ಅಧಿಕಾರದ ಮದವೇರಿದೆ: ಸಿಎಂ ಕೇಜ್ರಿವಾಲ್ ವಿರುದ್ಧ ಅಣ್ಣಾ ಹಜಾರೆ ಕಿಡಿ
Team Udayavani, Aug 30, 2022, 10:58 PM IST
ಹೊಸದಿಲ್ಲಿ: ದಿಲ್ಲಿ ಸರಕಾರದ ಹೊಸ ಅಬಕಾರಿ ನೀತಿ ವಿರುದ್ಧ ಹರಿಹಾಯ್ದಿರುವ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ, “ಸಿಎಂ ಕೇಜ್ರಿವಾಲ್ ಅವರಿಗೆ ಅಧಿಕಾರದ ಮದ ತಲೆಗೆ ಹತ್ತಿದೆ’ ಎಂದು ಕಿಡಿಕಾರಿದ್ದಾರೆ.
ಕೇಜ್ರಿವಾಲ್ರಿಗೆ ಪತ್ರ ಬರೆದಿರುವ ಹಜಾರೆ, “ಹೊಸ ನೀತಿಯು ಮದ್ಯ ಮಾರಾಟ, ಸೇವನೆಗೆ ಉತ್ತೇಜನ ನೀಡಲಿದೆ. ಭ್ರಷ್ಟಾಚಾರಕ್ಕೆ ಅವಕಾಶ ಕೊಡಲಿದೆ. ನೀವೇ ಬರೆದ ಸ್ವರಾಜ್ ಕೃತಿಯಲ್ಲಿ ಮದ್ಯ ನಿಷೇಧದ ಕುರಿತು ಒಲವು ವ್ಯಕ್ತಪಡಿಸಿದ್ದಿರಿ. ಸಿಎಂ ಹುದ್ದೆಗೇರಿದ ಮೇಲೆ ನೀವು ಅಧಿಕಾರದ ಮತ್ತಲ್ಲಿ ತೇಲುತ್ತಿದ್ದೀರಿ’ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್, “ಸಿಸೋಡಿಯಾ ವಿರುದ್ಧದ ಪ್ರಕರಣದಲ್ಲಿ ಸಿಬಿಐಗೆ ಏನೂ ಸಿಗಲಿಲ್ಲ. ಹೀಗಾಗಿ ಬಿಜೆಪಿ ಈಗ ಹಜಾರೆ ಅವರನ್ನು ಬಳಸಿಕೊಂಡು ನಮ್ಮ ಸರಕಾರ ವನ್ನು ಟಾರ್ಗೆಟ್ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.
ನನಗೆ ಕ್ಲೀನ್ಚಿಟ್: ಇದೇ ವೇಳೆ ಮಂಗಳವಾರ ನನ್ನ ಲಾಕರ್ ಸಿಬಿಐ ಪರಿಶೀಲಿಸಿದ್ದು, ಅವರಿಗೆ ಅಲ್ಲೇನೂ ಸಿಕ್ಕಿಲ್ಲ, ಹೀಗಾಗಿ ಅನೌಪ ಚಾರಿಕವಾಗಿ ಸಿಬಿಐ ನನಗೆ ಕ್ಲೀನ್ಚಿಟ್ ನೀಡಿದೆ ಎಂದು ಡಿಸಿಎಂ ಸಿಸೋಡಿಯಾ ಹೇಳಿದ್ದಾರೆ. ಆಪ್ ವಿರುದ್ಧ ಕಿಡಿಕಾರಿರುವ ಬಿಜೆಪಿ, “ಶರಾಬು ಮತ್ತು ಶಿಕ್ಷಣ ಹಗರಣವು ದೆಹಲಿಯ ಭ್ರಷ್ಟಾಚಾರದ ಅವಳಿ ಕಟ್ಟಡಗಳಾಗಿವೆ’ ಎಂದಿದೆ.