Chhattisgarh ಸುಕ್ಮಾದಲ್ಲಿ ಎನ್ಕೌಂಟರ್: ಇಬ್ಬರು ನಕ್ಸಲರು ಹತ, ಮುಂದುವರೆದ ಕಾರ್ಯಾಚರಣೆ
Team Udayavani, Sep 5, 2023, 1:07 PM IST
ಸುಕ್ಮಾ: ಛತ್ತೀಸ್ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ.
ಪೊಲೀಸ್ ಅಧಿಕಾರಿಗಳು ಮಂಗಳವಾರ ಈ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಚಿಂತಗುಫಾ ಪೊಲೀಸ್ ಠಾಣಾ ವ್ಯಾಪ್ತಿಯ ತಡಮೆಟ್ಲಾ ಮತ್ತು ದುಲೆಡ್ ಗ್ರಾಮಗಳ ಅರಣ್ಯದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ ವೇಳೆ ಜಾಗರಗುಂದ ಪ್ರದೇಶ ಸಮಿತಿಯ ಸೋಧಿ ದೇವ ಮತ್ತು ರಾವ ದೇವ ಎಂಬ ಇಬ್ಬರು ನಕ್ಸಲರನ್ನು ಕೊಂದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಇಬ್ಬರೂ ನಕ್ಸಲೀಯರ ತಲೆಗೆ ತಲಾ 1 ಲಕ್ಷ ರೂಪಾಯಿ ಬಹುಮಾನವನ್ನು ಪೊಲೀಸರು ಘೋಷಿಸಿದ್ದರು ಎನ್ನಲಾಗಿದೆ.
ಭದ್ರತಾ ಪಡೆಗಳ ಮೇಲೆ ಹೊಂಚುದಾಳಿ:
ತಡಮೆಟ್ಲಾ ಮತ್ತು ದುಲೆಡ್ ಗ್ರಾಮಗಳ ಅರಣ್ಯದಲ್ಲಿ ಜಾಗರಗುಂದ ಪ್ರದೇಶ ಸಮಿತಿಯ 10-12 ನಕ್ಸಲೀಯರು ಇರುವ ಬಗ್ಗೆ ಮಾಹಿತಿಯ ಮೇರೆಗೆ ಡಿಆರ್ಜಿ, ಜಿಲ್ಲಾ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳ ಜಂಟಿ ತಂಡವನ್ನು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಗೆ ಇಳಿದ ತಂಡದ ಮೇಲೆ ನಕ್ಸಲರ ತಂಡ ಗುಂಡಿನ ದಾಳಿ ನಡೆಸಿದೆ ಈ ವೇಳೆ ಭಧ್ರತಾ ಪಡೆ ಪ್ರತಿ ದಾಳಿ ನಡೆಸಿದೆ ಪರಿಣಾಮ ಇಬ್ಬರು ಪ್ರಮುಖ ನಕ್ಸಲ್ ನಾಯಕರು ಹತರಾಗಿದ್ದಾರೆ ಜೊತೆಗೆ ಅವರ ಬಳಿಯಿದ್ದ ಡಬಲ್ ಬ್ಯಾರೆಲ್ ರೈಫಲ್ ಮತ್ತು ಪಿಸ್ತೂಲ್ ವಶಕ್ಕೆ ಪಡೆದುಕೊಂಡು ಮತ್ತೆ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: BIG NEWS; ದೇಶದ ಹೆಸರು ಬದಲಾವಣೆಗೆ ಮುಂದಾಯಿತಾ ಕೇಂದ್ರ? ವಿಶೇಷ ಅಧಿವೇಶನದ ಅಜೆಂಡಾ ಬಯಲು