ ಮತದಾನ ನಡೆಯಲಿದ್ದರೆ, ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ನ.28ಕ್ಕೆ ಜನ ಹಕ್ಕು ಚಲಾಯಿಸಲಿದ್ದಾರೆ. ಆದರೆ ನಕ್ಸಲ್ ಪೀಡಿತ ರಾಜ್ಯವಾಗಿರುವ ಛತ್ತೀಸ್ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನ.12ಕ್ಕೆ ಮೊದಲ ಹಂತ, ನ.20ಕ್ಕೆ ಎರಡನೇ ಹಂತದ ಮತದಾನ ನಡೆಯಲಿದೆ. ಈ ಎಲ್ಲ ರಾಜ್ಯಗಳ ಫಲಿತಾಂಶ
ಡಿ. 11ರಂದು ಹೊರಬೀಳಲಿದೆ.
ಇದರ ಜತೆಗೆ ನ. 3 ರಂದು ಕರ್ನಾಟಕ ದಲ್ಲಿನ ಮೂರು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನ ಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳ ಫಲಿತಾಂಶ ನ. 6ಕ್ಕೆ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣ ಆಯೋಗದ ಮುಖ್ಯ ಆಯುಕ್ತ ಒ.ಪಿ. ರಾವತ್ ತಿಳಿಸಿದ್ದಾರೆ. ಶನಿವಾರ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಿನಾಂಕ ಘೋಷಣೆ ಮಾಡಿದರು.
ಪತ್ರಿಕಾಗೋಷ್ಠಿ ವಿವಾದ
ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಸಂದರ್ಭದಲ್ಲಿ ಆಗಿದ್ದ ವಿವಾದದಂತೆಯೇ ಇಲ್ಲೂ ಬೇರೊಂದು ರೀತಿಯ ವಿವಾದವಾಗಿದೆ. ಶನಿವಾರ ಮಧ್ಯಾಹ್ನ 12.30ಕ್ಕೆ ಪತ್ರಿಕಾಗೋಷ್ಠಿ ನಡೆಸುವುದಾಗಿ ಹೇಳಿದ್ದ ಕೇಂದ್ರ ಚುನಾವಣ ಆಯೋಗ ದಿಢೀರನೇ ಸಮಯ ಬದಲಿಸಿ 3 ಗಂಟೆಗೆ ನಿಗದಿ ಮಾಡಿತು. ಇದನ್ನು ಪ್ರಶ್ನಿಸಿದ ಕಾಂಗ್ರೆಸ್, ರಾಜಸ್ಥಾನದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ಹಿನ್ನೆಲೆಯಲ್ಲಿ ಈ ಸಮಯ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿತು. ಇದಕ್ಕೆ ತಿರುಗೇಟು ಕೊಟ್ಟ ಮುಖ್ಯ ಚುನಾವಣ ಆಯುಕ್ತ ಒ.ಪಿ.ರಾವತ್ ಅವರು, ರಾಜಕಾರಣಿಗಳು ಎಲ್ಲದರಲ್ಲೂ ರಾಜಕೀಯ ಹುಡುಕುತ್ತಾರೆ ಎಂದರು.
ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿ
ಇತ್ತೀಚಿನ ವರ್ಷಗಳಲ್ಲಿ ರಾಜಸ್ಥಾನದಲ್ಲಿ ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷ ಮತ್ತೆ ಅಧಿಕಾರಕ್ಕೆ ಏರಿದ ಉದಾಹರಣೆಗಳಿಲ್ಲ. ಒಮ್ಮೆ ಕಾಂಗ್ರೆಸ್ ಗೆದ್ದರೆ, ಮತ್ತೂಮ್ಮೆ ಬಿಜೆಪಿ ಗೆಲ್ಲುತ್ತಿದೆ. ಹೀಗಾಗಿ ಈ ರಾಜ್ಯದ ಚುನಾವಣೆ ಭಾರೀ ಕುತೂಹಲ ಕೆರಳಿಸಿರುತ್ತದೆ. ಸಿಎಂ ವಸುಂಧರಾ ರಾಜೇ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ನಡುವೆ ನೇರ ಹಣಾಹಣಿ ಇದೆ. ಒಟ್ಟಾರೆ 200 ಶಾಸಕರ ಬಲವಿರುವ ಈ ವಿಧಾನಸಭೆಯಲ್ಲಿ ಸದ್ಯ ಬಿಜೆಪಿ 163 ಸ್ಥಾನಗಳಲ್ಲಿ ಗೆದ್ದು ಅಧಿಕಾರದಲ್ಲಿದೆ. ವಿಪಕ್ಷ ಕಾಂಗ್ರೆಸ್ ಕೇವಲ 21 ಸ್ಥಾನಗಳನ್ನು ಹೊಂದಿದೆ.
ತೆಲಂಗಾಣದಲ್ಲಿ ಕೆಸಿಆರ್ ಪ್ರಭಾವವೇ ಹೆಚ್ಚು
ಇದು ಹೊಸ ರಾಜ್ಯವಾಗಿದ್ದು, ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಪಕ್ಷ ಅಧಿಕಾರದಲ್ಲಿದೆ. ಲೆಕ್ಕಾಚಾರದಲ್ಲಿ ಈ ರಾಜ್ಯದ ಚುನಾವಣೆ 2019ರ ಲೋಕಸಭೆ ಚುನಾವಣೆ ವೇಳೆಗೆ ನಡೆಯಬೇಕಿತ್ತು. ಆದರೆ ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜನೆ ಮಾಡಿರುವುದರಿಂದ ಈಗ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಪ್ರಭಾವ ಹೆಚ್ಚಿದೆ. 119 ಶಾಸಕ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಕಳೆದ ಬಾರಿ ಟಿಆರ್ಎಸ್ 90ರಲ್ಲಿ ಗೆದ್ದಿತ್ತು. ಕಾಂಗ್ರೆಸ್ 13ರಲ್ಲಿ ಮಾತ್ರ ಜಯಗಳಿಸಿತ್ತು.
ಕಾಂಗ್ರೆಸ್ ಮುಷ್ಟಿಯಲ್ಲಿರುವ ಮಿಜೋರಾಂ
ಈಶಾನ್ಯ ಭಾಗದಲ್ಲಿರುವ ಈ ರಾಜ್ಯ ಸದ್ಯ ಕಾಂಗ್ರೆಸ್ ವಶದಲ್ಲಿದೆ. 1989ರಲ್ಲಿ ಈ ರಾಜ್ಯ ಉದಯವಾಗಿದ್ದು, ಆಗಿನಿಂದ ಈಗಿನವರೆಗೆ ಎರಡು ಬಾರಿ ಬಿಟ್ಟರೆ ಉಳಿದೆಲ್ಲ ಬಾರಿ ಕಾಂಗ್ರೆಸ್ ಆಡಳಿತ ನಡೆಸಿದೆ. ಕಾಂಗ್ರೆಸ್ಗೆ ಪ್ರಮುಖ ಎದುರಾಳಿಯಾಗಿರುವುದು ಮಿಜೋ ನ್ಯಾಶನಲ್ ಫ್ರಂಟ್ ಮಾತ್ರ. ಇಲ್ಲಿ ಬಿಜೆಪಿ ಪ್ರಾಬಲ್ಯವಿಲ್ಲ. ಅಲ್ಲದೆ 1989ರಿಂದ ನಾಲ್ಕು ಬಾರಿ ಕಾಂಗ್ರೆಸ್ನ ಲಾಲ್ ಥಾನ್ಹಾವ್ಲಾ ಅವರೇ ಸಿಎಂ ಆಗಿದ್ದಾರೆ. ಮಧ್ಯೆ 1998ರಿಂದ 2008ರ ವರೆಗೆ ಮಿಜೋ ನ್ಯಾಶನಲ್ ಫ್ರಂಟ್ನ ಝೋರಾಮ್ಥಂಗಾ ಅವರು ಮುಖ್ಯಮಂತ್ರಿಯಾಗಿದ್ದರು.
ಮಧ್ಯಪ್ರದೇಶ: ಮಧ್ಯಪ್ರವೇಶಕ್ಕೆ ಕಾಂಗ್ರೆಸ್ ಯತ್ನ 2003ರಿಂದಲೂ ಈ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ದಿಗ್ವಿಜಯ್ ಸಿಂಗ್ ಸರಕಾರಕ್ಕೆ ಸೋಲಿನ ರುಚಿ ತೋರಿಸಿ ಅಧಿಕಾರಕ್ಕೇರಿದ್ದ ಉಮಾಭಾರತಿ ಅವರು ಪ್ರಕರಣವೊಂದರ ಸಂಬಂಧ ರಾಜೀನಾಮೆ ನೀಡಿದ್ದರು. ಬಳಿಕ ಸಿಎಂ ಆದ ಶಿವರಾಜ್ ಸಿಂಗ್ ಚೌಹಾಣ್ ಅವರು ಇಲ್ಲಿಯವರೆಗೂ ಗೆಲುವಿನ ಅಶ್ವಮೇಧ ಯಾಗ ಮುಂದುವರಿಸಿಕೊಂಡು ಬಂದಿದ್ದಾರೆ. ಈ ಬಾರಿ ಪ್ರಬಲ ಸ್ಪರ್ಧೆಯೊಡ್ಡುವ ಗುರಿಯೊಂದಿಗೆ ಕಾಂಗ್ರೆಸ್ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಇತ್ತೀಚೆಗಷ್ಟೇ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಸಿದ್ದ ಆತ್ಮವಿಶ್ವಾಸವೂ ಕಾಂಗ್ರೆಸ್ನಲ್ಲಿದೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಗಲಿದೆಯೇ ಎಂಬುದನ್ನು ನೋಡಬೇಕಿದೆ.
ಛತ್ತೀಸ್ಗಢ: ಹ್ಯಾಟ್ರಿಕ್ ಸಿಂಗ್ಗೆ ಜೋಗಿ ಸ್ಪರ್ಧೆ
ಈ ರಾಜ್ಯ ಉದಯವಾಗಿದ್ದು 2000ನೇ ಇಸವಿಯಲ್ಲಿ. ಆಗ ಅಜಿತ್ ಜೋಗಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತ್ತು. ಆದರೆ ಈ 2003ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಮಣ್ ಸಿಂಗ್ ಅವರು ಗೆದ್ದು ಸಿಎಂ ಆದರು. ಅಲ್ಲಿಂದ ಇಲ್ಲಿಯವರೆಗೆ ನಡೆದ ಮೂರೂ ಚುನಾವಣೆಗಳಲ್ಲೂ ಬಿಜೆಪಿಯೇ ಗೆದ್ದಿದೆ. ಈಗಾಗಲೇ ಹ್ಯಾಟ್ರಿಕ್ ಸಾಧನೆ ಮಾಡಿರುವ ಬಿಜೆಪಿಯನ್ನು ಮಣಿಸಲು ಅಜಿತ್ ಜೋಗಿ ನೇತೃತ್ವದ ಜನತಾ ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಇಲ್ಲಿ ಕಾಂಗ್ರೆಸ್ಗೆ ಅಜಿತ್ ಜೋಗಿ ಅವರೂ ಪ್ರತಿಸ್ಪರ್ಧಿಯಾಗಿದ್ದಾರೆ.
ರಾಜ್ಯದಲ್ಲಿ ನ.3ಕ್ಕೆ ಉಪಚುನಾವಣೆ
ಪಂಚ ರಾಜ್ಯ ಚುನಾವಣೆ ದಿನಾಂಕದ ಜತೆಗೆ ಕೇಂದ್ರ ಚುನಾವಣ ಆಯೋಗವು ಕರ್ನಾಟಕದ ಐದು ಸ್ಥಾನಗಳ ಉಪಚುನಾವಣೆಗೂ ದಿನಾಂಕ ಘೋಷಣೆ ಮಾಡಿದೆ. ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನ.3 ರಂದು ಉಪಚುನಾವಣೆ ನಡೆಯಲಿದ್ದು, ನ. 6ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ವಿಚಿತ್ರ ವೆಂದರೆ ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ಮೂರರಲ್ಲಿ ಗೆದ್ದವರು ಕೇವಲ ಐದಾರು ತಿಂಗಳಿಗೆ ಮಾತ್ರ ಸಂಸದರಾಗಿ ಇರಬೇಕಾಗುತ್ತದೆ.
ಯಡಿಯೂರಪ್ಪ ಅವರ ರಾಜೀನಾಮೆ ಯಿಂದ ತೆರವಾದ ಶಿವಮೊಗ್ಗ, ಶ್ರೀರಾಮುಲು ರಾಜೀನಾಮೆಯಿಂದ ತೆರವಾಗಿದ್ದ ಬಳ್ಳಾರಿ ಮತ್ತು ಪುಟ್ಟರಾಜು ರಾಜೀನಾಮೆಯಿಂದ ತೆರವಾಗಿದ್ದ ಮಂಡ್ಯ ಲೋಕಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇನ್ನು ಎರಡು ವಿಧಾನ ಸಭೆ ಕ್ಷೇತ್ರಗಳಲ್ಲಿ ಗೆದ್ದಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ್ದರಿಂದಾಗಿ ರಾಮನಗರ ಮತ್ತು ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದಾಗಿ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೂ ಅಂದೇ ಉಪ ಚುನಾವಣೆ ನಡೆಯಲಿದೆ.
ಕರ್ನಾಟಕ ಉಪಚುನಾವಣೆ
ಲೋಕಸಭಾ ಕ್ಷೇತ್ರ ಶಿವಮೊಗ್ಗ, ಬಳ್ಳಾರಿ (ಎಸ್ಟಿ), ಮಂಡ್ಯ
ವಿಧಾನಸಭಾ ಕ್ಷೇತ್ರ ರಾಮನಗರ, ಜಮಖಂಡಿ
ನಾಮಪತ್ರ ಸಲ್ಲಿಕೆಗೆ ಕಡೇ ದಿನ – ಅ.16
ಅ.17 ಪರಿಶೀಲನೆ
ಅ.20 ವಾಪಸಾತಿ
ನ.3 ಮತದಾನ ದಿನ
ನ.6 ಮತ ಎಣಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ